ಮೈಸೂರಿನಲ್ಲಿ ನಾಪತ್ತೆಯಾದವನ ಶವ ಪತ್ತೆ : ಕೊಲೆ ಶಂಕೆ
ಮೈಸೂರು, ಜನವರಿ 16 : ಕೆಲಸಕ್ಕೆಂದು ತೆರಳಿದವನು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ಬಳಿ ಶವವಾಗಿ ಪತ್ತೆಯಾದ ಘಟನೆ ನಡೆದಿದ್ದು, ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮೈಸೂರಿನ ಶಾಂತಿನಗರ ನಿವಾಸಿ ಸಯ್ಯದ್ ಸಾಧಿಕ್(22) ಎಂಬಾತನೆ ಶವವಾಗಿ ಪತ್ತೆಯಾದ ವ್ಯಕ್ತಿ. ಈತ ವೃತ್ತಿಯಲ್ಲಿ ಕಾರ್ಪೆಂಟರ್, ಕೆ.ಆರ್.ಪೇಟೆಗೆ ನಿತ್ಯವೂ ಕೆಲಸಕ್ಕೆ ಹೋಗುತ್ತಿದ್ದ. ಜನವರಿ 10 ತಾರೀಖು ಕೆಲಸಕ್ಕೆ ತೆರಳಿದವನು ಮತ್ತೆ ಮನೆಗೆ ವಾಪಸ್ ಬಂದಿರಲಿಲ್ಲ. ಜನವರಿ 11ರಂದು ಈತ ನಾಪತ್ತೆಯಾದ ಕುರಿತು ಉದಯಗಿರಿಠಾಣೆಯಲ್ಲಿ ಮನೆಯವರು ದೂರು ದಾಖಲಿಸಿದ್ದರು.
ಜನವರಿ 13ಕ್ಕೆ ಶ್ರೀರಂಗಪಟ್ಟಣ ಬಳಿ ಇರುವ ಪಶ್ಚಿಮವಾಹಿನಿಯ ಸಮೀಪದ ಚಂದ್ರವನದ ಬಳಿ ಶವವೊಂದು ಪತ್ತೆಯಾಗಿತ್ತು. ಅದನ್ನು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಈ ಕುರಿತು ಶ್ರೀರಂಗಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಆ ಶವ ಸಯ್ಯದ್ ಸಾಧಿಕ್ ನದ್ದು ಎನ್ನಲಾಗಿದೆ. ಕತ್ತು ಹಾಗೂ ಮುಖದ ಮೇಲೆಲ್ಲ ಗಾಯದ ಗುರುತುಗಳು ಕಂಡು ಬಂದಿದೆ ಎನ್ನಲಾಗಿದೆ.
ಈತ ಒಂದು ಹುಡುಗಿಯನ್ನು ಪ್ರೇಮಿಸುತ್ತಿದ್ದ, ಈ ಕುರಿತು ಗಲಾಟೆಯೂ ನಡೆದಿತ್ತು. ಇದರಿಂದ ಮನೆಯವರು ತಮ್ಮ ಮಗನನ್ನು ಯಾರೋ ಕೊಲೆಗೈದಿದ್ದಾರೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಶ್ರೀರಂಗಪಟ್ಟಣ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತೀವ್ರ ತನಿಖೆಗೆ ಮುಂದಾಗಿದ್ದಾರೆ.
ಮತ್ತೆ ಸರಗಳ್ಳತನ : ಮಹಿಳೆಯ ಸರ ಕಸಿದು ಪರಾರಿ
ಮೈಸೂರಿನಲ್ಲಿ ಹಲವು ದಿನಗಳಿಂದ ಸರಗಳ್ಳತನ ಸುದ್ದಿಯಲ್ಲಿರಲಿಲ್ಲ. ಇದೀಗ ಮತ್ತೆ ಸರಗಳ್ಳತನ ಜೀವ ಪಡೆದುಕೊಂಡಿದ್ದು, ಭಾನುವಾರ ಬೆಳಿಗ್ಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೋರ್ವರ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.[ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆರಡು ಸರಗಳ್ಳತನ]
ಮೈಸೂರಿನ ತಿಲಕ್ ನಗರದ 2ನೇ ಮುಖ್ಯರಸ್ತೆಯಲ್ಲಿನ 2ನೇ ಕ್ರಾಸ್ ನಿವಾಸಿ ಉಷಾ (58) ಸರ ಕಳೆದುಕೊಂಡಿರುವ ಮಹಿಳೆ. ಭಾನುವಾರ ಬೆಳಿಗ್ಗೆ ಅವರು ತಮ್ಮ ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದಾಗ ಹೀರೋ ಹೊಂಡಾ ಬೈಕ್'ನಲ್ಲಿ ಬಂದ ದುಷ್ಕರ್ಮಿಗಳು ಜೆ.ಎಸ್.ಎಸ್ ಕಾಲೇಜು ಎಲ್ಲಿದೆ ಎಂದು ಉಷಾ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಉಷಾ ಜೆಎಸ್ಎಸ್ ಕಾಲೇಜು ಬಗ್ಗೆ ನನಗೇನು ತಿಳಿದಿಲ್ಲ ಎಂದು ಹೇಳುವಷ್ಟರಲ್ಲಿ ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಮತ್ತೋಬ್ಬ ವ್ಯಕ್ತಿ ಉಷಾ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಮೈಸೂರಿನಲ್ಲಿ ಕಳೆದ ಮೂರು ತಿಂಗಳಿನಿಂದ ಸರಗಳ್ಳತನ ನಿಯಂತ್ರಣದಲ್ಲಿತ್ತು. ಮತ್ತೆ ಸರಗಳ್ಳತನ ಪ್ರಾರಂಭವಾಗಿದೆ. ಪ್ರಕರಣ ಮಂಡಿಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.