ಮೈಸೂರು ಜಿಪಂ ಬಿಜೆಪಿ-ಜೆಡಿಎಸ್ ಮೈತ್ರಿ ಬಿಕ್ಕಟ್ಟು: ಅಧ್ಯಕ್ಷ ಗಾದಿಗೆ ಪಟ್ಟು
ಮೈಸೂರು, ಸೆಪ್ಟೆಂಬರ್ 29 : ರಾಜ್ಯ ರಾಜಕೀಯದಲ್ಲಿನ ಮೇಲಾಟ ಜಿಲ್ಲೆಗೂ ವಿಸ್ತರಿಸಿದ್ದು, ಮೈಸೂರಿನ ಜಿಲ್ಲಾ ಪಂಚಾಯಿತಿ ಮೇಲೂ ಪರಿಣಾಮ ಬೀರಿದೆ. ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಾ.ದಳದ ನಯೀಮಾ ಸುಲ್ತಾನಾ ಅವರು ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ.
ನಯೀಮಾ ಅವರು ಸೆ.17ರಂದು ರಾಜೀನಾಮೆ ಸಲ್ಲಿಸಿದ್ದರು. ಅ.1ರಂದು ಅವರ ರಾಜೀನಾಮೆ ಅಂಗೀಕಾರಗೊಳ್ಳ ಬೇಕಿತ್ತು. ಆದರೆ 3 ದಿನ ಮುನ್ನವೇ ರಾಜೀನಾಮೆ ಹಿಂದಕ್ಕೆ ಪಡೆದಿದ್ದಾರೆ.
ಅಳೆದು ತೂಗಿ ದಸರೆಗೂ ಮುನ್ನ ನಡೆಯಲಿದೆ ಸಂಪುಟ ವಿಸ್ತರಣೆ
ಇದಕ್ಕೂ ಮುನ್ನವೇ ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿಯ ಜಿ.ನಟರಾಜು ಅವರು ನಾಟಕೀಯ ಬೆಳವಣಿಗೆಯಲ್ಲಿ ರಾಜೀನಾಮೆಯನ್ನು ದಿಢೀರ್ ಹಿಂದಕ್ಕೆ ಪಡೆದಿದ್ದರು. ಅವರ ಈ ಕ್ರಮದ ಬೆನ್ನಲ್ಲೇ ಅಧ್ಯಕ್ಷರೂ ರಾಜೀನಾಮೆ ಹಿಂಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಉಪಾಧ್ಯಕ್ಷ ನಟರಾಜು ಅವರು ದಿಢೀರ್ ಎಂಬಂತೆ ತೀರ್ಮಾನ ಬದಲಿಸಿ, ರಾಜೀನಾಮೆ ವಾಪಸ್ ಪಡೆದಿದ್ದರ ಹಿಂದೆ ಬೇರೆಯದೇ ಲೆಕ್ಕಾಚಾರ ಇತ್ತು ಎನ್ನಲಾಗಿದೆ. ನಯೀಮಾ ಅವರ ರಾಜೀನಾಮೆ ಅಂಗೀಕಾರವಾದರೆ ಉಪಾಧ್ಯಕ್ಷರಾದವರಿಗೆ ಹಂಗಾಮಿ ಅಧ್ಯಕ್ಷರಾಗಲು ಅವಕಾಶ ದೊರೆಯುತ್ತದೆ. ಈ ಅವಕಾಶ ಬಳಸಿ ಕೊಳ್ಳುವ ತಂತ್ರ ಇದಾಗಿತ್ತು ಎನ್ನಲಾಗಿದೆ.
ನಟರಾಜು ಅವರಿಗೆ ಟಾಂಗ್ ನೀಡಲು ಸಾ.ರಾ.ನಂದೀಶ್ ಅವರು ಅಧ್ಯಕ್ಷರಿಂದ ರಾಜೀನಾಮೆ ಹಿಂದಕ್ಕೆ ತೆಗೆಸಿದರು. ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಂ.ವಿ.ಸಾವಿತ್ರಿ ಅವರನ್ನು ಭೇಟಿ ಮಾಡಿದ ನಯೀಮಾ ಅವರು ರಾಜೀನಾಮೆ ಪತ್ರ ಹಿಂದಕ್ಕೆ ಪಡೆದರು.
ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ
ಇದರಿಂದಾಗಿ ನಯೀಮಾ ಅವರು ಈಗ 3ನೇ ಬಾರಿಗೆ ದಸರಾದಲ್ಲಿ ಕುದುರೆ ಸವಾರಿ ಮಾಡಲಿದ್ದಾರೆ. ರಾಜೀನಾಮೆ ವಾಪಸ್ ಪ್ರಸಂಗ ಇದೇ ಮೊದಲೇನಲ್ಲ. ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ಸುನೀತಾ ವೀರಪ್ಪ ಗೌಡ ಅವರು ಸಹ ಗಡುವಿಗೆ ಮುನ್ನವೇ ರಾಜೀನಾಮೆ ಹಿಂದಕ್ಕೆ ಪಡೆದಿದ್ದರು.
ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಜೆಡಿಎಸ್ ನ ನಯೀಮಾ ಸುಲ್ತಾನ್ ಅಧ್ಯಕ್ಷರಾಗಿ, ಬಿಜೆಪಿಯ ನಟರಾಜು ಉಪಾಧ್ಯಕ್ಷರಾಗಿ 28 ತಿಂಗಳುಗಳಾಗಿವೆ.
ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!
ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು 20 ತಿಂಗಳ ನಂತರ ಆಯಾ ಪಕ್ಷಗಳ ಮತ್ತೊಬ್ಬರಿಗೆ ಬಿಟ್ಟುಕೊಡುವ ಒಪ್ಪಂದವಾಗಿತ್ತು. ಆದರೆ, ನಯೀಮಾ ಸುಲ್ತಾನ್ 20 ತಿಂಗಳ ಅಧಿಕಾರದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಾಗ ಪಕ್ಷದಲ್ಲಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಪಕ್ಷದ ಹಿರಿಯ ನಾಯಕರೂ ರಾಜೀನಾಮೆ ನೀಡುವಂತೆ ಅವರಿಗೆ ಸೂಚಿಸಿದ್ದರು. ಆದರೆ, ನಯೀಮಾ ಸುಲ್ತಾನ್ 30 ತಿಂಗಳ ಅಧಿಕಾರದ ನಂತರ ರಾಜೀನಾಮೆ ನೀಡುವುದಾಗಿ ಪಟ್ಟು ಹಿಡಿದಿದ್ದರು. ಆದರೆ, ಒತ್ತಡ ಹೆಚ್ಚಾದಾಗ ರಾಜೀನಾಮೆ ನೀಡಿದ್ದರು.
ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಏರಿದ ನಂತರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿಯೂ ಜೆಡಿಎಸ್ ಜೊತೆಗೆ ದೋಸ್ತಿಗೆ ಕಾಂಗ್ರೆಸ್ ಮುಂದಾಯಿತು. ಆದರೆ, ಸ್ಥಳೀಯ ಜೆಡಿಎಸ್ ನಲ್ಲಿ ಇದಕ್ಕೆ ವಿರೋಧವಿದ್ದರೂ ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸಲು ಮುಂದಾದರು. ಇದನ್ನು ಅರಿತ ಬಿಜೆಪಿ ತನ್ನ ಉಪಾಧ್ಯಕ್ಷರಿಗೆ ರಾಜೀನಾಮೆ ಪತ್ರ ವಾಪಸ್ ಪಡೆಯಲು ಸೂಚಿಸಿದರು. ಅದರಂತೆ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ನೀಡಿದ್ದ ರಾಜೀನಾಮೆ ಪತ್ರವನ್ನು ವಾಪಸ್ ಪಡೆದರು.