ಕೇರಳದ ತಾಜ್ಯ ಹೊತ್ತು ಕರ್ನಾಟಕದಲ್ಲಿ ಸುರಿಯಲು ಬಂದ ಲಾರಿಗಳು
ಎಚ್.ಡಿ.ಕೋಟೆ, ನವೆಂಬರ್, 1: ವಿಷಕಾರಕ ಮತ್ತು ಅನುಪಯುಕ್ತ ಪದಾರ್ಥಗಳನ್ನು ಕೇರಳದಿಂದ ನಾಗರಹೊಳೆ ಅರಣ್ಯ ಭಾಗದ ಕಾಡಂಚಿನ ರಸ್ತೆ ಮಗ್ಗುಲಲ್ಲಿ ಸುರಿದು ಪರಾರಿಯಾಗುತ್ತಿದ್ದ ಐದು ಲಾರಿಗಳನ್ನು ಅಂತರಸಂತೆ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದಿಂದ ಐದು ಲಾರಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡು ಮೈಸೂರು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಹರೀಶ್ ಕುಮಾರ್ ನೇತೃತ್ವದಲ್ಲಿ ಲಾರಿಗಳನ್ನು ಹಿಂಬಾಲಿಸಿದ್ದಾರೆ.
ಅಂತರಸಂತೆ ಬಳಿ ಲಾರಿಗಳನ್ನು ವಶಕ್ಕೆ ಪಡೆದು ಚಾಲಕರಾದ ಸಫೀರ್, ಸತ್ಯನ್, ಸಲೀಂ, ಸಂಶುದ್ದೀನ್ ಮತ್ತು ನಿಜಾಮುದ್ದೀನ್ ಎಂಬುವರನ್ನು ಬಂಧಿಸಲಾಗಿದ್ದು, ಲಾರಿಗಳನ್ನು ಬೀಚನಹಳ್ಳಿ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.
ಸದ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಲಾಯಿಯಲ್ಲಿದ್ದ ತ್ಯಾಜ್ಯದ ಮಾದರಿಯನ್ನು ನೀಡಲಾಗಿದ್ದು ಅಲ್ಲಿಂದ ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಅಪಾಯಕಾರಿ ಮತ್ತು ಸೋಂಕನ್ನು ಹರಡುವ ಆಸ್ಪತ್ರೆಯಲ್ಲಿ ಬಳಸುವ ಸಿರಂಜ್, ಔಷಧೀಯ ತ್ಯಾಜ್ಯಗಳು, ದನಗಳ ಮೂಳೆ, ಪ್ಲಾಸ್ಟಿಕ್ ತ್ಯಾಜ್ಯಗಳಿದ್ದು, ಇದನ್ನು ಕಾಡಂಚಿನ ಗ್ರಾಮಗಳ ಹಲವೆಡೆ ಸುರಿದು ಪರಾರಿಯಾಗಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಇದೇ ರೀತಿಯ ಘಟನೆ 2016ರ ಮೇ ತಿಂಗಳಲ್ಲಿ ನಡೆದಿತ್ತು. ಎರಡು ಲಾರಿಗಳನ್ನು ಮೈಸೂರು ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳಾದ ಕೆ.ರವಿಚಂದ್ರ, ಜಯಲಕ್ಷ್ಮಿ. ಪಿಎಸ್ಐ ಸುರೇಶ್ಕುಮಾರ್, ಪೇದೆ ಅರುಣ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಕಳೆದ ಮೂರು ವರ್ಷಗಳಿಂದ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆ ಎರಡೂ ಪಕ್ಕದಲ್ಲಿ ಮತ್ತು ಕೆಲ ಗ್ರಾಮಗಳ ಬಳಿ ಇಂತಹ ತ್ಯಾಜ್ಯ ವಸ್ತುಗಳು ತುಂಬಿದ ಚೀಲಗಳು ಕಂಡು ಬರುತ್ತಿದ್ದವು.
ತಾಲೂಕಿನ ಪಡುಕೋಟೆ ಗ್ರಾಮದ ಬಳಿ ರೈತರೊಬ್ಬರ ಜಮೀನನ್ನು ಗುತ್ತಿಗೆ ಅಧಾರದಲ್ಲಿ ಪಡೆದು ಇಂತಹದೇ ಕೊಳಚೆ ತ್ಯಾಜ್ಯಗಳಾದ ದನಗಳ ಮೂಳೆಗಳನ್ನು ತಂದು ಗುಂಡಿ ತೆಗೆದು ಹೂಳಲಾಗಿತ್ತು. ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ಮಾಡದೆ ಮೌನಕ್ಕೆ ಜಾರಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.