ಮೈಸೂರು ದಸರಾ ಗಜ ಪಯಣದ ಮುಂದೆ ಆದಿವಾಸಿಗಳಿಂದ ಪ್ರತಿಭಟನೆ
ಮೈಸೂರು,ಆಗಸ್ಟ್ 9: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿಗೊಂಡ 280 ಗಿರಿಜನ ಕುಟುಂಬಗಳಿಗೆ ಕೊರತೆ ಇರುವ 111 ಎಕರೆ 15 ಗುಂಟೆ ಕೃಷಿ ಭೂಮಿ ನೀಡಬೇಕು. ಜತೆಗೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಜಪಯಣದ ಎದುರು ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ನಾಗಾಪುರದ ನಾಗರಹೊಳೆ ಗಿರಿಜನರ ಪುನರ್ವಸತಿ ಕೇಂದ್ರದ ಆದಿವಾಸಿ ಹೋರಾಟಗಾರ ಎಂ.ಬಿ.ಪ್ರಭು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "1999ರಲ್ಲಿ ರಾಜ್ಯ ಸರ್ಕಾರ ನೀಡಿದ ಹಕ್ಕುಪತ್ರಗಳು ಬೋಗಸ್ ಆಗಿವೆ. ಹಕ್ಕು ಪತ್ರದಲ್ಲಿ ಉಲ್ಲೇಖಿಸಿದ ಸ್ಥಳದಲ್ಲಿ ಜಮೀನೇ ಇಲ್ಲ. ಕಳೆದ 9 ವರ್ಷಗಳಿಂದ ಈ ಬಗ್ಗೆ ಆದಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ," ಎಂದು ದೂರಿದರು.
"ವಿವಿಧ ಸಮುದಾಯದವರಿಗೆ ಭವನಗಳನ್ನು ನಿರ್ಮಿಸಿರುವ ಸರ್ಕಾರ ಜೇನುಕುರುಬರಿಗೆ, ಬೆಟ್ಟಕುರುಬರಿಗೆ, ಎರವರಿಗೆ ಎಲ್ಲಿ ಯಾವ ಭವನಗಳನ್ನು ನಿರ್ಮಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ನಾಲ್ಕು ಬಜೆಟ್ಗಳಲ್ಲಿ ಈ ಸಮುದಾಯಕ್ಕೆ ಒದಗಿಸಿರುವ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಹಿರಂಗಪಡಿಸಬೇಕು. ಅನ್ನಭಾಗ್ಯವನ್ನು ಹೊರತುಪಡಿಸಿದರೆ ಇನ್ಯಾವ ಯೋಜನೆಯೂ ನಮಗೆ ತಲುಪಿಲ್ಲ," ಎಂದು ಅಲವತ್ತುಕೊಂಡರು.
"ಇಲ್ಲಿನ ಭೂಮಿಯನ್ನು ಇತರ ಪ್ರಭಾವಿಗಳು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದು, ಇದನ್ನು ಬಿಡುಗಡೆಗೊಳಿಸಿ ಆದಿವಾಸಿಗಳಿಗೆ ಕಾನೂನುಬದ್ಧ ಒಡೆತನ ನೀಡಬೇಕು. ನಾಗಾಪುರ ಪುನರ್ವಸತಿ ಕೇಂದ್ರ 280 ಕುಟುಂಬಗಳನ್ನು ಒಂದೇ ಗ್ರಾಪಂ ವ್ಯಾಪ್ತಿಗೆ ಸೇರಿಸಬೇಕು. 731 ಹೆಕ್ಟೇರ್ ಜಮೀನನ್ನು ಒಂದೇ ಸರ್ವೇ ನಂಬರ್ಗೆ ತಂದು ಹದ್ದುಬಸ್ತು ಮಾಡಿಕೊಡಲು ಕ್ರಮ ಕೈಗೊಳ್ಳಬೇಕು," ಎಂದು ಅವರು ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ.