ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಸಾ ರಾ ಮಹೇಶ್
ಮೈಸೂರು, ಆಗಸ್ಟ್ 4 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಮೊದಲ ಭೇಟಿಯಲ್ಲೇ ಮಾನವೀಯತೆ ಮೆರೆಯುವ ಮೂಲಕ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್ ಅವರು ಜನರ ಮನಗೆದ್ದಿದ್ದಾರೆ. ಅಪಘಾತಕ್ಕೀಡಾಗಿದ್ದ ಜಿಂಕೆ ಮರಿಯೊಂದನ್ನು ರಕ್ಷಿಸುವ ಮೂಲಕ ಪ್ರಾಣಿ ಪ್ರೀತಿ ತೋರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಸಾ.ರಾ.ಮಹೇಶ್ ಅವರು ಮೊದಲ ಬಾರಿಗೆ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಮಡಿಕೇರಿಯತ್ತ ಸಾಗುತ್ತಿದ್ದಾಗ ಸಚಿವರ ವಾಹನದ ಮುಂದೆ ಇದ್ದ ತಮಿಳುನಾಡು ಮೂಲದ ಪ್ರವಾಸಿಗರ ವಾಹನಕ್ಕೆ ಕುಶಾಲನಗರ ಸಮೀಪದ ಆನೆಕಾಡು ಬಳಿ ಜಿಂಕೆಗಳ ಗುಂಪು ಅಡ್ಡ ಬಂದಿದೆ. ವೇಗ ನಿಯಂತ್ರಿಸದ ಕಾರು ಜಿಂಕೆ ಮರಿಗೆ ಡಿಕ್ಕಿ ಹೊಡೆದಿದೆ. ಜಿಂಕೆ ಮರಿ ಗಾಯಗೊಂಡು ರಸ್ತೆಪಕ್ಕ ಬಿದ್ದು ನರಳಾಡುತ್ತಿತ್ತು.
ಕೊರಟಗೆರೆ: ಕೋಳಿ ತಿನ್ನಲು ಬಂದು ಶೆಡ್ನಲ್ಲಿ ಬಂಧಿಯಾದ ಚಿರತೆ
ಸಾ.ರಾ.ಮಹೇಶ್ ಅವರು ಗಾಯಗೊಂಡ ಜಿಂಕೆಯನ್ನು ಕಂಡು ತಕ್ಷಣ ವಾಹನ ನಿಲ್ಲಿಸುವಂತೆ ಸೂಚಿಸಿದರು. ಕಾರಿನಿಂದಿಳಿದು ಜಿಂಕೆಮರಿ ರಕ್ಷಣೆಗೆ ಮುಂದಾದರು. ಜಿಂಕೆಗೆ ನೀರು ಕುಡಿಸಿದ ಸಚಿವರು, ತಕ್ಷಣ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಜಿಂಕೆಗೆ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಜಿಂಕೆ ಮರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿದರು.ನಂತರ ಸಚಿವ ಸಾರಾ, ವನ್ಯ ಪ್ರಾಣಿಗಳ ರಕ್ಷಣೆಗೆ ಹೆಚ್ಚು ಮುತುವರ್ಜಿಯಿಂದ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿ, ಮಡಿಕೇರಿಯತ್ತ ಪಯಣ ಮುಂದುವರಿಸಿದರು. ಸಚಿವರ ಮಾನವೀಯ ನಡೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.