ಉಪಚುನಾವಣೆ: ಮತ ಎಣಿಕೆಗೆ ಸಿದ್ಧವಾಯ್ತು ನಂಜನಗೂಡು
ನಾಳೆ ಹೊರಬೀಳಲಿರುವ ನಂಜನಗೂಡು ಉಪಚುನಾವಣೆಯ ಫಲಿತಾಂಶಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಘಟಾನುಘಟಿ ನಾಯಕರ ಅವಿರತ ಪ್ರಚಾರದ ಫಲ ಏನೆಂಬುದು ನಾಳೆ ನಿರ್ಧಾರವಾಗಲಿದೆ.
ಮೈಸೂರು, ಏಪ್ರಿಲ್ 12 : ಬಹುದಿನದಿಂದ ಕುತೂಹಲ ಕೆರಳಿಸಿದ್ದ ನಂಜನಗೂಡು ಉಪಚುನಾವಣೆಯ ಫಲಿತಾಂಶ (ಏಪ್ರಿಲ್ 13) ನಾಳೆ ಹೊರಬೀಳಲಿದ್ದು, ಇಷ್ಟು ದಿನದ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.
ಕಾಂಗ್ರೆಸ್ ಮುಖಂಡರಾಗಿದ್ದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ತೆರವಾಗಿದ್ದ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.
ನಾಳೆಯ ಮತ ಎಣಿಕೆಗಾಗಿ ಜಿಲ್ಲಾಡಳಿತ ಸಜ್ಜಾಗಿದ್ದು, ಘಟಾನುಘಟಿ ನಾಯಕರ ಅವಿರತ ಪ್ರಚಾರದ ಫಲ ಏನೆಂಬುದು ನಾಳೆ ನಿರ್ಧಾರವಾಗಲಿದೆ.[ನಾಳೆ ಬೆಳಗಾದರೆ ನಂಜನಗೂಡು, ಗುಂಡ್ಲುಪೇಟೆ ಸುದ್ದಿ-ಗದ್ದಲ!]
ಸ್ಟ್ರಾಂಗ್ ಆದ ಸ್ಟ್ರಾಂಗ್ ರೂಂ!
ನಾಳೆ ನಂಜನಗೂಡಿನ ಜೆಎಸ್ ಎಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆಸಲಾಗಿದೆ. ಕಾಲೇಜಿನ ಸಭಾಂಗಣದ ಒಂದೇ ಕೋಠಡಿಯಲ್ಲಿ ಮತ ಎಣಿಕೆ ನಡೆಯಲಿದ್ದು, 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ ಗೂ 4 ಮಂದಿ ಸಿಬ್ಬಂದಿಗಳು, ಒಬ್ಬರು ಮೇಲ್ವಿಚಾರಕರು ಹಾಗೂ ಒಬ್ಬರು ಮೈಕ್ರೋ ಅಬ್ಸರ್ವರ್ ನಿಯೋಜಿಸಲಾಗಿದೆ. ಒಟ್ಡು 17 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
200 ಮೀಟರ್ ಸುತ್ತ ನಿಷೇದಾಜ್ಞೆ
ಮತ ಎಣಿಕೆ ಕೇಂದ್ರದ 200 ಮೀಟರ್ ಸುತ್ತ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಕ್ಷೇತ್ರದಾದ್ಯಂತ ಪಟಾಕಿ ಸಿಡಿತ ಹಾಗೂ ವಿಜಯೋತ್ಸವಗಳನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ರಂದೀಪ್ ಮತ ಎಣಿಕೆಯ ಅಂತಿಮ ಸಿದ್ಧತೆಯ ಪರಿಶೀಲನೆ ನಡೆಸಿದ್ದು, ಮತ ಯಂತ್ರಗಳಿರುವ ಸ್ಟ್ರಾಂಗ್ ರೂಮ್ ಗೆ ಅರೆ ಸೇನಾಪಡೆಯ ಭದ್ರತೆ ಮಾಡಲಾಗಿದೆ. ಕಾನೂನು ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.[ಏ.13ರಂದು ಮತ ಎಣಿಕೆ, ನಂಜನಗೂಡಿನಾದ್ಯಂತ ನಿಷೇದಾಜ್ಞೆ ಜಾರಿ]
ಮತ ಎಣಿಕೆ ಸ್ಥಳದ ಬಳಿ ಬಿಗಿ ಬಂದೋಬಸ್ತ್
ಮತ ಎಣಿಕೆ ಕೇಂದ್ರದ ಒಳಗಡೆ ಅಭ್ಯರ್ಥಿ ಹಾಗೂ ಪಕ್ಷದ ಏಜೆಂಟ್ ಗಳು ಮಾತ್ರ ಪ್ರವೇಶಿಸಬೇಕು. ಕಡ್ಡಾಯವಾಗಿ ಗುರುತಿನ ಪತ್ರವನ್ನು ಹೊಂದಿರಬೇಕು. ಅಧಿಕೃತ ಪಾಸ್ ಹೊಂದಿರುವ ಏಜೆಂಟ್ ಮತ್ತು ಅಭ್ಯರ್ಥಿಗಳನ್ನು ತಪಾಸಣೆ ಮಾಡಿದ ಬಳಿಕ ಮಾತ್ರವೇ ಒಳಗೆ ಬಿಡಲಾಗುವುದು. ಮತ ಎಣಿಕಾ ಸ್ಥಳದೊಳಗೆ ಹೋಗುವ ವ್ಯಕ್ತಿಗಳು ಬೆಂಕಿಪೊಟ್ಟಣ, ಮೊಬೈಲ್, ಕರಪತ್ರ, ಚಾಕು, ಬ್ಲೇಡ್ ಇತ್ಯಾದಿಗಳನ್ನು ತರುವಂತಿಲ್ಲ.[ಉಪಚುನಾವಣೆ ಮುಗೀತು, ಲೆಕ್ಕಾಚಾರ ಶುರುವಾಯ್ತು!]
ಮದ್ಯ ಮಾರಾಟ ನಿಷೇಧ
ಮತ ಎಣಿಕೆ ಪ್ರಯುಕ್ತ ಇಂದು ಮಧ್ಯರಾತ್ರಿಯಿಂದ ಏ.13ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಚುನಾವಣಾ ಫಲಿತಾಂಶ ಘೋಷಣೆ ಸಂದರ್ಭ ಅಭ್ಯರ್ಥಿಗಳ ಬೆಂಬಲಿಗರು ಗುಂಪುಗೂಡಬಾರದು, ಘರ್ಷಣೆ ಮಾಡಿಕೊಳ್ಳಬಾರದು. ಪ್ರತಿಕೃತಿ ಪ್ರದರ್ಶನ, ದಹನ ಮಾಡುವುದು, ಬಹಿರಂಗ ಘೋಷಣೆಗಳಿಗೆ ಅವಕಾಶವಿಲ್ಲ.[ನಂಜನಗೂಡಲ್ಲಿ ಬೆಟ್ಟಿಂಗ್ ಜೋರು, ನಾವು ಗೆಲ್ಬೇಕು ಅಂತಾರೆ ಜನರು!]
ಭಿತ್ತಿಪತ್ರಕ್ಕೂ ನಿಷೇಧ
ಯಾವುದೇ ಅಭ್ಯರ್ಥಿಯು ಗೆದ್ದಲ್ಲಿ ವಿಜಯೋತ್ಸವದ ಬ್ಯಾನರ್ ಗಳನ್ನು, ಭಿತ್ತಿಪತ್ರಗಳನ್ನು ಹಾಗೂ ಪ್ಲೆಕ್ಸ್ ಬೋರ್ಡ್ ಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಯಾರಾದರೂ ಈ ನಿಯಮವನ್ನು ಉಲ್ಲಖಿಸಿದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ. ಒಟ್ಟಾರೆ ನಾಳಿನ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವುದರಿಂದ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಎದೆಯಲ್ಲಿ ಢವ ಢವ ಶುರುವಾಗಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]