ಬಾಯಿಗೆ ಬರದ ತುತ್ತು, ತಂಬಾಕು ಬೆಳೆಗಾರರಿಗೆ ಕುತ್ತು
ಮೈಸೂರು, ಜುಲೈ 21 : ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ರೈತರಿಗೆ ತಂಬಾಕು ಕೃಷಿಯೇ ಜೀವಾಳ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣದಲ್ಲಿ ಅತಿ ಹೆಚ್ಚು ರೈತರು ತಂಬಾಕನ್ನು ಬೆಳೆಯುತ್ತಾರೆ. ವಾಣಿಜ್ಯ ಬೆಳೆಯಾದುದರಿಂದ ಹೆಚ್ಚು ಆದಾಯ ಪಡೆಯಬಹುದು ಎಂಬುದು ರೈತರ ನಂಬಿಕೆಯಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಮಾಡುತ್ತಾರೆ.
ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ತಂಬಾಕು ಬೆಳೆಗಾರನ ನಸೀಬು ಸರಿಯಿಲ್ಲ. ಪ್ರತಿವರ್ಷವೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಬೆಳೆಗಾರರು ಅನುಭವಿಸುತ್ತಲೇ ಬರುತ್ತಿದ್ದಾರೆ.
ಇಳುವರಿ ಚೆನ್ನಾಗಿ ಬಂದರೂ ಸೂಕ್ತ ದರ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವೊಮ್ಮೆ ದರ ಸಿಕ್ಕರೂ ಇಳುವರಿ ಬಾರದೆ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆದಿವೆ. [ರೈತನ ಬೆಳೆ ಮತ್ತು ಕನಸನ್ನು ಸರ್ವನಾಶ ಮಾಡಿದ ಕ್ರಿಮಿನಾಶಕ]
ಮುಂದಿನ 2020ರ ವೇಳೆಗೆ ತಂಬಾಕು ಬೆಳೆಯನ್ನು ನಿಷೇಧಿಸಬೇಕೆಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಕೆಲವು ರೈತರು ತಂಬಾಕು ಬಿಟ್ಟು ಬೇರೆ ಬೆಳೆಗಳತ್ತ ಚಿಂತನೆ ನಡೆಸುತ್ತಿದ್ದಾರೆ.
ಅದೇನೇ ಇರಲಿ. ಇದೀಗ ಒಂದಷ್ಟು ಆದಾಯ ಪಡೆಯಬಹುದೆಂದು ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಹಲವು ರೈತರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ. ಹುಲುಸಾಗಿ ಬೆಳೆದಿದ್ದ ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಂಡಿದೆ. ಇದು ಈಗಾಗಲೇ ಅನುಭವಿಸುತ್ತಿರುವ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. [ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]
ಹುಣಸೂರು ವ್ಯಾಪ್ತಿಯಲ್ಲಿ ಈ ರೋಗ ಹರಡಿದ್ದು, ಮೂರ್ನಾಲ್ಕು ತಿಂಗಳಿಂದ ಲಕ್ಷಾಂತರ ರೂ ವೆಚ್ಚ ಮಾಡಿ ಸಸಿಯನ್ನು ನಾಟಿ ಮಾಡಿ ಬೆಳೆಸಿ ಅದಕ್ಕೆ ಗೊಬ್ಬರ ಹಾಕಿ, ಕಳೆ ತೆಗೆದು ಪೋಷಿಸಿ, ಇದೀಗ ಹುಲುಸಾಗಿ ಬೆಳೆದು ಕಟಾವು ಮಾಡುವ ಸಂದರ್ಭವೇ ರೋಗ ತಗುಲಿರುವುದು ಬೆಳೆಗಾರರು ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿಗೆ ತಂದೊಡ್ಡಿದೆ. [ತಂಬಾಕು ಬೇಕಿದ್ರೆ ಸೇವಿಸಿ, ದುಷ್ಪರಿಣಾಮ ನೀವೇ ಅನುಭವಿಸಿ!]
ಎ-3 ತಂಬಾಕು ಬೆಳೆಯ ಸಸಿ ಮಡಿಗಳಿಗೆ ಐಟಿಸಿ ಕಂಪನಿಯಿಂದ ಬೀಜಗಳನ್ನು ರೈತರಿಗೆ ವಿತರಣೆ ಮಾಡಿ ಸಸಿ ಮಡಿಗಳನ್ನು ಬೆಳೆಸಲಾಗಿತ್ತು. ಆದರೆ ಪ್ರಾರಂಭದಿಂದ ಕಟಾವಿಗೆ ಬರುವವರೆಗೂ ಯಾವುದೇ ರೋಗ ಲಕ್ಷಣಗಳಿಲ್ಲದೆ ಬೆಳೆದ ಗಿಡಗಳಿಗೆ ಇದ್ದಕಿದ್ದಂತೆ ಮಾರಕ ರೋಗ ತಗುಲಿರುವುದು ಹವಮಾನ ವೈಪರೀತ್ಯದಿಂದಲೋ ಅಥವಾ ಬೀಜೋಪಚಾರದಿಂದಲೋ ಎಂಬುದು ಅರ್ಥವಾದಂತಿಲ್ಲ.
ರೈತರು ತಂಬಾಕು ಮಂಡಳಿ ಅಧಿಕಾರಿಗಳ ಸಲಹೆ ಪಡೆದು ರಾಸಾಯನಿಕವನ್ನು ಸಿಂಪಡಿಸುತ್ತಿದ್ದಾರೆ. ಆದರೂ ಕೊನೆ ಗಳಿಗೆಯಲ್ಲಿ ರೋಗ ಕಾಣಿಸಿಕೊಂಡಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತಲ್ಲ ಎಂಬ ನೋವು ರೈತರನ್ನು ಕಾಡುತ್ತಿದೆ. [ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]