ಕನ್ನಡದ ಅಳಿವು –ಉಳಿವಿನ ಬಗ್ಗೆ ಅರಿಯಲು ಸಾಹಿತ್ಯ ಸಮ್ಮೇಳನ ಬೇಕು: ಚಂಪಾ
ಮೈಸೂರು, ಅಕ್ಟೋಬರ್ 21: "ಕರ್ನಾಟಕದಲ್ಲಿಯೇ ಕನ್ನಡ ಉಳಿಯಬೇಕಾದರೆ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆ ಇದೆ" ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ತಿಳಿಸಿದರು.
ಮೈಸೂರಿನಲ್ಲಿ ನವೆಂಬರ್ 24 ರಿಂದ 26 ರವರೆಗೆ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆಮಾಡುವ ಸಲುವಾಗಿ ಕನ್ನಡ ಸಾಹಿತ್ಯ ಸಮ್ಮೇಳನಬೇಕು. ನಾನು ಸಾಹಿತ್ಯ ಸಮ್ಮೇಳನಗಳ ಪರ ಇದ್ದೇನೆ" ಎಂದರು.
ದೇವನೂರ ಮಹದೇವು ಅವರು ಕನ್ನಡ ಕಡ್ಡಾಯವಾಗದವರೆಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೈರಾಗುತ್ತೇನೆ ಎಂದು ಹೇಳಿರುವ ವಿಚಾರವಾಗಿ ಮಾತನಾಡಿದ ಅವರು, "ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ವೈಯಕ್ತಿಕ ಅಭಿಪ್ರಾಯ ನಾನೂ ಗೌರವಿಸುತ್ತೇನೆ. ನಾವು ತತ್ವಬದ್ಧವಾಗಿ ಮಾತಾನಾಡುವವರು. ಕನ್ನಡಕ್ಕೆ ಸಮ್ಮೇಳನಗಳು ಬೇಕು ಅನ್ನೋನು ನಾನು. ಕನ್ನಡದ ಸಮಸ್ಯೆ ಏನೂ ಎಂಬುದನ್ನು ಒದರಿ ಹೇಳಲು ಸಮ್ಮೇಳನ ಬೇಕು. ನನ್ನ ವಿಚಾರ ಹೇಳಬೇಕಾದರೆ ಒಂದು ವೇದಿಕೆ ಬೇಕು. ಅದು ಯಾವುದೇ ವೇದಿಕೆ ಇರಲಿ, ಪಕ್ಷ ಇರಲಿ ಸಂಘಟನೆ ಇರಲಿ. ನಾನೂ ಅದನ್ನ ಸದುಪಯೋಗಪಡಿಸಿಕೊಳ್ಳುತ್ತೇನೆ" ಎಂದರು.
83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ
"ಟಿಪ್ಪು ಜಯಂತಿಗೆ ನನ್ನ ಹೆಸರು ಹಾಕಬೇಡಿ ಎಂಬುದು ಅನಂತಕುಮಾರ್ ಸಮಸ್ಯೆ. ಅದಕ್ಕೆ ನಾನೇನು ಉತ್ತರ ನೀಡಲು ಸಾಧ್ಯವಿಲ್ಲ. ನೀವು ಅನಂತಕುಮಾರ ಹೆಗ್ಡೆಯನ್ನೇ ಕೇಳಿ. ನಾವು-ನಮ್ಮಂಥವರು ಪ್ರಜಾಪ್ರಭುತ್ವ ವಾದಿಗಳು. ಪ್ರಜಾಪ್ರಭುತ್ವದಲ್ಲಿ ನಮಗೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ಇದೆ. ಒಬ್ಬರು ಹೇಳಿದ್ದನ್ನ ಕೇಳಬೇಕು. ಇಲ್ಲ ಅಂದರೆ ಲೆಟಸ್ ಅಗ್ರಿ ವಿತ್ ಡಿಸ್ಗ್ರಿ ಅನ್ನೋ ಮಾತಿದೆ. ಸಮಸ್ಯೆ ಬಗೆಹರಿಯದಿದ್ದರೆ ನಮ್ ನಮ್ ಮನೆಗೆ ಹೋಗ್ಬೇಕು" ಎಂದರು.