ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು: ಸದಾನಂದ ಗೌಡ
ಮೈಸೂರು, ಡಿಸೆಂಬರ್ 9 : ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿಂದು ವರುಣಾ ಕ್ಷೇತ್ರದ ಪ್ರವಾಸ ಮಾಡಿಬಂದೆ. ಅಲ್ಲಿನ ಕಾರ್ಯಕರ್ತರು ಹಾಗೂ ಪರಿಸ್ಥಿತಿ ಅವಲೋಕಿಸಿದಾಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲೋದು ಖಚಿತವಾಗಿದೆ ಎಂದರು.
ವರುಣಾ ಕ್ಷೇತ್ರದಲ್ಲಿ ಯತೀಂದ್ರ ಹವಾ, ಗೆಲುವಿಗಾಗಿ ನೆಲ ಹದ!
ಮುಂದಿನ ಚುನಾವಣೆಗಾಗಿ ವರುಣಾ ಕ್ಷೇತ್ರದ ಉಸ್ತುವಾರಿ ನನ್ನ ಹೆಗಲಿಗೆ ಬಿದ್ದಿದೆ. ಇದನ್ನ ಸವಾಲಾಗಿ ಸ್ವೀಕರಿಸಿರುವ ನಾನು ಪ್ರತೀ ಬೂತ್ ನಲ್ಲೂ ಬಿಜೆಪಿಗೆ ಹೆಚ್ಚು ಮತಗಳಿಸಕೊಡಲು ಶ್ರಮಿಸುವೆ. ಕರ್ನಾಟಕ ರಾಜ್ಯವನ್ನು ನಂ.1 ಭ್ರಷ್ಟಾಚಾರ ರಾಜ್ಯ ಮಾಡಿರುವ ಮುಖ್ಯಮಂತ್ರಿಯನ್ನು ಕೆಳಗಿಳಿಸಿ ಮತ್ತೆ ಒಳ್ಳೆಯ ಆಡಳಿತ ಕೊಡೋದು ಬಿಜೆಪಿಯ ಗುರಿ. ಆ ಕೆಲಸವನ್ನು ಸಿಎಂ ಸ್ವಕ್ಷೇತ್ರ ವರುಣಾ ಕ್ಷೇತ್ರದಿಂದಲೇ ಆರಂಭಿಸಿದ್ದೇವೆ. ಸಿದ್ದರಾಮಯ್ಯ ಹೆಗಲ ಮೇಲೆ ಟವಲ್ ಏರಿಸಿ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಅಂತಾ ಏನೇ ಹೇಳಿದರೂ ಅಂಕಿ ಅಂಶ ಬೇರೆನೆ ಹೇಳುತ್ತಿದೆ ಎಂದು ಹೇಳಿದರು.
ಹುಣಸೂರಿನಲ್ಲಿ ಹನುಮ ಜಯಂತಿಗೆ ತಡೆ ಹಾಕಿದ್ದು ಸರಿಯಲ್ಲ. ಸಿದ್ದರಾಮಯ್ಯ ಸಾಧನೆ ಕಡಿಮೆಯಾಗಿದ್ದು, ತಾವು ಏನು ಮಾಡಿದರೂ ಏನು ಆಗುತ್ತಿಲ್ಲ ಅನ್ನೋದು ಅರ್ಥವಾಗಿದೆ. ದಿನೇ ದಿನೇ ಅವರ ಸಂಖ್ಯಾಬಲ ಮತ್ತು ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದರಿಂದ ಹತಾಶರಾಗಿರುವ ಸಿಎಂ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರೋದು ಅವರ ಪ್ಲಾನ್. ಆದರೆ ಜನ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ಹುಣಸೂರಿನ ಘಟನೆ ಕಾಂಗ್ರೆಸ್ ಪ್ರೇರಿತ ಎಂದರು.