ಕೊಡಗಿನಲ್ಲಿ ಸೆರೆಸಿಕ್ಕ ಹುಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವು
ಮೈಸೂರು: ಕೊಡಗಿನಿಂದ ಸೆರೆ ಹಿಡಿದು ತಂದು ಮೈಸೂರಿನ ಹೊರವಲಯದ ಕೂರ್ಗಳ್ಳಿ ಬಳಿಯಿರುವ ಚಾಮುಂಡಿ ಪ್ರಾಣಿಗಳ ಸಂರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದ ಹುಲಿ ಸಾವನ್ನಪ್ಪಿದೆ.
ಸಾವನ್ನಪ್ಪಿರುವ ಹುಲಿ ಸುಮಾರು ನಾಲ್ಕು ವರ್ಷ ಪ್ರಾಯದ್ದಾಗಿದೆ. ಕೊಡಗಿನ ವೀರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಗ್ರಾಮದ ಶ್ರೀ ಮಂದತವ್ವ ದೇವಸ್ಥಾನಕ್ಕೆ ಹೋಗುವ ಮಾರ್ಗದ ಲಕ್ಷ್ಮಣ ತೀರ್ಥ ನದಿ ದಡದಲ್ಲಿ ಈ ಹುಲಿ ಸಿಕ್ಕಿಬಿದ್ದಿತ್ತು.
ಪ್ರಾಣಿಗಳು ನಿರಂತರವಾಗಿ ಸಂಚರಿಸುವ ಮಾರ್ಗದಲ್ಲಿ ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿಕೊಂಡು ಅಲ್ಲಿಯೇ ಕುರುಚಲು ಕಾಡಿನೊಳಗೆ ನರಳಾಡುತ್ತಾ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಘಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಡಿಎಫ್ ಓ ಎಂ.ಎಂ. ಜಯಾ, ಪೊನ್ನಂಪೇಟೆ ಆರ್ ಎಫ್ ಒ ಪಿ.ಬಿ.ಉತ್ತಯ್ಯ, ಮತ್ತಿಗೋಡು ಆರ್ ಎಫ್ ಒ ಕಿರಣ್ ಕುಮಾರ್ ಮತ್ತಿತರರು ಉರುಳಿಗೆ ಸಿಲುಕಿದ ಹುಲಿಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಆ ಬಳಿಕ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ.ಹೊಸಮಠ್ ಅವರನ್ನು ಸಂಪರ್ಕಿಸಿ ಅರವಳಿಕೆ ನೀಡಲು ಅನುಮತಿ ಪಡೆದು ಮೈಸೂರು ಮೃಗಾಲಯದಿಂದ ಪಶುವೈದ್ಯರಾದ ಮದನ್ ಹಾಗೂ ನಾಗರಾಜ್ ಅವರನ್ನು ಕರೆಯಿಸಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿತ್ತು.
ಈ ಸಂದರ್ಭ ಹುಲಿಗೆ ಗಾಯವಾಗಿರುವುದು ಕಂಡು ಬಂದಿತ್ತು. ಚಿಕಿತ್ಸೆಗಾಗಿ ಮೈಸೂರಿನ ಕೂರ್ಗಳ್ಳಿಯ ಬಳಿಯಿರುವ ಚಾಮುಂಡಿ ಪ್ರಾಣಿಗಳ ಸಂರಕ್ಷಣಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಹುಲಿ ಶುಕ್ರವಾರ ಮೃತಪಟ್ಟಿದೆ.