ಸೆರೆ ಹಿಡಿಯಲು ಹುಲಿ ಸಿಗುತ್ತಿಲ್ಲ...ಜನರಿಗೆ ನೆಮ್ಮದಿಯೂ ಇಲ್ಲ
ಮೈಸೂರು, ಸೆಪ್ಟೆಂಬರ್ 21 : ಕಳೆದ ಕೆಲವು ತಿಂಗಳುಗಳಿಂದ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕೆ.ಜಿ.ಹಬ್ಬನಕುಪ್ಪೆ ವ್ಯಾಪ್ತಿಯಲ್ಲಿ ಹುಲಿಯೊಂದು ಜಾನುವಾರುಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಲೇ ಇದ್ದು, ಅರಣ್ಯ ಇಲಾಖೆಗೆ ಅದನ್ನು ಸೆರೆ ಹಿಡಿಯುವಲ್ಲಿ ವಿಫಲವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಹಿಂದೆಯೇ ಅದನ್ನು ಸೆರೆ ಹಿಡಿಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸಿಸಿಟಿವಿ ಅಳವಡಿಸಿ ಅದರ ಚಲನೆಯನ್ನು ಪತ್ತೆ ಹಚ್ಚಲಾಗಿತ್ತು.
ರಾಜ್ಯದ ಮೂರನೇ ಹುಲಿ ಸಫಾರಿ ಕೇಂದ್ರ ಹಂಪಿಯಲ್ಲಿ
ದ್ರೋಣ್ ಕ್ಯಾಮರಾ ಮೂಲಕ ಅದನ್ನು ಪತ್ತೆ ಹಚ್ಚುವ ಕಾರ್ಯ ನಡೆಯಿತು. ಅದಾದ ನಂತರ ಸಾಕಾನೆಗಳ ಮೂಲಕ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ ಹುಲಿ ಮಾತ್ರ ಯಾವುದೇ ಕಾರಣಕ್ಕೂ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುತ್ತಲೇ ಇದೆ.
ನಾಗರಹೊಳೆಯ ಕಾಡಂಚಿನ ಜನರ ನಿದ್ದೆಗೆಡಿಸಿದ ವ್ಯಾಘ್ರ
ಕೆಲವು ದಿನಗಳ ಕಾಲ ಸದ್ದೇ ಮಾಡದೆ ತೆಪ್ಪಗೆಯಿರುವ ಹುಲಿ ಜನ ಇನ್ನೇನು ಅರಣ್ಯಕ್ಕೆ ಹೋಯಿತು ಇನ್ನು ನೆಮ್ಮದಿಯಾಗಿರಬಹುದು ಎಂದು ಯೋಚಿಸುವಾಗಲೇ ಮತ್ತೆ ಕಾಣಿಸಿಕೊಂಡು ತನ್ನ ಆಟಾಟೋಪ ಮೆರೆಯುತ್ತಿದೆ.
ಟ್ವಿಟ್ಟರಲ್ಲಿ ಹುಲಿ, ಹುಲಿ, ಹೆಬ್ಬುಲಿ, ದೈತ್ಯಬೆಕ್ಕಿಗೊಂದು ದಿನ
ಕೆ.ಜಿ.ಹಬ್ಬನಕುಪ್ಪೆಯ ತರಗನ್ ಮಾವಿನ ಎಸ್ಟೇಟ್ನಲ್ಲಿ ಈ ಹುಲಿ ಅವಿತಿರುವ ಸಂಶಯವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ ಇಲ್ಲಿ ಅಡ್ಡಾಡುವ ಹುಲಿ ಹೆಣ್ಣು ಹುಲಿಯಾಗಿದ್ದು ಎರಡು ಮರಿಗಳನ್ನು ಹೊಂದಿದೆಯಂತೆ. ಈ ವ್ಯಾಪ್ತಿಯಲ್ಲಿ ಇದುವರೆಗೆ ನಾಲ್ಕು ಜಾನುವಾರುಗಳನ್ನು ಈ ಹುಲಿ ಬಲಿತೆಗೆದುಕೊಂಡಿದೆ.
ಕಳೆದ ಕೆಲವು ಸಮಯಗಳಿಂದ ಇದು ಕಾಣಿಸಿಕೊಂಡಿರಲಿಲ್ಲ ಹೀಗಾಗಿ ಹುಲಿಯ ಕಾಟ ತಪ್ಪಿತು ಎಂದು ಜನ ನೆಮ್ಮದಿಯಾಗಿದ್ದರು. ಆದರೆ ಇಲ್ಲಿನ ತರಗನ್ ಮಾವಿನ ಎಸ್ಟೇಟ್ನಲ್ಲಿ ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ದಾಳಿ ಮಾಡಿ ಹಸುವೊಂದನ್ನು ಕೊಂದುಹಾಕಿದೆ.
ದನ ಮೇಯಿಸುತ್ತಿದ್ದ ರಾಮೇಗೌಡ ಎಂಬುವರ ಎದುರೇ ಹುಲಿ ದಾಳಿ ಮಾಡಿದೆ. ಅವರು ಹೆದರಿ ಕಿರುಚಿಕೊಂಡಿದ್ದು ಇದರಿಂದ ಹೆದರಿದ ಹುಲಿ ಹಸುವನ್ನು ಎಳೆದೊಯ್ಯಲು ಸಾಧ್ಯವಾಗದೆ ಬಿಟ್ಟು ಹೋಗಿದೆ.
ಅರಣ್ಯ ಇಲಾಖೆಯು ಹುಲಿಯನ್ನು ಸೆರೆಹಿಡಿಯಲು ಆನೆಗಳ ಮೂಲಕ ಕೂಂಬಿಂಗ್ ಹಾಗೂ ಬೋನಿಟ್ಟು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ, ಇದೀಗ ಕೂಂಬಿಂಗ್ ಕಾರ್ಯಾಚರಣೆ ನಿಲ್ಲಿಸಿದ ನಂತರ ಆಗ್ಗಾಗ್ಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.
ಈ ಹಿಂದೆಯೇ ಅರಣ್ಯ ಇಲಾಖೆಯ ಪಿಸಿಸಿಎಫ್(ವನ್ಯಜೀವಿ) ಜಯರಾಂ ಸ್ಥಳಕ್ಕೆ ಭೇಟಿ ನೀಡಿ ಹುಲಿ ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಸೆರೆಹಿಡಿಯಲು ಸಾಧ್ಯವಾಗಿಲ್ಲ.
ಹುಲಿ ಮತ್ತೆ ಕಾಣಿಸಿಕೊಂಡಿರುವ ಕಾರಣ ಇಲ್ಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಓಡಾಡಲು ಭಯಗೊಂಡಿದ್ದಾರೆ. ಆದ್ದರಿಂದ ಆದಷ್ಟು ಬೇಗ ಹುಲಿಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಲಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.