ನಾಗರಹೊಳೆ ಉದ್ಯಾನದಲ್ಲಿ ಚುರುಕಿನಿಂದ ನಡೆದ ಹುಲಿಗಣತಿ ಕಾರ್ಯ
ಮೈಸೂರು, ಜನವರಿ 08: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಣತಿ ಆರಂಭವಾಗಿದ್ದು, ಹುಲಿಗಣತಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ಸ್ವಯಂ ಸೇವಕರಿಗೆ ಒಂದಷ್ಟು ಸಲಹೆಗಳನ್ನು ಅಧಿಕಾರಿಗಳು ನೀಡಿದರು.
ಜಿಲ್ಲೆಯ ಹುಣಸೂರಿನಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಗಣತಿದಾರರಿಗೆ ಸಲಹೆ ನೀಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಅವರು, ಪರಿಸರದ ಕುರಿತು ಕಾಳಜಿ ಮತ್ತು ಅಧ್ಯಯನದ ಜೊತೆಗೆ ಹುಲಿ ಗಣತಿಕಾರ್ಯಕ್ಕೆ ಬಂದಿರುವ ಸ್ವಯಂಸೇವಕರು ಕಾಡಿನೊಳಗೆ ವನ್ಯಜೀವಿಗಳ ದೈನಂದಿನ ಬದುಕಿಗೆ ಯಾವುದೇ ತೊಂದರೆಯಾಗದಂತೆ ಗಣತಿ ಕಾರ್ಯದಲ್ಲಿ ತೊಡಗಬೇಕೆಂದು ಹೇಳಿದರು.
ಅರಣ್ಯದಲ್ಲೀಗ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಿದ್ದು, ವನ್ಯಜೀವಿಗಳ ಜೀವನಕ್ರಮದಲ್ಲೂ ಸಾಕಷ್ಟು ಬದಲಾವಣೆಯ ಪರ್ವಕಾಲವಾಗಿದೆ. ಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಾಕಿರುತ್ತಾರೆ. ಇದನ್ನು ಕಾಡ್ಗಿಚ್ಚು ಎಂದು ಪರಿಗಣಿಸಿ ಗಾಬರಿಯಾಗಬೇಡಿ ಎಂದು ಕಿವಿಮಾತು ಹೇಳಿದರು.
ನಾಗರಹೊಳೆ ಅಭಯಾರಣ್ಯದಲ್ಲಿ ಶುರುವಾಗಿದೆ ಹುಲಿ ಗಣತಿ
ಉದ್ಯಾನವ್ಯಾಪ್ತಿಯ ಅಂತರಸಂತೆ ವಲಯ 4200 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ 1800 ಕಿ.ಮೀ.ವ್ಯಾಪ್ತಿಯಲ್ಲಿ ಮಾತ್ರ ದಟ್ಟ ಕಾಡಿದೆ. ಮಿಕ್ಕೆಲ್ಲವೂ ಕಾಫಿ, ಏಲಕ್ಕಿ ಎಸ್ಟೇಟ್ ಗಳಾಗಿ ಮಾರ್ಪಟ್ಟಿವೆ. ಪರಿಸ್ಥಿತಿ ಹೀಗಿರುವಾಗ ವನ್ಯಜೀವಿಗಳು ತಮ್ಮ ಸಹಜ ಜೀವನ ಕ್ರಿಯೆಗಾಗಿ ಕಾಡಿನಿಂದ ಹೊರಬರುವುದು ಮಾಮೂಲಿಯಾಗಿದೆ ಎಂದರು.
ಎಂಸ್ಟ್ರೈಪ್ ಸಾಫ್ಟ್ ವೇರ್ ನಿಂದ ಹುಲಿ ಗಣತಿ
ಹುಲಿ ಗಣತಿಗಾಗಿ ಇಕೋಲಾಜಿಕಲ್ ಎಂಬ ಹೊಸ ಆಪ್ ನ್ನು ಇಲಾಖೆ ಸಿದ್ಧಪಡಿಸಿದ್ದು, ಇದರಲ್ಲಿ ಎಂಸ್ಟ್ರೈಪ್ ಎಂಬ ಸಾಫ್ಟ್ ವೇರ್ ಮೂಲಕ ಹುಲಿ ಗಣತಿ ಕಾರ್ಯ ನಡೆಸಲು ಸುಲಭ ಸಾಧನ ಅಳವಡಿಸಲಾಗಿದೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಎಂದರು.
ಅರಣ್ಯದಲ್ಲಿ ಸಹಜತೆಯನ್ನು ಕಾಪಾಡುವಲ್ಲಿ ಬದ್ಧತೆ ಇರಲಿ
ವನ್ಯಜೀವಿಗಳ ಆಹಾರ ಚಕ್ರದಲ್ಲಿ ಹುಲಿಯ ಪಾತ್ರವೇ ಬಹುಮುಖ್ಯವಾಗಿದ್ದು, ಅರಣ್ಯದಲ್ಲಿನ ನೀರಿನ ಸಂಪನ್ಮೂಲ ಅಭಿವೃದ್ಧಿಗೂ ಈ ವನ್ಯಜೀವಿಗಳ ಆಹಾರ ಚಕ್ರವೇ ಬಹುಮುಖ್ಯ. ಹೀಗಾಗಿ ಸ್ವಯಂಸೇವಕರು ಯಾವುದೇ ಪ್ರಾಣಿಗಳ ಜೊತೆ ಲಘುವಾಗಿ ನಡೆದುಕೊಳ್ಳದೇ ಅರಣ್ಯದಲ್ಲಿ ಸಹಜತೆಯನ್ನು ಕಾಪಾಡುವಲ್ಲಿ ಬದ್ಧತೆ ತೋರಬೇಕು ಎಂದರು.
ನಾಗರಹೊಳೆ ಉದ್ಯಾನದಲ್ಲಿ ಸಫಾರಿಗೆ ಅವಕಾಶ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜ.8ರಿಂದ ಪ್ರಾರಂಭಗೊಳ್ಳಲಿರುವ ರಾಷ್ಟ್ರಮಟ್ಟದ ಹುಲಿಮತ್ತಿತರ ಪ್ರಾಣಿ-ಪಕ್ಷಿ ಹಾಗೂ ವನವೃಕ್ಷಗಳ ಗಣತಿ ಕಾರ್ಯಕ್ಕೆ ಆಡಚಣೆಯಾಗಬಹುದೆಂದು ಅರಣ್ಯ ಇಲಾಖೆ ಸಫಾರಿಯನ್ನು ರದ್ದು ಮಾಡಿತ್ತು. ಆದರೆ ಜಂಗಲ್ ರೆಸಾರ್ಟ್, ಖಾಸಗಿ ಹೋಟೆಲ್ ಉದ್ಯಮಗಳು ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಿಂದೆಯೇ ಮುಂಗಡವಾಗಿ ಬುಕ್ ಮಾಡಿರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಮತ್ತೆ ಅರಣ್ಯ ಇಲಾಖೆ ಸಫಾರಿ ನಿರ್ಬಂಧ ಹಿಂಪಡೆದಿದೆ.
ಸಫಾರಿ ಸಮಯ ಬದಲಾವಣೆ
ಗಣತಿ ವೇಳೆ ಸಫಾರಿ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಬಂದ್ ಬದಲಾಗಿ, ಸಪಾರಿ ಸಮಯವನ್ನು 3 ಗಂಟೆಗಳಿಂದ ಒಂದೂವರೆ ಗಂಟೆಗಳಿಗೆ ನಿಗದಿಗೊಳಿಸಲಾಗಿದೆ.