ತಿಂಡಿ ತಟ್ಟೆ ಬಿಸಾಡಿ ದರ್ಪ ತೋರಿದ ಟಿಕೆಟ್ ಕಲೆಕ್ಟರ್
ಮೈಸೂರು, ಜೂನ್ 18 : ಮೈಸೂರಿನ ಟಿಕೆಟ್ ಕಲೆಕ್ಟರ್ ಓರ್ವರು ಚಾಲಕ ಮತ್ತು ನಿರ್ವಾಹಕರು ಉಪಹಾರ ಸೇವಿಸುತ್ತಿರುವಾಗ ಪ್ಲೇಟ್ ಕಸಿದು ಅಮಾನವೀಯವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಾತಗಳ್ಳಿ ಬಸ್ ಡಿಪೋದಿಂದ ಬಂದಿದ್ದ ಚಾಲಕ ಕೆಂಪೇಗೌಡ ನಿವಾ೯ಹಕನೊಂದಿಗೆ ನಗರ ಬಸ್ ನಿಲ್ದಾಣದಲ್ಲಿನ ಕ್ಯಾಂಟಿನ್ಗೆ ತೆರಳಿ ಉಪಹಾರ ಸೇವನೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಸಂಚಾರ ನಿಯಂತ್ರಕ ಶ್ರೀನಿವಾಸ್ ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತು ಬಿಸಾಡಿ ಮೊದಲು ಕೆಲಸಕ್ಕೆ ಹೋಗಿ ಆಮೇಲೆ ತಿಂಡಿ ತಿನ್ನಿ ಎಂದು ದಪ೯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೆ ಸಮಯವಾಗಿದೆ ಬಸ್ ಬಿಡುವುದು ಯಾವಾಗ ಎಂದು ಟಿಕೆಟ್ ಕಲೆಕ್ಟರ್ ಶ್ರೀನಿವಾಸ್ ಪ್ರಶ್ನಿಸಿ ಚಾಲಕನ ಕೈಯ್ಯಲ್ಲಿದ್ದ ಉಪಹಾರದ ತಟ್ಟೆಯನ್ನು ಎತ್ತಿ ಬಿಸಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಳಿದ ಚಾಲಕರು, ನಿರ್ವಾಹಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಚಾಲಕ ಕೆಂಪೇಗೌಡ ಓರ್ವರೇ ಪ್ರತಿಭಟನೆ ನಡೆಸಿ, ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಉಪಹಾರ ಸೇವಿಸುತ್ತಿದ್ದೆ. ಆದರೆ ಅವರು ನನ್ನ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ, ನನ್ನಿಂದ ಉಳಿದವರ ಕೆಲಸಕ್ಕೆ ತೊದರೆಯಾಗುವುದು ಬೇಡ. ಉಳಿದವರು ಕೆಲಸ ನಿರ್ವಹಿಸಿ. ನಾನೊಬ್ಬನೇ ಹೋರಾಡುತ್ತೇನೆ ಎಂದು ಪಟ್ಟು ಹಿಡಿದು ಒಬ್ಬರೇ ಪ್ರತಿಭಟನೆ ನಡೆಸಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಹಾಗೂ ಪೊಲೀಸರು ಸಮಸ್ಯೆಯನ್ನು ತಿಳಿಗೊಳಿಸಿದರು.