ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ವೇಳೆ ಮೂವರು ಅಸ್ವಸ್ಥ
ಮೈಸೂರು, ಸೆಪ್ಟೆಂಬರ್ 7: ಒಂದೆಡೆ ಮಂಡ್ಯದಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ, ಇತ್ತ ಶ್ರೀರಂಗಪಟ್ಟಣದಲ್ಲಿ ತಮಿಳುನಾಡಿನತ್ತ ಹರಿದುಹೋಗುತ್ತಿರುವ ನೀರನ್ನು ಕಂಡು ರೈತರ ಕಣ್ಣಲ್ಲಿ ರಕ್ತ ಹರಿದ ಅನುಭವವಾಗುತ್ತಿದೆ. ಆಕ್ರೋಶ ಉಕ್ಕಿ ಹರಿಯುತ್ತಿದೆ.
ರಾತ್ರಿಯಿಂದಲೇ ತಮಿಳುನಾಡಿಗೆ ಕೆ.ಆರ್.ಎಸ್.ನಿಂದ ನೀರು ಹರಿದು ಹೋಗುತ್ತಿದೆ. 13 ಸಾವಿರ ಕ್ಯುಸೆಕ್ ನೀರು ಹರಿದು ಹೋಗುತ್ತಿದ್ದು, ಇದರಿಂದ ರೊಚ್ಚಿಗೆದ್ದ ರೈತರು ಕೆ.ಆರ್.ಎಸ್. ಬಳಿಯ ಕಾವೇರಿ ನದಿಗಿಳಿದು ಪ್ರತಿಭಟಿಸಿದ್ದಾರೆ. ಇದೇ ವೇಳೆ ಮೂವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.[ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ?]
ಪಾಂಡವಪುರ ತಾಲೂಕಿನ ಎಂ.ಬೆಟ್ಟಹಳ್ಳಿ ಗ್ರಾಮದ ಜಯಣ್ಣಾಚಾರಿ, ಕಟ್ಟೇರಿಯ ವಿಷಕಂಠ ಹಾಗೂ ಪ್ರಭಾಕರ್ ಅಸ್ವಸ್ಥಗೊಂಡಿದ್ದು, ಅವರಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತಿಭಟನೆ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿದ ಜಯಣ್ಣಾಚಾರಿ, ವಿಷಕಂಠ ಹಾಗೂ ಪ್ರಭಾಕರ್ ಅಸ್ವಸ್ಥರಾದರು. ಕೂಡಲೇ ಇವರನ್ನು ಜತೆಗಿದ್ದ ಪ್ರತಿಭಟನಾಕಾರರು ಅವರನ್ನು ನೀರಿನಿಂದ ಮೇಲೆತ್ತಿ, ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು.
ಬ್ಯಾರಿಕೇಡ್ ನದಿಗೆ: ಕೆಆರ್ಎಸ್ ನಲ್ಲಿ ಪ್ರತಿಭಟಿಸುತ್ತಿದ್ದ ಯುವಕರ ಗುಂಪು, ಕೆ.ಆರ್.ಎಸ್. ಪ್ರವೇಶ ದ್ವಾರವನ್ನು ಪ್ರವೇಶಿಸದಂತೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದು ನಡೆಯಿತು.[ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ]
ಇನ್ನೊಂದೆಡೆ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಯಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತನೊಬ್ಬ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ತಾಲೂಕಿನ ಕೆಂಗಾರಕೊಪ್ಪಲು ಗ್ರಾಮದ ನಿವಾಸಿ ಸೂರಿ (55) ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ರೈತ. ಆಗ ಸ್ಥಳದಲ್ಲಿದ್ದ ಪೊಲೀಸರು ಇತರೆ ರೈತರು ಆತನನ್ನು ರಕ್ಷಿಸಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ಘೋಷಣೆ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ರೈತ ಸಂಘದ ಕಾರ್ಯಕರ್ತರು ಪಟ್ಟಣದ ವೆಲ್ಲೆಸ್ಸಿ ಸೇತುವೆ ಬಳಿ ಕಾವೇರಿ ನದಿಗಿಳಿದು, ಪ್ರತಿಭಟನೆ ನಡೆಸಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಘೋಷಣೆ ಕೂಗಿದರು.[ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಹಗ್ಗವನ್ನು ಹಿಡಿದು ನಿಂತಿದ್ದರು. ಯಾವುದೇ ಅನಾಹುತ ಆಗಬಹುದು ಎಂಬ ಅತಂಕದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಕಾಯುತ್ತಿದ್ದ ದೃಶ್ಯ ಕಂಡುಬಂದರೆ, ಮತ್ತೊಂದೆಡೆ ಪ್ರತಿಭಟನಾಕಾರರು ನದಿಯಲ್ಲಿ ನಿಂತು ಊಟ-ತಿಂಡಿ ಮಾಡಿದರು.