ಲೆಕ್ಕಕ್ಕೇ ಸಿಗದ ರೈತರ ಆತ್ಮಹತ್ಯೆ ಸರಣಿಗೆ ಮೈಸೂರಿನ ಮೂವರು ಸೇರ್ಪಡೆ
ಬೆಳೆ ನಷ್ಟ ಹಾಗೂ ಸಾಲದ ಬಾಧೆಯಿಂದಾಗಿ ಬೇಸತ್ತು ಆತ್ಮಹತ್ಯೆಗೊಂಡ ರೈತರು; ಒಬ್ಬ ರೈತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತಿಬ್ಬರು ರೈತರು ನೇಣಿಗೆ ಶರಣಾಗಿದ್ದಾರೆ.
ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಮೈಸೂರು ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಯಾಚೇನಹಳ್ಳಿ ಗ್ರಾಮದ ರೈತ ಅಂಕೇಗೌಡ, ಚಿಕ್ಕವಡ್ಡರಗುಡಿ ಗ್ರಾಮದ ರೈತ ಕೃಷ್ಣೇಗೌಡ ಹಾಗೂ ಮಂಡಿಗನಹಳ್ಳಿ ಗ್ರಾಮದ ನಿವಾಸಿ ಸ್ವಾಮಿಗೌಡ ಎಂಬುವರು ಮೃತರಾದವರು.
ಬನ್ನೂರು ಸಮೀಪದ ಯಾಚೇನಹಳ್ಳಿ ಗ್ರಾಮದ ರೈತ ಅಂಕೇಗೌಡ (62) ಅವರು ಮೂರು ಎಕರೆ ಜಮಿಣು ಹೊಂದಿದ್ದರು. ಹಿಪ್ಪುನೇರಳಿ ಮತ್ತು ಕಬ್ಬು ಬೆಳೆದಿದ್ದರು. ಕೊಳವೆಬಾವಿ ಕೊರೆಯಿಸಿದ್ದರಾದರೂ ಅದು ವಿಫಲವಾಗಿ ಸಾಲಗಾರರಾಗಿದ್ದರು. ಸಾಲವನ್ನು ತೀರಿಸಲಾಗದೆ ಬೇಸತ್ತಿದ್ದ ಇವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಬ್ಬ ರೈತ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ನಿವಾಸಿ ರೈತ ಕೃಷ್ಣೇಗೌಡ(65) ಅವರು ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಅರ್ಧ ಎಕರೆ ಜಮೀನು ಖರೀದಿ ಮಾಡಲು ಕೈಸಾಲ 1.50ಲಕ್ಷ ರೂ. ಸಹಕಾರ ಸಂಘದಿಂದ 30ಸಾವಿರ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳಿಂದಲೂ ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲು ಮಾತ್ರ ಸಾಧ್ಯವಾಗಿರಲಿಲ್ಲ.
ಈ ಬಾರಿ ಮಳೆ ಬಾರದ ಕಾರಣದಿಂದ ಬೆಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲದ ಬಡ್ಡಿ ಹೆಚ್ಚುತ್ತಲೇ ಹೋಯಿತಲ್ಲದೆ, ದಿನಕಳೆಯುವುದೇ ಕಷ್ಟವಾಗಿತ್ತು. ಇದರ ಮಧ್ಯೆ ಸಾಲಗಾರರ ಕಾಟ ಹೆಚ್ಚಾದ ಕಾರಣ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೀಗ ಇನ್ನೊಬ್ಬ್ಬ ರೈತ ಕೆ.ಆರ್.ನಗರದ ಮಂಡಿಗನಹಳ್ಳಿ ಗ್ರಾಮದ ನಿವಾಸಿ ಸ್ವಾಮಿಗೌಡ(60) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತ ಸ್ವಾಮೀಗೌಡ ತನ್ನ ಮೂರು ಎಕರೆ ಜಮೀನಿನಲ್ಲಿ ತೆಂಗು, ಸೇವಂತಿಗೆ ಬೆಳೆ ಬೆಳೆಯಲು ಕೊಳವೆ ಬಾವಿ ಕೊರೆಸಿದ್ದರೂ ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಸುಮಾರು ಮೂರು ಲಕ್ಷದಷ್ಟು ಸಾಲವಾಗಿತ್ತು. ಇದನ್ನು ತೀರಿಸಲು ಆಗದೆ ಸಾಲಗಾರರನ್ನು ತಪ್ಪಿಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಮೇಲಿಂದ ಮೇಲೆ ಸಾಲಗಾರರು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಒತ್ತಡ ಹೇರುತ್ತಿದ್ದರು. ಸದ್ಯದ ಸ್ಥಿತಿಯಲ್ಲಿ ಸಾಲ ತೀರಿಸುವುದು ಸಾಧ್ಯವಾಗದ ಕಾರಣದಿಂದ ಬೇಸತ್ತು ಯಾರು ಇಲ್ಲದ ಸಂದರ್ಭ ಮನೆ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಸಾಲಿಗ್ರಾಮ ಸಬ್ಇನ್ಸ್ ಪೆಕ್ಟರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿ ಮಹಜರ್ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಒಪ್ಪಿಸಿದರು.