ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ
ಮೈಸೂರು, ಫೆಬ್ರವರಿ,08: ಸುತ್ತೂರು ಜಾತ್ರೆ ದಿನದಿಂದ ದಿನಕ್ಕೆ ಕಳೆಕಟ್ಟುತ್ತಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸಿ ಪುನೀತರಾದರು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಹಣ್ಣು-ಜವನವನ್ನು ಭಕ್ತಿಭಾವದಿಂದ ನಮಿಸಿ ಕೃತಾರ್ಥರಾದರು.
ಶ್ರೀ ಗದ್ದಿಗೆಗೆ ಅಗ್ರಪೂಜೆ ವಿವಿಧ ಅಭಿಷೇಕ, ಬಿಲ್ವಾರ್ಛನೆ, ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ ಶ್ರೀಗಳ ಉತ್ಸವಮೂರ್ತಿಯನ್ನು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಿ ಬಳಿಕ ವಿಶೇಷ ಹೂವಿನ ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಸಾಂಪ್ರದಾಯಿಕ ಪದ್ಧತಿಯಂತೆ ರಥದ ಚಕ್ರಗಳಿಗೆ ಪೂಜೆ, ಈಡುಗಾಯಿ ಒಡೆದು ಮಹಾಮಂಗಳಾರತಿ ಮಾಡಿದ ನಂತರ ಶಿವರಾತ್ರೀದೇಶಿಕೇಂದ್ರಗಳ ಸಮ್ಮುಖದಲ್ಲಿ ವಿವಿಧ ಮಠದ ಸ್ವಾಮಿಗಳು ಪುಷ್ವಾರ್ಚನೆ ನೆರೇರಿಸಿದರು. ಆ ನಂತರ ರಥ ಎಳೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥ ಚಲಿಸುತ್ತಿದ್ದಂತೆಯೇ ರಥದ ಮುಂಭಾಗ ವೀರಗಾಸೆ, ಡೊಳ್ಳುಕುಣಿತ, ನವಿಲಿ ಕುಣಿತ, ಹುಲಿವೇಷ, ನಾದಸ್ವರ, ಗಾರುಡಿಗೊಬ್ಬೆ, ಸೇರಿದಂತೆ 33 ಕ್ಕೂ ಹೆಚ್ಚು ಕಲಾ ತಂಡಗಳು ಸಾಂಪ್ರದಾಯಿಕವಾಗಿ ನರ್ತನ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದ್ದು ರಥೋತ್ಸವದ ವೈಭವತೆಗೆ ಸಾಕ್ಷಿಯಾಯಿತು.[ಮೈಸೂರಿನ ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ]
ರಥ ಸಾಗುವ ರಸ್ತೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿಗಳನ್ನು ಬಿಡಿಸಿ ಸ್ವಾಗತಿಸಿದ ಭಕ್ತರು ಪೂಜೆ ಮಾಡಿ ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಮಿಸಿದ ಭಕ್ತಾಧಿಗಳು ರಥವನ್ನು ಎಳೆದು ಪುನೀತರಾದರಲ್ಲದೆ, ಶ್ರೀಗಳಿಗೆ ಮೆರವಣಿಗೆಯುದ್ದಕ್ಕೂ ಜಯಘೋಷ ಮೊಳಗಿಸಿದರು. ರಥವು ಸುತ್ತೂರಿನ ಪ್ರಮುಖ ಬೀದಿಗಳಲ್ಲಿ ಸಾಗಿ, ಯಾವುದೇ ಅಡೆತಡೆಯಿಲ್ಲದೆ ಸ್ವಸ್ಥಾನಕ್ಕೆ ಹಿಂತಿರುಗಿತು. ಜಾನಪದ ಕಲೆಗಳ ಅನಾವರಣ ಜಾತ್ರೆಗೆ ಇನ್ನಷ್ಟು ಮೆರಗು ತಂದಿದ್ದು, ಜಾನಪದದ ನಾನಾ ಶೈಲಿಗಳನ್ನು ಕಂಡು ಜನರು ಸಂತೋಷಗೊಂಡರು.
ಲಂಬಾಣಿ ನೃತ್ಯ
ಲಂಬಾಣಿ ಜನಾಂಗದ ರಂಗು ರಂಗಿನ ವೇಷ, ಅವರ ಸಂಸ್ಕೃತಿ ಬಿಂಬಿಸುವ ವಸ್ತ್ರ, ವೈಡೂರ್ಯಗಳು, ಗುಂಪಿನೊಂದಿಗೆ ಹೆಜ್ಜೆ ಹಾಕಿದ ಲಂಬಾಣಿ ಮಹಿಳೆಯರ ನೃತ್ಯ ಜಾತ್ರೆಯ ಜನರನ್ನು ಸೆಳೆಯಿತು. ಅವರ ವಸ್ತ್ರ ಇಡೀ ಸಮುದಾಯ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತದೆ. ಇದು ಸುತ್ತೂರು ಜಾತ್ರೆಯ ಒಂದು ಭಾಗವೇ ಆಗಿತ್ತು.
ಡೊಳ್ಳು ಮಹಾಶಯರು
ಗಂಡು ಕಲೆ ಎಂದೇ ಪ್ರಸಿದ್ಧಿಯಾದ ಡೊಳ್ಳು ಕುಣಿತ ಸುತ್ತೂರು ಜಾತ್ರೆಯ ಸೊಬಗನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು. ಆ ಡೊಳ್ಳಿನ ಶಬ್ದ, ಕಾಲಿನ ಗೆಜ್ಜೆ ದನಿ, ತಾಳಕ್ಕೆ ತಕ್ಕಂತೆ ಬಾಯಿಯಿಂದ ಹೊರಡುವ ಹೊಯ್ ಎಂಬ ಸ್ವರ ಎಲ್ಲವೂ ಜಾತ್ರೆಗೆ ಬಂದ ಜನರನ್ನು ಕೆಲವು ಕ್ಷಣ ಸ್ತಬ್ದಗೊಳಿಸಿದವು.
ಹುಲಿವೇಷ ಕುಣಿತ
ಮೈ ತುಂಬಾ ಹುಲಿಯ ಚರ್ಮವನ್ನು ಹೋಲುವಂತಹ ಕಪ್ಪು, ಹಳದಿ ಪಟ್ಟೆಗಳನ್ನು ಹಾಕಿಕೊಂಡು ತಮಟೆ ಸದ್ದಿಗೆ ಆತ ಹೆಜ್ಜೆ ಹಾಕುತ್ತಿದ್ದರೆ ಆ ಗತ್ತು ನೋಡುವುದಕ್ಕೆ ಏನೋ ಒಂದು ರೀತಿಯ ಖುಷಿ, ಇದು ಚಿತ್ರದುರ್ಗ ಇನ್ನಿತರ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತದೆ.
ಸುತ್ತೂರು ಜಾತ್ರೆಯಲ್ಲಿ ಮಕ್ಕಳ ವೀರಗಾಸೆ
ದೇವರ ಜಾತ್ರೆ, ಮೆರವಣಿಗೆ, ಊರಿನ ಹಬ್ಬ ಹೀಗೆ ಯಾವುದೇ ಕಾರ್ಯಕ್ರಮವು ವೀರಗಾಸೆ ನೃತ್ಯ ಇಲ್ಲದೆ ಪರಿಪೂರ್ಣಗೊಳ್ಳುವುದೇ ಇಲ್ಲ. ಮಕ್ಕಳು ವೀರಗಾಸೆ ನೃತ್ಯ ಮಾಡಿದ್ದು ವಿಶೇಷವಾಗಿತ್ತಲ್ಲದೇ ಸುಮಾರು ೨೦ಕ್ಕೂ ಹೆಚ್ಚು ಮಕ್ಕಳು ವೀರಗಾಸೆ ನೃತ್ಯ ಮಾಡಿ ಜನರ ಮೆಚ್ಚುಗೆ ಗಳಿಸಿದರು.
ವೀರಗಾಸೆಯ ಪ್ರತಾಪದ ನೋಟ
ಆಹಾ ಆಹಾ ರುದ್ರ ಎಂಬ ವಾಕ್ಯದೊಂದಿಗೆ ಆರಂಭವಾಗುವ ಈ ವೀರಗಾಸೆ ವೀರಭದ್ರನ ರುದ್ರ ಪ್ರತಾಪ ನೃತ್ಯ ಎನ್ನುತ್ತಾರೆ. ತಲೆಗೆ ಬಳಿಯ ಚೌಲಿ, ಕಾವಿ ಅಂಗಿ, ಕಾವಿ ಪಂಚೆ, ರುದ್ರಾಕ್ಷಿ ಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರ ಸ್ವಾಮಿಯ ಹಲಗೆ, ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆ ಕಾಲಿಗೆ ಗೆಜ್ಜೆ ಇದು ವೀರಗಾಸೆಯ ವೇಷಭೂಷಣ, ಇದಕ್ಕೆ ತನ್ನದೇ ಆದ ಹೆಜ್ಜೆಗಳಿದ್ದು, ಜನಪದ ಕಲೆಗಳಲ್ಲಿ ಇದ್ದಕ್ಕೆ ವಿಶಿಷ್ಟ ಪ್ರಾಶಸ್ತ್ಯವಿದೆ.
ಮಹಿಳಾ ಡೊಳ್ಳು
ಡೊಳ್ಳು ಕುಣಿತವನ್ನು ಗಂಡು ಕಲೆ ಎಂದು ಕರೆಯುತ್ತಿದ್ದರು. ಆದರೆ ಇದೀಗ ಈ ಕಲೆಯಲ್ಲಿ ಮಹಿಳೆಯರು ಪರಿಣಿತಿ ಪಡೆಯುತ್ತಿದ್ದು, ಗಂಡು ಮಕ್ಕಳಿಗೆ ಸಮಾನವಾಗಿ ಡೊಳ್ಳು ಹಿಡಿದು ನಿಂತರೆಂದರೆ ಜನರಿಂದ ಚಪ್ಪಾಳೆ, ಶ್ಲಾಘನೆ ಮಾತನ್ನು ಪಡೆಯದೆ ವಾಪಸ್ ಹಿಂತಿರುಗುವುದೇ ಇಲ್ಲ. ಮಹಿಳೆಯರು ಪುರುಷರಿಗೆ ಸಮಾನವಾಗಿ ಡೊಲ್ಲು ನೃತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಕೂಡ ಜಾತ್ರೆಯ ಒಂದು ವಿಶೇಷವಾಗಿತ್ತು.
ಸಾವಿರಾರು ಭಕ್ತರ ಸಮಾಗಮ
ಸಾವಿರಾರು ಭಕ್ತರ ಸಮಾಗಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ರಥೋತ್ಸವದ ದಿನ ಸಾವಿರಾರು ಭಕ್ತರು ಆಗಮಿಸಿದ್ದು, ಜಾತ್ರೆ ಭಕ್ತವೃಂದದಿಂದ ತುಂಬಿತುಳುಕುತ್ತಿತ್ತು.