ದಸರೆ ದೀಪಾಲಂಕಾರಕ್ಕೆ ಹೊಸ ಮೆರುಗು: ಝಗಮಗಿಸಲಿವೆ 23 ವೃತ್ತಗಳು
ಮೈಸೂರು, ಸೆಪ್ಟೆಂಬರ್. 28 : ನಾಡಹಬ್ಬ ದಸರಾಗೆ ಈ ಬಾರಿ ಒಂದಿಲ್ಲೊಂದು ಹೊಸತನ ನೀಡಲಾಗುತ್ತಿದ್ದು, ಈ ವರ್ಷ ಚಾಮುಂಡಿ ಬೆಟ್ಟದ ರಸ್ತೆಗೆ ವಿಶೇಷ ದೀಪಾಲಂಕಾರ ಮಾಡಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಈ ಕುರಿತು ಈಗಾಗಲೇ ಕಾರ್ಯ ಪ್ರವೃತ್ತರಾಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಆಕರ್ಷಕ ಅಲಂಕಾರಕ್ಕೆ ಸಜ್ಜಾಗಿದೆ. ಸಾಮಾನ್ಯವಾಗಿ ಬೆಟ್ಟದ ಮೇಲ್ಭಾಗದಲ್ಲಿ ಕನ್ನಡದಲ್ಲಿ ಸುಸ್ವಾಗತ ಹಾಗೂ ಇಂಗ್ಲಿಷಿನಲ್ಲಿ ವೆಲ್ ಕಮ್ ಎಂಬ ಪದಗಳಿಗೆ ದೀಪಾಲಂಕಾರ ಮಾಡುವುದು ವಾಡಿಕೆ.
ಹಿಂದೆಂದಿಗಿಂತಲೂ ರಂಗೇರಲಿದೆ ಯುವ ದಸರಾ: ಯಾರೆಲ್ಲಾ ಬರ್ತಾರೆ ಗೊತ್ತಾ?
ಆದರೆ, ಈ ಬಾರಿ ಬೆಟ್ಟದ ತಪ್ಪಲಿಂದ ದೇವಸ್ಥಾನದವರೆಗಿನ ರಸ್ತೆಯನ್ನು ಬೆಳಗಿಸುವ ಪ್ರಯತ್ನ ನಡೆದಿದೆ. ನಗರದಲ್ಲಿನ ಹಲವು ರಸ್ತೆಗಳು, ವೃತ್ತಗಳನ್ನು ವಿಶೇಷವಾಗಿ ದೀಪಗಳಿಂದ ಸಿಂಗರಿಸಲಾಗುತ್ತಿದೆ. ವಿದ್ಯುತ್ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಸುಮಾರು 35 ಕಿಮೀ ರಸ್ತೆ, 23 ವೃತ್ತಗಳನ್ನು ಝಗಮಗಿಸುವ ದೀಪಗಳಿಂದ ಅಲಂಕರಿಸಲಾಗುವುದು.
ವಿದೇಶದಲ್ಲಿ ದಸರಾ ಮಹೋತ್ಸವದ ಪ್ರಚಾರ ಕೈಗೊಂಡ ಸಚಿವ ಸಾ.ರಾ.ಮಹೇಶ್
ಇದು ಇದೇ ಮೊದಲ ಪ್ರಯತ್ನವೇನಲ್ಲ. ಆದರೆ, ಎರಡು ವರ್ಷಗಳಿಂದ ಸರಳ ದಸರಾ ಎಂಬ ಕಾರಣ ನೀಡಿ ರಸ್ತೆಗೆ ದೀಪಾಲಂಕಾರ ಮಾಡಿರಲಿಲ್ಲ. ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಸಾಗುವ ರಸ್ತೆಯವರೆಗೆ ಮಾತ್ರ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ಬಾರಿ ದೀಪಾಲಂಕಾರ ಹೇಗಿರುತ್ತೇ ಗೊತ್ತಾ? ಸದ್ಯ ಲೇಖನದಲ್ಲಿ ಓದಿ ತಿಳಿಯಿರಿ.
ಮಹಿಷಾಸುರ ಸಂಹಾರದ ಚಿತ್ರಣ
ಈ ಸಾರಿ ಚಾಮುಂಡಿ ಬೆಟ್ಟದ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯನ್ನು ಚಿತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಾಮುಂಡೇಶ್ವರಿಯ ಪ್ರತಿಕೃತಿಯಿಂದ ಆರಂಭವಾಗಿ, ಮಹಿಷಾಸುರ, ಮಹಿಷಾಸುರ ಸಂಹಾರ ಇತ್ಯಾದಿ ಚಿತ್ರಣಗಳೂ ಇರಲಿವೆ.
ಹಲವು ಪ್ರತಿಕೃತಿಗಳ ಅಳವಡಿಕೆ
ಈ ವರ್ಷ ದೇವರಾಜ ಅರಸು ರಸ್ತೆ ಹಾಗೂ ನ್ಯಾಯಾಲಯ ಎದುರಿನ ಬುಲೆವಾರ್ಡ್ ರಸ್ತೆಗಳಿಗೆ ದೀಪಾಲಂಕಾರ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅರಸು ರಸ್ತೆಯಲ್ಲಿ ಪ್ರತಿವರ್ಷವೂ ದೀಪಾಲಂಕಾರ ಇದ್ದಿದ್ದೇ. ಆದರೆ, ಈ ವರ್ಷ ಕೇವಲ ದೀಪಾಲಂಕಾರ ಮಾತ್ರ ಇರದೇ ಹಲವು ಪ್ರತಿಕೃತಿಗಳನ್ನು ಅಳವಡಿಸಲಾಗುತ್ತಿದೆ.
ಇವೆರಡೂ ರಸ್ತೆಗಳಲ್ಲಿ ಈ ವರ್ಷ 'ವಾಕಿಂಗ್ ಪಾತ್' ಮಾಡಿರುವ ಕಾರಣ ಈ ರಸ್ತೆಗಳಲ್ಲಿ ನಡೆದಾಡುವ ಪ್ರವಾಸಿಗರು ದಸರೆಯ ಹಿನ್ನೆಲೆಯನ್ನು ತಿಳಿದುಕೊಳ್ಳುವುದೂ ಮುಖ್ಯ ಆಶಯ ಎಂದು ವಿಶ್ಲೇಷಿಸಲಾಗಿದೆ.
ಮೈಸೂರು ಪ್ರವಾಸೋದ್ಯಮ ವಿಶ್ವದ ಗಮನ ಸೆಳೆಯಲಿ:ಜಿಟಿ ದೇವೇಗೌಡ
9 ದಿನಗಳು ಮಾತ್ರ ದೀಪಾಲಂಕಾರ
ಕಳೆದ ವರ್ಷ ದಸರೆಯ ಸಂದರ್ಭದಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಬಂದಿದ್ದ ಕಾರಣ, ದೀಪಾಲಂಕಾರ ಅವಧಿಯನ್ನು ವಿಸ್ತರಿಸಲಾಗಿತ್ತು. ಈ ವರ್ಷ 9 ದಿನಗಳು ಮಾತ್ರ ದೀಪಾಲಂಕಾರ ಇರುವುದೇ ಅಥವಾ ವಿಸ್ತರಿಸುವುದೇ ಎಂಬುದು ತೀರ್ಮಾನವಾಗಬೇಕಿದೆ.
ಸೆಸ್ಕ್ ಅಧಿಕಾರಿಗಳು ಕೊಟ್ಟ ಮಾಹಿತಿ
ಈಗ ಎಲ್ಇಡಿ ದೀಪಗಳ ಬಳಕೆ ಆಗುತ್ತಿರುವ ಕಾರಣ ವಿದ್ಯುತ್ ಬಳಕೆ ಶೇ. 20ರಷ್ಟು ಕಡಿಮೆಯಾಗಿದೆ. ಹಾಗಾಗಿ, ಪ್ರವಾಸಿಗರಿಂದ ವ್ಯಕ್ತವಾಗುವ ಪ್ರತಿಕ್ರಿಯೆ ಹಾಗೂ ಬೇಡಿಕೆಯನ್ನು ನೋಡಿಕೊಂಡು ವಿಸ್ತರಿಸುವ ತೀರ್ಮಾನವನ್ನು ನಂತರ ಮಾಡಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ಮಾಹಿತಿ ನೀಡಿದರು.