ಇದೇ ಕೊನೇ ಟಿಪ್ಪು ಜಯಂತಿ, ಮೈಸೂರಿನಿಂದ ಪ್ರತಾಪ ಸಿಂಹ
ಮೈಸೂರು, ನವೆಂಬರ್ 8: ಟಿಪ್ಪು ಕುರಿತ ಧಾರಾವಾಹಿಯಲ್ಲಿ ಅಭಿನಯಿಸುವ ವೇಳೆ ನಟ ಸಂಜಯ್ ಖಾನ್ ಮೈ ಸುಟ್ಟುಕೊಂಡರು. ಲಂಡನ್ ಮ್ಯೂಸಿಯಂನಲ್ಲಿದ್ದ ಟಿಪ್ಪುವಿನ ಖಡ್ಗ ತಂದ ವಿಜಯ್ ಮಲ್ಯ ಉದ್ಯಮದಲ್ಲಿ ನಷ್ಟಕ್ಕೊಳಗಾಗಿ ದೇಶದಿಂದಲೇ ಪಲಾಯನ ಮಾಡಿದರು. ಇದೀಗ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸಿದ್ದರಾಮಯ್ಯ ಕೂಡ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧವೇಕೆ?
ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ವತಿಯಿಂದ ನಡೆದ ಟಿಪ್ಪು ಜಯಂತಿ ಆಚರಣೆ ವಿರೋಧಿ ಪ್ರತಿಭಟನೆ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಪ್ರತಾಪ ಸಿಂಹ, ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಹಾಗಾಗಿ ಇದೇ ಕೊನೆಯ ಬಾರಿಗೆ ಟಿಪ್ಪು ಜಯಂತಿ ಆಚರಣೆ ಆಗಲಿದೆ ಎಂದು ಹರಿಹಾಯ್ದರು.
ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಬದಲಿಗೆ ಮೈಸೂರು ಒಡೆಯರ್ ರ ಜಯಂತಿ ಆಚರಿಸಲಾಗುವುದು. ಟಿಪ್ಪು ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ಟಿಪ್ಪು ಡ್ರಾಪ್ ಮಾತ್ರ ಹೆಸರುವಾಸಿ. ಆದರೆ ಮೈಸೂರಿನ ಯದುವಂಶದ ಅರಸರು ನೀಡಿದ ಕೊಡುಗೆ ಹೆಚ್ಚು. ಹಾಗಾಗಿ ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಬದಲು ಒಡೆಯರ್ ಜಯಂತಿ ಆಚರಿಸಲಾಗುತ್ತದೆ ಎಂದು ಹೇಳಿದರು.