ನಾವೂ ಆಂತರಿಕ ಸಮೀಕ್ಷೆ ಮಾಡಿದ್ದೇವೆ, ಆದರೆ ಈಗಲೇ ಬಹಿರಂಗ ಪಡಿಸೋಲ್ಲ: ಸಿದ್ದು
ಮೈಸೂರು, ಡಿಸೆಂಬರ್ 8: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ. ಖಾಸಗಿ ವಾಹಿನಿ, ಸಂಸ್ಥೆಗಳು ಮಾಡಿರುವ ಸಮೀಕ್ಷೆಗೂ ಮೊದಲು ನಾವು ಕೂಡ ಸಮೀಕ್ಷೆ ಮಾಡಿಸಿದ್ದೇವೆ. ನಮ್ಮ ಪಕ್ಷದ ಸ್ಥಿತಿ ಹೇಗಿದೆ ಎಂದು ಸಮೀಕ್ಷೆ ಮಾಡಿಸಿದ್ದು ಈಗ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
AZ ಸಮೀಕ್ಷೆ: ರಾಜ್ಯದಲ್ಲಿ ದೋಸ್ತಿ ಸರ್ಕಾರ, JDS ಕಿಂಗ್ ಮೇಕರ್
ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ ಗಂಟುಮೂಟೆ ಕಟ್ಟಿಕೊಂಡು ಮೈಸೂರಿಗೆ ಹೋಗುತ್ತಾರೆ ಎಂದಿರುವ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ, ಆದರೆ ಅದು ಸಾಧ್ಯವಾಗುವುದಿಲ್ಲ. ಯಾವ ಕಾರಣಕ್ಕೂ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲ್ಲ. ಅವರು ಅಧಿಕಾರಕ್ಕೆ ಬರಲ್ಲ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಅವರು ಅವರ ನಾಲಿಗೆಯೇ ಅವರ ಸಂಸ್ಕೃತಿಯನ್ನು ಹೇಳುತ್ತದೆ ಎಂದು ಹರಿಹಾಯ್ದರಲ್ಲದೇ ನನಗೂ ಅವರಿಗಿಂತ ಕೆಟ್ಟದಾಗಿ ಬಯ್ಯಲು ಬರುತ್ತದೆ ಆದರೆ ನಾನು ಆ ರೀತಿ ಮಾತನಾಡೋದಿಲ್ಲ ಎಂದರು. ಪ್ರಧಾನಿಯನ್ನು ನೀಚ ಎಂದು ಕರೆದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದು ನಮ್ಮ ಪಕ್ಷದಲ್ಲಿನ ಶಿಸ್ತಿಗೆ ಸಾಕ್ಷಿಯಾಗಿದೆ ಎಂದರು.
ಹುಣಸೂರಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಬಿಜೆಪಿ ಯವರು ಕಾರಣರು ಎಂದು ಆರೋಪಿಸಿದ ಅವರು ಪ್ರತಾಪ್ ಸಿಂಹ ಸಂಸದನಾದ ಮಾತ್ರಕ್ಕೆ ಕಾನೂನನ್ನು ಉಲ್ಲಂಘಿಸುವುದು ಸರಿಯೇ? ಸ್ವೇಚ್ಛಾಚಾರದಿಂದ ವರ್ತಿಸುವುದು ಸರಿಯೇ? ಎಂದು ಪ್ರಶ್ನಿಸಿದರು.