ಮುಚ್ಚುತ್ತಿರುವ 28,847 ಕನ್ನಡ ಶಾಲೆಗಳಿಗೆ ಕಣ್ಣೀರು ಸುರಿಸುವವರು ಯಾರೂ ಇಲ್ಲ!
Recommended Video
ಮೈಸೂರು, ಜುಲೈ.06: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ 28,847 ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಸ್ತಾಪನೆ ಇದೆ. ವಿಚಿತ್ರವೆಂದರೆ ಈ ಬಗ್ಗೆ ತಥಾಕಥಿತ ಕನ್ನಡ ಹೋರಾಟಗಾರರು, ಬುದ್ಧಿಜೀವಿಗಳು, ಮಾತೃಭಾಷಾ ಶಿಕ್ಷಣ ಪರಿಣಿತರು ಯಾರೂ ಮಾತನಾಡುತ್ತಿಲ್ಲ.!
ಬಜೆಟ್ ಭಾಷಣದ ಪ್ರಕಾರ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಲಾಗುವುದು.
ಹಿಂದಿ ಏರಿಕೆ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷಿಕರಲ್ಲಿ ಗಣನೀಯ ಇಳಿಕೆ
ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಗುರುತಿಸಲಾಗಿದ್ದು, ಈ ಶಾಲೆಗಳನ್ನು ಹತ್ತಿರದ 8,530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು.
ಬಿಜೆಪಿ ಅಧಿಕಾರದಲ್ಲಿದ್ದಾಗ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಅಜೆಂಡಾದೊಂದಿಗೆ ಬಿಗಿ ಭಾಷಣ ಬಿಗಿಯುತ್ತಿದ್ದ ಗುಂಪಿತ್ತು. ಆದರೆ ಆ ಗುಂಪು ಈಗ ಮೌನವಾಗಿದೆ. 28,847 ಶಾಲೆಗಳನ್ನು ಮುಚ್ಚುವುದೆಂದರೆ ಸಣ್ಣ ಸಂಗತಿಯಲ್ಲ. ಸುಮಾರು 30,000ಕ್ಕೂ ಅಧಿಕ ಶಿಕ್ಷಕರ ಕುಟುಂಬ ಬೀದಿಗೆ ಬೀಳಲಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.
ಹೀಗಿದ್ದರೂ ಎಲ್ಲರ ದಿವ್ಯ ಮೌನದ ಹಿಂದಿನ ಕಾರಣ ಮಾತ್ರ ತಿಳಿಯುತ್ತಿಲ್ಲ. ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಖಾತೆಯ ನೇತೃತ್ವವನ್ನು ವಹಿಸಿಕೊಂಡಿರುವುದು ಬಿಎಸ್ ಪಿಯ ಮಾಜಿ ರಾಜ್ಯಾಧ್ಯಕ್ಷ ಎನ್ ಮಹೇಶ್. ಈ ಶಾಲೆ ಮುಚ್ಚುವ ಪ್ರಸ್ತಾಪಕ್ಕೆ ಅವರ ಬೆಂಬಲ ಇದೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ.