ವಿದ್ಯಾರ್ಥಿಗಳಿಂದ ಬೈಕ್ ಕಳವು, ಪೊಲೀಸರ ವಿರುದ್ಧವೇ ದೂರು
ಮೈಸೂರು, ಜನವರಿ 21 : ಶಾಲಾ ವಿದ್ಯಾರ್ಥಿಗಳು ಎಎಸೈ ಒಬ್ಬರ ಬೈಕ್ ಕದ್ದು, ಸಿಕ್ಕಿಬಿದ್ದ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ. ಪೊಲೀಸರು ವಿದ್ಯಾರ್ಥಿಗಳಿಗೆ ಥಳಿಸಿದರೆಂದು ಪೋಷಕರು ಶಾಲೆ ಮತ್ತು ಪೊಲೀಸರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಕುವೆಂಪು ನಗರ ಠಾಣಾ ವ್ಯಾಪ್ತಿಯ ಜ್ಞಾನಗಂಗಾ ಶಾಲೆಯ 9 ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳೆನ್ನಲಾದ ಇಬ್ಬರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಎಎಸ್ಐ ಒಬ್ಬರ ಪ್ಲಶರ್ ಬೈಕ್ ನ್ನು ಕಳ್ಳತನ ಮಾಡಿ, ಅವರ ಮನೆ ಪಕ್ಕದಲ್ಲಿರುವ ಗ್ಯಾರೇಜೊಂದಕ್ಕೆ ರಿಪೇರಿಗೆ ನೀಡಿದ್ದರು ಎನ್ನಲಾಗಿದೆ. ಬೈಕ್ ಕಳ್ಳತನವಾದ ತಕ್ಷಣ ಎಎಸೈ ಬೈಕ್ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು.
ಬೈಕ್ ನಾಪತ್ತೆ ವಿಷಯ ತಿಳಿದ ಗ್ಯಾರೇಜ್ ಮಾಲಿಕ ತಕ್ಷಣ ತನ್ನ ಗ್ಯಾರಿಗೆ ಬೈಕ್ ಬಂದಿರುವು ಕಳವಾಗಿರುವುದೇ ಎಂದು ಭಾವಿಸಿ ಇಬ್ಬರು ಹುಡುಗರು ತಂದಿರುವುದಾಗಿ ಆರಕ್ಷಕರಿಗೆ ತಿಳಿಸಿದ್ದಾರೆ. ವಿಚಾರಣೆ ನಡೆಸಲಾಗಿ ಜ್ಞಾನಗಂಗಾ ಶಾಲೆಯ ವಿದ್ಯಾರ್ಥಿಗಳು ಎಂದು ತಿಳದು ಬಂದಿದೆ. ಶಾಲೆಗೆ ತೆರಳಿದ ಎಎಸೈ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ನೀತಿ ಪಾಠ ಬೋಧಿಸಿ ಬಂದಿದ್ದರು ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ತಿಳಿಸಿದರು.
ಆದರೆ ಪೊಲೀಸರು ಶಾಲೆಗೆ ತೆರಳಿ ಉದ್ದುದ್ದ ಕೂದಲು ಬಿಟ್ಟಿರುವ, ಕಿವಿಗೆ ರಿಂಗ್ ಧರಿಸಿರುವ ವಿದ್ಯಾರ್ಥಿಗಳನ್ನು ಥಳಿಸಿದ್ದು, ಇದನ್ನು ತಿಳಿದ ಪೋಷಕರು ಶಾಲೆಗೆ ಆಗಮಿಸಿ, ಶಾಲೆಯವರೇ ತಮ್ಮ ಮಕ್ಕಳ ವಿರುದ್ಧ ಪೊಲೀಸರಿಗೆ ತಿಳಿಸಿ ಹೊಡೆಸಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರ ವಿರುದ್ಧವೇ ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿ ಅವಘಡ : ಲಕ್ಷಾಂತರ ರು.ಮೌಲ್ಯದ ಸ್ವತ್ತು ನಾಶ
ಮೈಸೂರು: ಮೈಸೂರು ತಾಲೂಕಿನ ಚಿಕ್ಕಳ್ಳಿ ಗ್ರಾಮದಲ್ಲಿರುವ ಮಂಜುನಾಥ ಬೇಕರಿಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಚಿಕ್ಕಳ್ಳಿ ಗ್ರಾಮದ ಚಟ್ಟನಹಳ್ಳಿಪಾಳ್ಯ ನಿವಾಸಿ ಗುರುಸ್ವಾಮಿ ಎಂಬವರ ಬೇಕರಿಯೇ ಅಗ್ನಿ ದುರಂತಕ್ಕೀಡಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಬೇಕರಿಯಲ್ಲಿರುವ ಎಲ್ಲ ಸಾಮಾನುಗಳು ಬೆಂಕಿಗಾಹುತಿಯಾಗಿವೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳ ರಕ್ಷಣೆ
ಮೈಸೂರು: ಅಕ್ರಮವಾಗಿ ವಾಹನದಲ್ಲಿ ಕದ್ದು ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ರಕ್ಷಿಸಲು ಹೋದ ಗ್ರಾಮಸ್ಥರ ವಿರುದ್ಧ ವಾಹನ ಚಲಾಯಿಸಿ ಅಪಘಾತಕ್ಕೀಡಾದ ಘಟನೆ ಕೆ.ಆರ್. ನಗರದಲ್ಲಿ ಜರುಗಿದೆ.
ಹುಣಸೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಹಸುಗಳನ್ನು ಕದ್ದು ಸಾಗಿಸುತ್ತಿದ್ದ ವಿಷಯ ತಿಳಿದ ಗ್ರಾಮಸ್ಥರು ವಾಹನವನ್ನು ಹಿಡಿಯಲು ಮುಂದಾದರು. ಈ ವೇಳೆ ಗ್ರಾಮಸ್ಥರು ವಿರುದ್ಧವೇ ವಾಹನವನ್ನು ಚಾಲಾಯಿಸಿದ ಪರಿಣಾಮ ವಾಹಣ ಅಪಘಾತಕ್ಕೀಡಾಗಿದೆ. ಅಲ್ಲದೆ ವಾಹದಲ್ಲಿದ್ದ ನಾಲ್ಕು ಹಸುಗಳ್ಲಲಿ ಒಂದು ಹಸು ಸಾವಿಗೀಡಾಗಿದೆ.
ಇನ್ನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕ ಮತ್ತು ಕ್ಲಿನರ್ ಪರಾರಿಯಾಗಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಸರಗಳ್ಳರ ಬಂಧನ
ಮೈಸೂರು: ಅಪರಾಧ ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಪೊಲೀಸರಿಗೆ ಸೆರೆಸಿಕ್ಕಿದ್ದ ಮೂವರು ಸರಗಳ್ಳರನ್ನು ಕೃಷ್ಣರಾಜ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರಿಂದ ಸುಮಾರು 1.35ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ನಾಚನಹಳ್ಳಿಪಾಳ್ಯದ ಮಹಮ್ಮದ್ ಸಮೀವುಲ್ಲ, ಚಿಕ್ಕಮಗಳೂರಿನ ಇರ್ಫಾನ್, ಅಕ್ಮಲ್ ಪಾಷಾ ಅಲಿಯಾಸ್ ಬಾಬು ಎಂದು ಗುರುತಿಸಲಾಗಿದೆ. ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಠಾಣೆಯ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಸರಗಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.