ಮೈಸೂರಿನಲ್ಲಿ ಇನ್ಯಾವತ್ತು ನಿರ್ಮಾಣವಾಗುತ್ತದೆಯೋ ಫಿಲ್ಮ್ ಸಿಟಿ!?
ಮೈಸೂರು, ಅಕ್ಟೋಬರ್ 27: ಮೈಸೂರಿಗರಿಗೆ ಹೆಮ್ಮೆ ತಂದ ವಿಷಯಗಳಲ್ಲಿ ನಗರದಲ್ಲಿ ಫಿಲ್ಮ್ ಸಿಟಿ ಆರಂಭವಾಗುವ ಕನಸೂ ಒಂದು. ಆದರೆ ಇದಕ್ಕೆ ತಣ್ಣೀರೆರಚುವ ಕೆಲಸವಾಗುವಂತೆ ಕಾಣುತ್ತಿದೆ. ಹೌದು, ಎರಡು ವರ್ಷ ಕಳೆದರೂ ಇನ್ನು ಫಿಲ್ಮ್ ಸಿಟಿ ಕಾಮಗಾರಿ ಆರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ.
ಸಿಲಿಕಾನ್ ಸಿಟಿಯಷ್ಟೆ ಬೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಫೀಲ್ಮ್ ಸಿಟಿ ಬರಲಿದೆ ಎಂದು ರಾಜೇಂದ್ರ ಬಾಬು ಸಿಂಗ್ ಕಳೆದೆರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ಸಂಬಂಧ ಸೆ. 29ರ 2015 ರಂದು ಒಪ್ಪಿಗೆ ಪಡೆದುಕೊಂಡಿದ್ದರು. ಆದರೆ ಇದು ನಡೆದು ಎರಡು ವರುಷಗಳಾದರೂ ಸಾಂಸ್ಕೃತಿಕ ನಗರಿಯಲ್ಲಿ ಫಿಲ್ಮ್ ಸಿಟಿ ಕಾಮಗಾರಿಗೆ ಕನಿಷ್ಠ ಪೂಜೆಯೂ ನಡೆದಿಲ್ಲ.
ಕಬಿನಿ ಜಲಾಶಯದಿಂದ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಜಮೀನು ಸಿಗುತ್ತಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿಗಾಗಿ ಒಪ್ಪಿಗೆ ಪಡೆದುಕೊಂಡಿದ್ದ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಗ್ರಾಮಕ್ಕೆ ರಾಜೇಂದ್ರ ಬಾಬು ಸಿಂಗ್, ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು. 133 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದ್ದವು. ಆದರೆ ಒಂದು ವರ್ಷ ಕಳೆದು ಹೋದರೂ ಕನ್ನಡ ಚಿತ್ರರಂಗವಾಗಲಿ, ಅಧಿಕಾರಿಗಳಾಗಲಿ ಅತ್ತ ಮತ್ತೆ ಸುಳಿಯಲಿಲ್ಲ.
ಫಿಲ್ಮಸಿಟಿ ನಿರ್ಮಾಣ ಎಲ್ಲಿ?
ಹಿಮ್ಮಾವು ಹಾಗೂ ಅಡಕನಹಳ್ಳಿ ಹುಂಡಿ ಸಂಪರ್ಕ ಬೆಸೆಯುವ ಮಾರ್ಗ ಮಧ್ಯದಲ್ಲಿ ಫಿಲ್ಮ್ ಸಿಟಿಗಾಗಿ ಸ್ಥಳ ನಿಗದಿ ಮಾಡಲಾಯಿತು. ಇದರಿಂದ ಹಿಮ್ಮಾವು, ಅಡಕನಹಳ್ಳಿ ಹುಂಡಿ, ಬಿಂಚನಹಳ್ಳಿ, ತಾಂಡವಪುರ, ತಾಂಡ್ಯ, ಕಡಕೊಳ ಸೇರಿದಂತೆ ಅನೇಕ ಹಳ್ಳಿಗಳು ಅಭಿವೃದ್ಧಿಯಾಗಲಿವೆ.
ಮರೀಚಿಕೆಯಾಯ್ತೇ ಉದ್ಯೋಗದ ಕನಸು?
ಸುತ್ತಮುತ್ತಲ್ಲ ಗ್ರಾಮಸ್ಥರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯನ್ನು ಒಡಲ್ಲಿಟ್ಟುಕೊಂಡು ಖುಷಿಯಲ್ಲಿದ್ದರು. ಆದರೆ ಕಳೆದು ಒಂದು ವರ್ಷದಿಂದ ಯಾವುದೇ ಚಟುವಟಿಕೆಗಳು ನಡೆಯದೆ ಇರುವುದಿರಂದ ಅಲ್ಲಿಯ ಗ್ರಾಮಸ್ಥರು ಬೇಸರ ಗೊಂಡಿದ್ದಾರೆ. ಸಿನಿ ಸಿಟಿ ನಿರ್ಮಾಣವಾದ್ರೆ ಸುತ್ತಮುತ್ತಲ್ಲ ಗ್ರಾಮಸ್ಥರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಗೆ ಎರಡು ವರ್ಷ ಕಳೆದುಹೋಗಿದ್ದು, ಆರಂಭವಾಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ.
ಪ್ರವಾಸೋದ್ಯಮಕ್ಕೂ ಉಪಯುಕ್ತ
ಇನ್ನು ಹಿಮ್ಮಾವುನಲ್ಲಿ ಚಿತ್ರ ನಗರಿ ನಿರ್ಮಾಣ ಮಾಡಬೇಕೆಂದು ಕನ್ನಡ ಚಿತ್ರರಂಗದಲ್ಲಿರುವ ಅನೇಕರ ಆಸೆ. ನಗರ ಪ್ರದೇಶ ಹತ್ತಿರ ಹಾಗೂ ಸುಂದರ ವಾತಾವರಣವಿರುವುದರಿಂದ ಇಲ್ಲಿಗೆ ಬರಲು ಪ್ರವಾಸಿಗರು ಇಚ್ಛೆ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಕೈಗಾರಿಕಾ ಪ್ರದೇಶವಿರುವುದರಿಂದ ಕೈಗಾರಿಕೆಗಳಿಗೆ ಒಂದು ರೀತಿಯಲ್ಲಿ ಸಹಾಯವಾಗುತ್ತಿತ್ತು.
ಸಾರ್ವಜನಿಕರಿಂದ ಸರಕಾರಕ್ಕೆ ಹಿಡಿ ಶಾಪ
'ಎಕರೆಗಟ್ಟಲೆ ಜಾಗ ಇತ್ತ ವ್ಯವಸಾಯ ಮಾಡಲೂ ಬಿಡದೇ ನಮ್ಮಿಂದ ಕಿತ್ತುಕೊಂಡಿದ್ದು, ಇನ್ನು ಸಿನಿಸಿಟಿ ಕೂಡ ಮಾಡದೆ ಎರಡು ವರ್ಷಗಳಿಂದ ಜಾಗ ಪಾಳು ಬಿದ್ದಿದೆ' ಎಂದು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಸ್ಥಳೀಯರು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಳ್ಳೆಯ ವಾತಾವರಣವಿರುವುದರಿಂದ ಚಿತ್ರ ನಗರಿ ನಿರ್ಮಾಣಕ್ಕೆ ಉತ್ತಮ ವೇದಿಕೆ ಸಿಕ್ಕಿತ್ತು. ಆದ್ರೆ ಬಳಕೆ ಮಾಡುವ ಕೆಲಸ ನಡೆಯುತ್ತಿಲ್ಲ ಎಂಬುದು ಮಾತ್ರ ಬೇಸರದ ಸಂಗತಿ.