ಮೈಸೂರು: ಕಂಡಕ್ಟರ್ ನ ಕೋಪಕ್ಕೆ ವಿದ್ಯಾರ್ಥಿಯ ಕಾಲು ತುಂಡು
ಮೈಸೂರು, ಅಕ್ಟೋಬರ್ 24 : ಕೆ ಎಸ್ಆರ್ ಟಿಸಿ ಬಸ್ ಕಂಡಕ್ಟರ್ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಯೋರ್ವ ಕಾಲು ಕಳೆದುಕೊಂಡಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಬನ್ನೂರು ನಿವಾಸಿ, ಸದ್ವಿದ್ಯಾ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಉಲ್ಲೇಖ್ ಪುಟ್ಟಸ್ವಾಮಿ ಕಾಲುಕಳೆದುಕೊಂಡ ವಿದ್ಯಾರ್ಥಿ. ಮಂಗಳವಾರ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಪುಟ್ಟಸ್ವಾಮಿ ಬಸ್ ಹತ್ತಿದ್ದ. ಆದರೆ, ಆತನ ಬಳಿ ಪಾಸ್ ಇಲ್ಲದಿದ್ದರಿಂದ ಕಂಡಕ್ಟರ್, ಉಲ್ಲೇಖ್ ನನ್ನು ಬಸ್ ನಿಂದ ಹೊರ ನೂಕಿದ್ದಾನೆ. ಪರಿಣಾಮ ಉಲ್ಲೇಖ್ ನ ಕಾಲು ಬಸ್ ನ ಚಕ್ರಕ್ಕೆ ಸಿಲುಕಿ ತುಂಡಾಗಿದೆ.
ಉಲ್ಲೇಖ್ ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರಿಗೆ 12 ವರ್ಷ ಜೈಲು: ಅತ್ಯಾಚಾರಿ ಯುವಕನೊಬ್ಬನಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರಿನ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಕೆ.ಎಂ ಅಭಿಷೇಕ್ (21) ಶಿಕ್ಷೆಗೆ ಗುರಿಯಾದ ಯುವಕ. 2014ರಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಗ್ರಾಮದ ಯುವತಿ ಮೇಲೆ ಅಭಿಷೇಕ್ ಅತ್ಯಾಚಾರವೆಸಗಿದ್ದ.
ಅಭಿಷೇಕ್ ನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಭಿಷೇಕ್ ಗೆ ಶಿಕ್ಷೆ ಹಾಗೂ 17,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.