ಮೈಸೂರಿನಲ್ಲಿ ರೌಡಿಶೀಟರ್ ಗಳ ನಿದ್ದೆಗೆಡಿಸಿದ ಪೊಲೀಸ್ ದಾಳಿ
ಮೈಸೂರು, ಫೆಬ್ರವರಿ 3 : ಶುಕ್ರವಾರ ಬೆಳ್ಳಂಬೆಳಿಗ್ಗೆ ಜಯಲಕ್ಷ್ಮಿಪುರಂ ಮತ್ತು ವಿವಿಪುರಂ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳಿಗೆ ಪೊಲೀಸರು ಶಾಕ್ ನೀಡಿದ್ದಾರೆ. ರೌಡಿಶೀಟರ್ ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಮಾರಕಾಸ್ತ್ರ ಹಾಗೂ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.
10 ಜನ ಇನ್ಸಪೆಕ್ಟರ್ ಗಳು, 1 ಎಸಿಪಿ, 40 ಜನ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ಡಿಸಿಪಿ ಶೇಖರ್ ನೇತೃತ್ವದ ತಂಡ ಶುಕ್ರವಾರ ಬೆಳ್ಳಬೆಳಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿತು. ರೌಡಿಗಳನ್ನು ಮಟ್ಟ ಹಾಕಲು ಈ ಕ್ರಮ ಕೈಗೊಂಡಿದ್ದು, ಒಂದು ಮನೆಗೆ ಒಬ್ಬ ಇನ್ಸಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಮಾರಕಾಸ್ತ್ರ ವಶಪಡಿಸಿಕೊಂಡರು.[ಕೊಟ್ನಕಟ್ಟೆಯಲ್ಲಿ ರೌಡಿ ಶೀಟರ್ ವರ್ವಾಡಿ ಪ್ರವೀಣ್ ಹತ್ಯೆ]
ಒನ್ ಇಂಡಿಯಾದೊಂದಿಗೆ ಡಿಸಿಪಿ ಶೇಖರ್ ಮಾತನಾಡಿ ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿ ಸದಾ ಶಾಂತತೆ ನೆಲೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ರೌಡಿ ಶೀಟರ್ ಗಳು ಜನರ ನಿದ್ದೆ ಕಸಿಯುತ್ತಿದ್ದಾರೆ. ಸಮಾಜದ ಸ್ವಾಥ್ಯ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಈ ದಾಳಿ ನಡೆಸಿದ್ದೇವೆ. ಅವರನ್ನು ಬದಲಾಯಿಸಿ ಒಳ್ಳೆಯದಾರಿಗೆ ತರುವ ಉದ್ದೇಶ ನಮ್ಮದು. ಇದು ಕೇವಲ ಒಂದು ಏರಿಯಾಕ್ಕೆ ಮಾತ್ರ ಸೀಮಿತವಲ್ಲ. ನಗರದ ಎಲ್ಲ ಠಾಣಾ ವ್ಯಾಪ್ತಿಗಳಲ್ಲೂ ದಾಳಿ ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.
ದೇವು, ಮತ್ತು ಬೆಣ್ಣೆ ಕೃಷ್ಣನ ಹತ್ಯೆಯ ನಂತರ ಮೈಸೂರಿನಲ್ಲಿ ರೌಡಿಶೀಟರ್ ಗಳ ಉಪಟಳ ಹೆಚ್ಚುತ್ತಿದ್ದು, ಅದಕ್ಕಾಗಿ ಪೊಲೀಸರು ಈ ರೀತಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.