ಫುಟ್ ಪಾತ್ ತೆರವು ವೇಳೆ ಪೊಲೀಸ್ – ಮಳಿಗೆದಾರರ ಮಾತಿನ ಚಕಮಕಿ
ಮೈಸೂರು, ನವೆಂಬರ್ 25 : ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನದ ಎದುರಿನ ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಫುಟ್ ಪಾತ್ ಬಳಿ ಕೆಲವು ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು ಪಾಲಿಕೆಯ ಅಭಯ ತಂಡ ತೆರವುಗೊಳಿಸಲು ಮುಂದಾದ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಾಕಷ್ಟು ಸಾಹಿತ್ಯಾಭಿಮಾನಿಗಳು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಾರೆ. ಇದನ್ನು ತಿಳಿದ ಕೆಲವು ವ್ಯಾಪಾರಸ್ಥರು ಮಹಾರಾಜ ಕಾಲೇಜು ಮೈದಾನದ ಇಕ್ಕೆಲಗಳಲ್ಲಿ ಬಟ್ಟೆ, ಜರ್ಕಿನ್ ಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನಿರಿಸಿ ವ್ಯಾಪಾರ ನಡೆಸುತ್ತಿದ್ದಾರೆ.
ಸ್ಥಳಕ್ಕಾಗಮಿಸಿದ ಪಾಲಿಕೆಯ ಅಭಯ ತಂಡ ಅವರನ್ನು ಅಲ್ಲಿಂದ ಎಬ್ಬಿಸಲು ಮುಂದಾಗಿದೆ. ಇದರಿಂದ ಕೋಪಗೊಂಡ ವ್ಯಾಪಾರಸ್ಥರು ನಮಗೆ ಜಿಲ್ಲಾಧಿಕಾರಿಗಳೆ ಇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ನಿಮ್ಮದೇನ್ರಿ, ನಾವು ಇಲ್ಲಿ ಓಡಾಟ ನಡೆಸುವವರಿಗೆ ತೊಂದರೆ ನೀಡುತ್ತಿಲ್ಲ. ಬದಿಯಲ್ಲಿ ಇರಿಸಿಕೊಂಡಿದ್ದೇವೆ. ತುಂಬಾ ಜನರು ಇಲ್ಲಿ ವಸ್ತುಗಳನ್ನು ಕೊಂಡು ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.