ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ದ್ವೇಷಕ್ಕೆ 15 ಅಮಾಯಕ ಜೀವ ಬಲಿ
ಮೈಸೂರು, ಡಿಸೆಂಬರ್ 19: ಚಾಮರಾಜನಗರ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷವಿಟ್ಟ ಪ್ರಮುಖ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ ಮತ್ತು ಅಂಬಿಕಾ ನಡುವಿನ ರಾತ್ರಿ ರಹಸ್ಯ ಬಯಲಾಗಿದೆ.
ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ನಡುವೆ ಅಕ್ರಮ ಸಂಬಂಧ ಇತ್ತು ಎಂಬುದು ಪ್ರಕರಣದ ತನಿಖೆ ನಡೆಸುವ ವೇಳೆ ಬೆಳಕಿಗೆ ಬಂದಿದೆ.
ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
ಅಂಬಿಕಾ, ಮಹದೇವಸ್ವಾಮಿ ಇಬ್ಬರದ್ದೂ ಒಂದೇ ಊರು. ಅಂಬಿಕಾ, ವರಸೆಯಲ್ಲಿ ಇಮ್ಮಡಿ ಮಹದೇವಸ್ವಾಮಿಗೆ ಅಕ್ಕನ ಮಗಳು. ಮೊದಲಿನಿಂದಲೂ ಮಹದೇವಸ್ವಾಮಿಗೆ ಅಂಬಿಕಾ ಮೇಲೆ ಒಲವು ಇತ್ತಂತೆ. ಈ ಹಿನ್ನೆಲೆ ಅಂಬಿಕಾ ಪತಿ ಮಾದೇಶ್ ಗೆ ಈ ಕಳ್ಳ ಸ್ವಾಮಿಯೇ ಕರೆದು ದೇವಸ್ತಾನದ ಮ್ಯಾನೇಜರ್ ಕೆಲಸ ನೀಡಿದ್ದ. ಮನೆಯಲ್ಲಿ ಅಂಬಿಕಾ ಹೇಳಿದ ಹಾಗೆಯೇ ಮಾದೇಶ್ ನಡೆದುಕೊಳ್ಳುತ್ತಿದ್ದ ಕೂಡ.
ಅಂಬಿಕಾಳಿಗೆ ಸಾಕಷ್ಟು ಹಣ ಸಹಾಯವನ್ನು ಇಮ್ಮಡಿ ಸ್ವಾಮೀಜಿ ಮಾಡಿದ್ದಾನೆ. ಮನೆಯೊಂದನ್ನು ಲೀಜ್ ಸಹ ಕೊಡಿಸಿಕೊಟ್ಟಿದ್ದಾನೆ. ಅಂಬಿಕಾ ಪರಿ ಮಾದೇಶನಿಗು ಮಾರಮ್ಮ ದೇವಾಲಯದಲ್ಲಿ ವ್ಯವಸ್ಥಾಪಕನ ಕೆಲಸ ಕೊಡಿಸಿದ್ದಾನೆ. ಹಾಗಾಗಿ ವಿಷ ಇಡುವ ಕುಕೃತ್ಯಕ್ಕೆ ಅಂಬಿಕಾಳ ನೆರವು ಕೇಳಿದ್ದಾನೆ ಇಮ್ಮಡಿ ಸ್ವಾಮೀಜಿ.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಪ್ರಸಾದಕ್ಕೆ ವಿಷ ಬೆರೆಸಿ ಭಕ್ತಾದಿಗಳಿಗೆ ತೊಂದರೆ ಆಗುವಂತೆ ಮಾಡಿ ಆ ಪ್ರಕರಣ ಟ್ರಸ್ಟಿಗಳ ಮೇಲೆ ಬರುವಂತೆ ಮಾಡುವುದು ಇವರಿಬ್ಬರ ತಂತ್ರ. ಅದಕ್ಕೆ ತಕ್ಕಂತೆ ಸಂಚು ರೂಪಿಸುತ್ತಾರೆ, ಇದಕ್ಕೆ ಅಂಬಿಕಾಳ ಗಂಡ ಮಾದೇಶ ಸಹ ಜೊತೆಯಾಗುತ್ತಾನೆ.
ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಂಬಿಕಾಳ ದೂರದ ಸಂಬಂಧಿಯೋರ್ವರಿಂದ ಕ್ರಿಮಿನಾಶಕವನ್ನು ತರಿಸಿಕೊಳ್ಳುತ್ತಾಳೆ. ಇದನ್ನು ಅರ್ಚಕ ದೊಡ್ಡಯ್ಯನ ಕೈಗೆ ನೀಡುತ್ತಾಳೆ. ದೊಡ್ಡಯ್ಯ ಮತ್ತು ಮಾದೇಶ ಡಿಸೆಂಬರ್ 14ರಂದು ದೇವಸ್ಥಾನಕ್ಕೆ ತೆರಳಿ ಯಾರೂ ಇಲ್ಲದ ಸಮಯ ನೋಡಿಕೊಂಡು ಪ್ರಸಾದಕ್ಕೆ ವಿಷ ಬೆರೆಸುತ್ತಾರೆ.
ವಿಷಪ್ರಸಾದ ದುರಂತ:ಬಯಲಾಯ್ತು ಇಮ್ಮಡಿ ಮಹದೇವಸ್ವಾಮಿ ಕ್ರೂರತನ
ಇದಾದ ಬಳಿಕ ಯಾರಿಗೂ ಸಂಶಯಬಾರದಂತೆ ನಾಲ್ವರು ವರ್ತಿಸುತ್ತಾರೆ. ದೊಡ್ಡಯ್ಯ, ತಾನೇ ವಿಷಪ್ರಸಾದ ತಿಂದವನ ರೀತಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿಯೂ ಸಹ ಅವನ ವರ್ತನೆ ಅನುಮಾನಾಸ್ಪದವಾಗಿರುತ್ತದೆ. ಕೊನೆಗೆ ಪೊಲೀಸರ ತನಿಖೆಯಲ್ಲಿ ಇದೀಗ ಎಲ್ಲವೂ ಬಯಲಾಗಿದೆ. ಆರೋಪಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ಆಗಲೆಂದು ನೊಂದವರು ಕೇಳಿಕೊಳ್ಳುತ್ತಿದ್ದಾರೆ.