ಮೈಸೂರಿನ ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ
ಮೈಸೂರು, ಫೆಬ್ರವರಿ,06: ಕಣ್ಣು ಹಾಯಿಸಿದಲ್ಲೆಲ್ಲ ಜನಸಾಗರ..ಒಂದೆಡೆ ಮೈಕೈ ತುಂಬಿಕೊಂಡು ನಾವೇನು ಕಡಿಮೆಯಿಲ್ಲ ಎನ್ನುವ ಜಾನುವಾರುಗಳು.. ಮತ್ತೊಂದೆಡೆ ಕೃಷಿ ಅನಾವರಣ..ಹೂಬಿಟ್ಟು ಘಮ್ಮೆನ್ನುವ ಹೂ ಗಿಡಗಳು..ಫಸಲು ಬಿಟ್ಟು ಕಂಗೊಳಿಸುವ ತರಕಾರಿಗಳು..ಮತ್ತೊಂದೆಡೆ ಸಾಂಸ್ಕೃತಿಕ ಸಂಭ್ರಮ..ವಸ್ತುಪ್ರದರ್ಶನ..ಹಸಿವಿನಿಂದ ಬಳಲಿದವರಿಗೆ, ಜಾತ್ರೆಗೆ ಬಂದ ಜನರಿಗೆ ಪುಷ್ಕಳ ಭೋಜನ..ಇದೆಲ್ಲವೂ ಶುಕ್ರವಾರದಿಂದ ಆರಂಭಗೊಂಡಿರುವ ಸುತ್ತೂರು ಜಾತ್ರೆಯಲ್ಲಿ ಕಂಡು ಬರುತ್ತಿರುವ ದೃಶ್ಯಗಳು.
ಜಾತ್ರೆ ಆರಂಭವಾದಲ್ಲಿಂದ ಮುಗಿಯುವವರೆಗೆ ಒಂದಲ್ಲ ಒಂದು ರೀತಿಯ ವಿಶಿಷ್ಟತೆಯನ್ನು ಉಣಬಡಿಸುತ್ತಿರುವ ಜಾತ್ರೆ ನಿಜಕ್ಕೂ ಅದ್ಭುತ. ಬರೀ ಜಾತ್ರೆಯಾಗದೆ ಸಾಂಸ್ಕೃತಿಕ ಸಂಭ್ರಮ, ಕ್ರೀಡಾಕೂಟ, ಸಾಮೂಹಿಕ ವಿವಾಹ ಕಾರ್ಯಕ್ರಮ, ಕೃಷಿ ಮೇಳಗಳ ಮೂಲಕ ರೈತರಿಗೆ ಉತ್ತೇಜನ ಹೀಗೆ ಹೊಸತರ ಅನ್ವೇಷಣೆ ಸದಾ ಇದ್ದೇ ಇರುತ್ತದೆ.
ಸುತ್ತೂರು ಜಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಬಳಿಕ ಮಾತನಾಡಿದ ಅವರು, ಬಸವಾದಿ ಶರಣರು, ಹಿರಿಯರು ಸಮಾಜಕ್ಕೆ ನೀಡಿರುವ ತತ್ವಾದರ್ಶಗಳಂತೆ ಜಾತ್ಯತೀತ ಮತ್ತು ವರ್ಗರಹಿತ ಸಮಾಜ ನಿರ್ಮಾಣ ಮಾಡುವ ಅಗತ್ಯತೆ ಇದೆ. ನಾನು ವೈಚಾರಿಕತೆ ಮತ್ತು ಗೊಡ್ಡು ಸಂಪ್ರದಾಯಗಳಿಗೆ ವಿರೋಧಿಯೇ ಹೊರತು ನಂಬಿಕೆ-ಸಂಪ್ರದಾಯಗಳ ವಿರೋಧಿಯಲ್ಲ.[ನಾನಾ ವಿಶಿಷ್ಟತೆ ಮೈಗೂಡಿಸಿಕೊಂಡ ಮೈಸೂರಿನ ಸುತ್ತೂರು ಜಾತ್ರೆ]
ನಂಬಿಕೆಗಳು ಸಮಾಜದಲ್ಲಿ ಹಾನಿ ಉಂಟು ಮಾಡಬಾರದು. ಮಾನವೀಯ ಮೌಲ್ಯ, ಸಂಪ್ರದಾಯ, ನಂಬಿಕೆಗಳು ಸಮಾಜದ ಪ್ರಗತಿಗೆ ಮೂಲ. ಇವುಗಳನ್ನು ಬಸವಾದಿ ಶರಣರು ಸಹ ಪ್ರತಿಪಾದಿಸಿದ್ದರು. ಅವರುಗಳು ಜಾತಿರಹಿತ ಸಮಾಜ ಇರಬೇಕೆಂದು ಕನಸು ಕಂಡಿದ್ದು, ನಾವು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು. ಇನ್ನಷ್ಟು ಮಾಹಿತಿ ಇಲ್ಲಿವೆ.
ಸುತ್ತೂರು ಜಾತ್ರೆಯ ಖುಷಿಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?
ಜಾತ್ರಾ ಮಹೋತ್ಸವಗಳು, ಹಬ್ಬ ಹರಿದಿನಗಳು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿವೆ. ಆ ಸಂಪ್ರದಾಯವನ್ನು ಬಿಡಬಾರದು. ಜಾತ್ರೆಗಳಲ್ಲಿ ಗೊಡ್ಡು ಸಂಪ್ರದಾಯ ಇರಬಾರದು. ಜಾತ್ರೆ, ಹಬ್ಬ ಹರಿದಿನಗಳು ಮನುಷ್ಯರ ಒಳಿತಿಗಾಗಿ ಮಾತ್ರ ಇರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಪರಿಕಲ್ಪನೆಯನ್ನು ಅನುಸರಿಸಿಕೊಂಡು ಹೋದಲ್ಲಿ ಸಮಾಜದಲ್ಲಿನ ಮೇಲು ಕೀಳು ಭಾವನೆ ಹೋಗಲಾಡಿಸಬಹುದು ಎಂದು ಹೇಳಿದರು.
ವಾಚ್ ತಗೊಳ್ಳಿ 10ಲಕ್ಷ ಕೊಡಿ
ಶುಕ್ರವಾರ ಸುತ್ತೂರಿಗೆ ತೆರಳಲು ಮೈಸೂರಿಗೆ ಆಗಮಿಸಿದ್ದಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನ್ನಡಕ್ಕೆ 1.5 ಲಕ್ಷ ರೂಪಾಯಿ, ಅವರು ಧರಿಸಿರುವ ವಾಚ್ ಬೆಲೆ 50 ಲಕ್ಷ ರೂ. ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕನ್ನಡಕ ನೀವೇ ತಗೊಳ್ಳಿ ನನಗೆ 50 ಸಾವಿರ ಕೊಡಿ, ಈ ವಾಚ್ ಕೂಡಾ ತಗೊಳ್ಳಿ 10 ಲಕ್ಷ ರೂ ಕೊಟ್ಟರೆ ಸಾಕು...ಎಂದು ಹಾಸ್ಯ ಧಾಟಿಯಲ್ಲಿ ಉತ್ತರಿಸಿದರು.
ನವಜೀವನಕ್ಕೆ ಕಾಲಿಟ್ಟ ನವಜೋಡಿಗಳು.
ಸುತ್ತೂರು ಜಾತ್ರೆಯ ಇನ್ನೊಂದು ವಿಶೇಷವೆಂದರೆ ಸಾಮೂಹಿಕ ವಿವಾಹ. ಇದರಲ್ಲಿ ನೂರಕ್ಕೂ ಹೆಚ್ಚು ನವಜೋಡಿಗಳು ನವ್ಯಜೀವನಕ್ಕೆ ಕಾಲಿಟ್ಟರು.
ಕೇಂದ್ರ ಉಗ್ರಾಣ ಕಟ್ಟಡದ ಶಿಲಾನ್ಯಾಸ ಉದ್ಘಾಟಿಸಿದ ಸಿದ್ದರಾಮಯ್ಯ
ಶ್ರೀಕಪಿಲ ನಂಜುಂಡ ದೇಶೀಕೇಂದ್ರ ಗುರುಕುಲ ಸಾಧಕರ ಸದನ ಹಾಗೂ ಕೇಂದ್ರ ಉಗ್ರಾಣ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಇನ್ನಿತರ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಯಾರು ಯಾರು ಉಪಸ್ಥಿತರಿದ್ದರು?
ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಹಕಾರ ಸಚಿವ ಹೆಚ್.ಎಸ್ಮಹದೇವಪ್ರಸಾದ್, ಸಂಸದರುಗಳಾದ ಆರ್.ಧ್ರುವನಾರಾಯಣ್, ಆರ್.ನರೇಂದ್ರ, ಶಾಸಕ ಎಂ.ಕೆ.ಸೋಮಶೇಖರ್, ಸೇರಿದಂತೆ ಇನ್ನಿತರೆ ಗಣ್ಯರು ಹಾಜರಿದ್ದರು.