ವಿಷ ಪ್ರಸಾದ ಪ್ರಕರಣ:ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರು ಮತ್ತೆ ಆಸ್ಪತ್ರೆಗೆ!
ಮೈಸೂರು, ಡಿಸೆಂಬರ್ 23: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿ ಡಿಸ್ಚಾರ್ಜ್ ಆದವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನೂ ಮತ್ತೆ ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಳ್ಳೆಗಾಲದ ಎಂ.ಜಿ.ದೊಡ್ಡಿ ನಿವಾಸಿಗಳಾದ ಪಳನಿಯಮ್ಮ, ಮಾದಮ್ಮ, ಮಾದ ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಆದರೆ ಗ್ರಾಮಕ್ಕೆ ಮರಳಿದ ಬಳಿಕ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ತಡರಾತ್ರಿಯೇ ಕೊಳ್ಳೇಗಾಲದ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ವಿಷಪ್ರಸಾದ ಪ್ರಕರಣದ ಆರೋಪಿಗಳಿಗೆ ಸಿಕ್ತು ಕೈದಿ ನಂಬರ್
ಸದ್ಯ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಚಿಕಿತ್ಸೆ ಪಡೆದು ಮನೆಗೆ ಮರಳಿರುವವರ ಆರೋಗ್ಯದಲ್ಲಿ ಏರುಪೇರಾದಲ್ಲಿ ತುರ್ತುಚಿಕಿತ್ಸೆಗೆ ಅನುಕೂಲವಾಗಲೆಂದು ಸುಳವಾಡಿ ಸುತ್ತಮುತ್ತ 8 ವೈದ್ಯರು ಹಾಗೂ ನರ್ಸ್ ಗಳನ್ನು ನೇಮಿಸಲಾಗಿದೆ. ವೆಂಟಿಲೇಟರ್ ಸೌಲಭ್ಯವುಳ್ಳ ತುರ್ತು ವಾಹನ ಸಿದ್ಧವಿದ್ದು, ಯಾರು ಆತಂಕಪಡಬೇಕಾಗಿಲ್ಲ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.