ಬಾಳೆಹಣ್ಣು ಮಾರುವಾತನ ಮಗ ಕೆವಿಪಿವೈ ಪರೀಕ್ಷೆ ಪಾಸು
ಮೈಸೂರು, ಏಪ್ರಿಲ್ 27: ಓದುವ ಆಸಕ್ತಿಯಿದ್ದರೆ ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜಿನ ಸಂಕಲ್ಪ ವಿಭಾಗದ ಎರಡನೆ ಪಿಯು ವಿದ್ಯಾರ್ಥಿ ಅರುಣ್ ಕುಮಾರ್ ತೋರಿಸಿಕೊಟ್ಟಿದ್ದಾರೆ.
ಇವರು ಈ ಬಾರಿಯ ಕೆವಿಪಿವೈ(Kishore Vaigyanik Protsahan Yojana) ಪರೀಕ್ಷೆಯಲ್ಲಿ (ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ - ಐಐಎಸ್ ಸಿಯವರು ನಡೆಸುವ ಜೂನಿಯರ್ ಸೈಂಟಿಸ್ಟ್ ಪರೀಕ್ಷೆ) ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇಷ್ಟಕ್ಕೂ ವಿದ್ಯಾರ್ಥಿ ಅರುಣ್ ಕುಮಾರ್ ಶ್ರೀಮಂತರೇನಲ್ಲ. ತಾವು ಬಡವರಾದರೂ ಮಗನನ್ನು ಓದಿಸಿ ಆತನಿಗೊಂದು ಬದುಕು ಕಟ್ಟಿಕೊಡಬೇಕೆನ್ನುವುದು ಹೆತ್ತವರ ಬಯಕೆ. ಅದರಂತೆ ಪೋಷಕರ ಆಶಯದಂತೆ ಉತ್ತಮವಾಗಿ ಓದುತ್ತಿರುವ ಅರುಣ್ ಕುಮಾರ್ ಈಗ ತನ್ನ ಸಾಧನೆ ಮೂಲಕ ಕುಟುಂಬದಲ್ಲಿ ಹರುಷದ ಹೊನಲನ್ನೇ ಹರಿಸಿದ್ದಾನೆ.
ಜೀವನಗಾಥೆ ಬರೆದು 24 ವರ್ಷಕ್ಕೆ ಪ್ರೊಫೆಸರ್ ಹುದ್ದೆ ಪಡೆದ ಪ್ರತಿಭಾವಂತ
ವಿದ್ಯಾರ್ಥಿ ಅರುಣ್ ಕುಮಾರ್ ತಂದೆ ಶಿವಣ್ಣ ಮೈಸೂರಿನ ನಂಜುಮಳಿಗೆ ವೃತ್ತದಲ್ಲಿ ಬಾಳೆಹಣ್ಣು ಮಾರುವ ಕೆಲಸ ಮಾಡಿದರೆ ತಾಯಿ ಮಂಜುಳಾ ದಿನಗೂಲಿ ಕೆಲಸ ಮಾಡುತ್ತಾರೆ. ಗೋಪಾಲಸ್ವಾಮಿ ಪ್ರೌಢಶಾಲೆಯಲ್ಲಿ ಓದಿದ್ದ ಅರುಣ್ ಕುಮಾರ್ ಪ್ರತಿಭೆ ಮತ್ತು ಮನೆಯಲ್ಲಿನ ಬಡತನದ ಸ್ಥಿತಿಯನ್ನು ಗಮನಿಸಿ, ಆಡಳಿತ ಮಂಡಳಿ ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜಿನ ಸಂಕಲ್ಪ ವಿಭಾಗದಲ್ಲಿ ಉಚಿತ ಸೀಟನ್ನು ನೀಡಿ, ಕೆವಿಪಿವೈ ಪರೀಕ್ಷೆಗೆ ತರಬೇತಿ ನೀಡಿತ್ತು. ಇದೀಗ ಪರೀಕ್ಷೆ ಬರೆದ ಅರುಣ್ಕ ಕುಮಾರ್ ಅದರಲ್ಲಿ ತೇರ್ಗಡೆಯಾಗಿದ್ದು, ಇನ್ನು ಮುಂದೆ ಪ್ರತಿಷ್ಠಿತ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಸೈನ್ಸ್ನಲ್ಲಿ ಪ್ರವೇಶ ಪಡೆದು ತನ್ನ ಓದನ್ನು ಮುಂದುವರಿಸಬಹುದಾಗಿದೆ.
ಅರುಣ್ ಕುಮಾರ್ ಮಾತ್ರವಲ್ಲದೆ ರಿಯಾ ಪರ್ಲ್ ಮೆನೆಜಿಸ್ ಮತ್ತು ಆಕಾಂಕ್ಷ್ ಎ. ಮಂಜುನಾಥ್ ಎಂಬ ಇನ್ನೂ ಇಬ್ಬರು ಸಂಕಲ್ಪ - ಗೋಪಾಲಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೆವಿಪಿವೈ ಲಿಖಿತ ಪರೀಕ್ಷೆಯಲ್ಲಿ ಹಾಗೂ ಅಂತಿಮವಾಗಿ ಐಐಎಸ್ ಸಿಯ ಉನ್ನತ ವಿಜ್ಞಾನಿಗಳು ನಡೆಸುವ ಸಂದರ್ಶನದಲ್ಲಿಯೂ ಆಯ್ಕೆಯಾಗಿರುವುದಾಗಿ ಕಾಲೇಜಿನ ಮೂಲಗಳು ತಿಳಿಸಿವೆ.