ಜನರಿಗೆ ದೊರಕದ 'ಜನೌಷಧ', ಮೈಸೂರಲ್ಲಿ ಮೂರು ಕಾಸಿನ ಉಪಯೋಗವಿಲ್ಲ
ಮೈಸೂರು, ಆಗಸ್ಟ್ 17 : ಜನಸಾಮಾನ್ಯರಿಗೆ ಅತೀ ಕಡಿಮೆ ಬೆಲೆಯಲ್ಲಿ ಔಷಧಿ ಒದಗಿಸುವುದಾಗಿ ಕೇಂದ್ರ ಸರಕಾರ ಜಾರಿಗೆ ತಂದ ಜನೌಷಧ ಮಳಿಗೆಯಲ್ಲಿ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ಬ್ರ್ಯಾಂಡೆಡ್ ಔಷಧಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತವೆ ಎಂಬ ಬೋರ್ಡ್ ಹಾಕಲಾಗಿದೆ. ಆದರೆ ಒಳ ಹೋದರೆ ಸ್ಟಾಕ್ ಖಾಲಿಯಾಗಿದೆ ಎಂಬ ಉತ್ತರ ಬರುತ್ತದೆ!
ಬಡವರ ಆರೋಗ್ಯಕ್ಕಾಗಿ ಆರಂಭವಾದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಎರಡು ಜನಪ್ರಿಯ ಯೋಜನೆಗಳಾದ ಜನೌಷಧ ಪೂರೈಕೆ ಕೇಂದ್ರಗಳೇ ಈಗ ಮೈಸೂರು ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿವೆ.
ಬೇರೆಡೆಗೆ ದೊರೆಯುವ ಎಲ್ಲ ಬ್ರ್ಯಾಂಡೆಡ್ ಔಷಧಗಳು ಈ ಔಷಧ ಕೇಂದ್ರಗಳಲ್ಲಿ ಕನಿಷ್ಠ ಶೇ 50 ಮತ್ತು ಗರಿಷ್ಠ ಶೇ 90ರವರೆಗೆ ರಿಯಾಯಿತಿಯಲ್ಲಿ ದೊರೆಯಬೇಕು. ವಿಪರ್ಯಾಸವೆಂದರೆ ಕಡಿಮೆ ಬೆಲೆಯಲ್ಲಿ ಸಿಗಬೇಕಾದ ಗುಣಮಟ್ಟದ ಔಷಧಗಳು ಈಗ ಮೈಸೂರು ಜಿಲ್ಲೆಯ ಯಾವ ಜನೌಷಧ ಕೇಂದ್ರಗಳಲ್ಲಿಯೂ ದೊರೆಯುತ್ತಿಲ್ಲ.
ಚರ್ಚೆ: ಜನೌಷಧದ ಬಗ್ಗೆ ದಾರಿ ತಪ್ಪಿಸುತ್ತಿದ್ದಾರಾ ವೈದ್ಯರು?
ಜಿಲ್ಲೆಯಾದ್ಯಂತ ಸುಮಾರು 32 ಜನೌಷಧಿ ಕೇಂದ್ರಗಳಿವೆ. ಯಾವುದೇ ಕೇಂದ್ರದಲ್ಲಿಯೂ ಸಮರ್ಪಕವಾಗಿ ಅಗತ್ಯ ಔಷಧಗಳು ದೊರೆಯುತ್ತಿಲ್ಲ. ಹೀಗಾಗಿ ಬಹುತೇಕ ಎಲ್ಲ ಜನೌಷಧ ಕೇಂದ್ರಗಳು ನಾಮ್ ಕೇ ವಾಸ್ತೆ ಎಂಬಂತಾಗಿವೆ.
ಹಿರಿಯ ನಾಗರಿಕರ ಅಗತ್ಯ ಔಷಧಿಗಳು ಸಿಗ್ತಿಲ್ಲ
ಪ್ರತಿ ನಿತ್ಯ ಅಗತ್ಯವಿರುವ, ಹೆಚ್ಚು ಬಳಕೆಯಾಗುವ ಔಷಧಗಳು ಈ ಜೆನರಿಕ್ ಔಷಧ ಮಳಿಗೆಗಳಲ್ಲಿ ಸಿಗುತ್ತಿಲ್ಲ. ಅದರಲ್ಲೂ ಹಿರಿಯ ನಾಗರಿಕರಿಗೆ ಸಹಾಯವಾಗುವ ಔಷಧಗಳು ಇಲ್ಲ. ಇದರಿಂದಾಗಿ ಹಿರಿಯ ನಾಗರಿಕರು ಈ ಹಿಂದಿನಂತೆ ಖಾಸಗಿ ಔಷಧ ಮಳಿಗೆಗಳಿಗೆ ಹೋಗಿ, ದುಬಾರಿ ಬೆಲೆ ಕೊಟ್ಟು ಔಷಧಗಳನ್ನು ಖರೀದಿ ಮಾಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಅದರಲ್ಲೂ ಇನ್ಸುಲಿನ್ ಸಿಗುತ್ತಿಲ್ಲ. ಇನ್ಸುಲಿನ್ ಪೆನ್ಗಳಲ್ಲಿ ಎರಡು ರೀತಿಯ ಔಷಧಗಳು ಸಿಗುತ್ತದೆ. ಮೈಸೂರು ನಗರ ಮಿತಿಯಲ್ಲಿ 21 ಮಳಿಗೆಗಳಿವೆ. ಈ ಮಳಿಗೆಗಳ ಪೈಕಿ ಹಿರಿಯ ನಾಗರಿಕರಿಗೆ ಬೇಕಾದ 15 ಅಗತ್ಯ ಔಷಧಿಗಳು ಸಿಗುತ್ತಿಲ್ಲ.
ಸಿಕ್ಕಾಪಟ್ಟೆ ಖರೀದಿ ಮಾಡಿದ್ದರಿಂದ ದಾಸ್ತಾನು ಖಾಲಿ
ಇನ್ಸುಲಿನ್ ಕಾಟ್ರಿಜ್ ಗಳು ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ವಿಚಾರ ತಿಳಿದು ಮುಗಿಬಿದ್ದು ಔಷಧಿ ಖರೀದಿಸಿದ್ದಾರೆ. ಹಾಗಾಗಿ, ನಮ್ಮ ಬಳಿ ಇದ್ದ ದಾಸ್ತಾನು ಖಾಲಿಯಾಗಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಕೆಲವೇ ದಿನಗಳಲ್ಲಿ ಕಾಟ್ರಿಜ್ ಗಳನ್ನು ಪೂರೈಸಲಾಗುವುದು. ಇನ್ನು ಮುಂದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕಾಟ್ರಿಜ್ ಗಳನ್ನು ಗ್ರಾಹಕರಿಗೆ ನೀಡಲಾಗುವುದು ಎನ್ನುತ್ತಾರೆ ಜನೌಷಧಿ ಅಂಗಡಿಯಲ್ಲಿರುವ ಮಾರಾಟಗಾರರು. ಇದೇ ರೀತಿ ಸ್ಯಾನಿಟರಿ ನ್ಯಾಪ್ಕಿನ್ ಗಳ ವಿಚಾರದಲ್ಲೂ ಎಚ್ಚರಿಕೆ ನೀಡಲಾಗಿದೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಎಷ್ಟೆಂದರೆ ಅಷ್ಟು ಖರೀದಿಸಲು ಅವಕಾಶ ಕೊಡುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ನ್ಯಾಪ್ಕಿನ್ ಗಳನ್ನು ಮಾತ್ರ ಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಎರಡು ತಿಂಗಳಿಂದ ಪೂರೈಕೆ ಕಡಿಮೆ ಆಗಿದೆ
ರಾಜ್ಯ ಮತ್ತು ಕೇಂದ್ರದ ಸಹಯೋಗದಲ್ಲಿ ನಡೆಯುತ್ತಿರುವ ಜನ ಸಂಜೀವಿನಿ ಮಳಿಗೆಗಳಲ್ಲಿ ಕಡಿಮೆ ಬೆಲೆಯಲ್ಲಿ ಬ್ರ್ಯಾಂಡೆಡ್ ಜೆನರಿಕ್ ಔಷಧಗಳು ದೊರೆಯುವುದರಿಂದ ಇಲ್ಲಿಯೂ ಬೇಡಿಕೆ ಹೆಚ್ಚಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಪೂರೈಕೆ ತೀರಾ ಕಡಿಮೆ ಇದೆ ಎನ್ನುತ್ತಾರೆ ಹಲವರು. ರಕ್ತದೊತ್ತಡ, ಮಧುಮೇಹ, ಆಸ್ತಮಾ, ಗಾಸ್ಟ್ರಿಕ್ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಗಳಿಗೆ ಬೇಡಿಕೆ ಹೆಚ್ಚಿದೆ. ರಕ್ತದೊತ್ತಡದ ಮಾತ್ರೆ ಪ್ಯಾಕೆಟ್ ಒಂದಕ್ಕೆ ಬೇರೆಡೆ 135 ರುಪಾಯಿ ಇದ್ದರೆ, ಈ ಮಳಿಗೆಗಳಲ್ಲಿ 30 ರುಪಾಯಿಗೆ ಸಿಗುತ್ತದೆ. 450 ರುಪಾಯಿಗಳಿರುವ ಕ್ಯಾನ್ಸರ್ ಮಾತ್ರೆಗೆ 137 ರು., 185 ರು.ಗಳಿರುವ ಬಿಪಿ ಮಾತ್ರೆಗೆ 30 ರು., 1,500 ರು.ಗಳ ಬಿಪಿ ಪರೀಕ್ಷಿಸುವ ಕಿಟ್ 450 ರು.ಗೆ ಸಿಗುತ್ತದೆ.
ಔಷಧ ಸರಿಯಾಗಿ ವಿತರಣೆಯಾಗಲಿ
ಜನ ಸಂಜೀವಿನಿಯಲ್ಲಿಯೂ ಕನಿಷ್ಠ ಶೇ 50 ರಿಯಾಯಿತಿಯಲ್ಲಿ ಔಷಧಿಗಳು ಲಭ್ಯವಿವೆ. ಇಲ್ಲಿ ಬಿಪಿ ಮಾತ್ರೆ 100 ರುಪಾಯಿಗಳದ್ದು 8 ರುಪಾಯಿಗಳಿಗೆ, ಕೊಲೆಸ್ಟ್ರಾಲ್ ಔಷಧಕ್ಕೆ ಶೇ 50ರಿದ 90 ರಿಯಾಯಿತಿ ಸೇರಿದಂತೆ ಎಲ್ಲ ಔಷಧಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಜನ ಔಷಧಿ ಕೇಂದ್ರ ನಡೆಸುವವರಿಗೆ ಕಮಿಷನ್ ಆಧಾರದಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಬೇರೆ ಔಷಧ ಕೇಂದ್ರಗಳಲ್ಲಿ ಸುಮಾರು ಶೇ 35 ಕಮಿಷನ್ ದೊರೆತರೆ, ಜನ ಔಷಧ ಕೇಂದ್ರಗಳಲ್ಲಿ ಶೇ 20 ಕಮಿಷನ್ ಸಿಗುತ್ತದೆ. ಔಷಧ ಸರಿಯಾಗಿ ವಿತರಣೆಯಾಗದೆ ಇದ್ದಲ್ಲಿ ಕಮಿಷನ್ ಕೂಡ ಸರಿಯಾಗಿ ಲಭ್ಯವಾಗದೆ ಅಂಗಡಿ ನಡೆಸುವುದೇ ಕಷ್ಟವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಜನೌಷಧ ಕೇಂದ್ರಗಳ ಪ್ರಮುಖರು.