ಮೈಸೂರು: ಪ್ರೊ.ಮಹೇಶ್ ಚಂದ್ರಗುರುಗೆ ಪೊಲೀಸ್ ರಕ್ಷಣೆ
ಮೈಸೂರು, ಜೂನ್ 14 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ, ಪ್ರಗತಿಪರ ಚಿಂತಕರಿಗೆ ಪೊಲೀಸ್ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ನಗರದ ನಿವಾಸಿ, ಚಿಂತಕ, ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರೊ. ಬಿ.ಪಿ. ಮಹೇಶ್ಚಂದ್ರಗುರು ಅವರಿಗೆ ಈಗ ಗನ್ ಮ್ಯಾನ್ ರಕ್ಷಣೆ ನೀಡಲಾಗಿದೆ. ಹತ್ಯೆಗೆ ಸಂಚು ನಡೆದಿದೆ ಎಂಬ ಸುಳಿವು ಸಿಕ್ಕ ಬಳಿಕ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ನಗರದ ಪೊಲೀಸರು ಸುಮಾರು 2 ವರ್ಷಗಳಿಂದ ಗನ್ ಮ್ಯಾನ್ ಭದ್ರತೆ ಒದಗಿಸಿದ್ದಾರೆ.
ಗೌರಿ ಕೊಲೆ ಪ್ರಕರಣ: ಪರಶುರಾಮ್ ವಾಗ್ಮೋರೆ ಬೆನ್ನತ್ತಿದ ರೋಚಕ ಕಥೆ
ಈ ಹಿನ್ನೆಲೆಯಲ್ಲಿ ಮಾತನಾಡಿದ ಪ್ರೊ.ಮಹೇಶ್ ಚಂದ್ರಗುರು, ಪೊಲೀಸ್ ರಕ್ಷಣೆ ನೀಡುವಂತೆ ಸರ್ಕಾರಕ್ಕೇನೂ ನಾನು ಮನವಿ ಮಾಡಿರಲಿಲ್ಲ. ಆದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗನ್ ಮ್ಯಾನ್ ರಕ್ಷಣೆ ನೀಡಲು ಸರ್ಕಾರವೇ ಮುಂದಾಗಿದೆ ಎಂದರು.
ಸೆಪ್ಟೆಂಬರ್ ತಿಂಗಳಿಂದಲೇ ನನಗೆ ಗನ್ ಮ್ಯಾನ್ ರಕ್ಷಣೆ ನೀಡಲಾಗಿದೆ ಎನ್ನುವುದು ಸುಳ್ಳು. ನನಗೆ ನಿನ್ನೆಯಿಂದ ಗನ್ ಮ್ಯಾನ್ ರಕ್ಷಣೆ ನೀಡಲಾಗಿದೆ ಎಂದರು.