ದಸರೆಗೆ ಮಹತ್ವದ ನಿರ್ಧಾರ: ವೀರನಹೊಸಹಳ್ಳಿಯಿಂದ ಹೊರಡಲಿದೆ ಗಜಪಡೆ
ಮೈಸೂರು, ಆಗಸ್ಟ್ 30 :ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗಳನ್ನು ಬರಮಾಡಿಕೊಳ್ಳುವ ಪ್ರಮುಖ ಕಾರ್ಯಕ್ರಮ ಗಜಪಯಣ' ಆರಂಭದ ಸ್ಥಳವನ್ನು ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ವೀರನಹೊಸಹಳ್ಳಿಗೆ ಸ್ಥಳಾಂತರಿಸಲಾಗಿದೆ.
ಗಜಪಯಣ ಸಿದ್ಧತೆ ಕುರಿತು ಪರಿಶೀಲನೆ ನಡೆಸಲು ಹುಣಸೂರು ತಾಲೂಕು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ವೀರನಹೊಸಹಳ್ಳಿಗೆ ಭೇಟಿ ನೀಡಿದ್ದ ಶಾಸಕ ಅಡಗೂರು ಎಚ್.ವಿಶ್ವನಾಥ್, ದಸರಾ ವಿಶೇಷಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ
ಸೆಪ್ಟೆಂಬರ್ 2ರಂದು ಗಜಪಯಣಕ್ಕೆ ದಿನಾಂಕ ನಿಗದಿಯಾಗಿದ್ದು, ಇದು ದಸರಾ ಮಹೋತ್ಸವಕ್ಕೆ ನಾಂದಿಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಗಜಪಯಣ' ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದ್ದು, ಈ ಬಗ್ಗೆ ವಿಶ್ವನಾಥ್ ಅವರು ಖುದ್ದು ಆಸಕ್ತಿ ವಹಿಸಿದ್ದಾರೆ.
ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳ ಪೈಕಿ 6 ಆನೆಗಳ ತಂಡ ಸೆ.2ರಂದು ಮೈಸೂರಿನತ್ತ ಹೆಜ್ಜೆ ಹಾಕಲಿವೆ. ಮೊದಲ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಜಯ ಆನೆಗಳು ನಗರಕ್ಕೆ ಆಗಮಿಸಲಿವೆ.
ಮೈಸೂರು ಅರಮನೆಗೆ ಜಿಲ್ಲಾಡಳಿತದಿಂದ ಸೆ.3ರಂದು ಗಜಪಡೆಗೆ ಸ್ವಾಗತ ಸಮಾರಂಭವಿದ್ದು, ಅಂದು ಅರ್ಜುನ ನೇತೃತ್ವದ ಗಜಪಡೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಬರಮಾಡಿಕೊಳ್ಳುವರು.
ಆಗಸ್ಟ್ 29ರಂದು ನಾಡಹಬ್ಬ ದಸರಾ ಗಜಪಯಣಕ್ಕೆ ಸ್ವಾಗತ
ಕೆಲವು ಕಾರಣಗಳಿಂದ 4-5 ವರ್ಷಗಳಿಂದ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಇದಕ್ಕೂ ಮುನ್ನ 1999ರಿಂದ 2013 ರವರೆಗೆ ವೀರನಹೊಸಹಳ್ಳಿ ಗೇಟ್ ನಿಂದ ಗಜಪಯಣ ಕಾರ್ಯಕ್ರಮ ನಡೆಯುತ್ತಿತ್ತು.
ವಿಶ್ವನಾಥ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಗಜಪಯಣ' ಕಾರ್ಯಕ್ರಮವನ್ನು ರೂಪಿಸಿ ಅದಕ್ಕೆ ಹೊಸ ಭಾಷ್ಯ ಬರೆದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ನಮ್ಮ ನಾಡಿನ ಸಂಸ್ಕೃತಿಯನ್ನು ಪಸರಿಸುವ ಸಲುವಾಗಿ ಯುವ ಜನಾಂಗದ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಯುವ ದಸರಾವನ್ನು ಮಾದರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಬಾರಿ ಸರಳ ದಸರಾ ಮಹೋತ್ಸವ ಆಯೋಜನೆಗೆ ಚಿಂತನೆ
ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಬಲರಾಮ ಅಶಕ್ತನಾದ ನಂತರ ಬಲರಾಮನ ಉತ್ತರಾಧಿಕಾರಿಯಾಗಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಅರ್ಜುನ ಕಳೆದ ಆರು ವರ್ಷದಿಂದ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದು, ಈ ಬಾರಿಯೂ ಅವನೇ ಗಜಪಡೆಯನ್ನು ಮುನ್ನಡೆಸಲಿದ್ದಾನೆ ಎಂದರು.