ಉಪಚುನಾವಣೆ ಬಂದಾಯ್ತು, ಎಲ್ಲಿದ್ದಾರೆ ಅಂಬರೀಶ್, ರಮ್ಯಾ?
ಮೈಸೂರು, ಮಾರ್ಚ್ 28: ನಂಜನಗೂಡು ಉಪಚುನಾವಣೆ ಕಣಕ್ಕೆ ಹೋಳಿಯ ರಂಗು ಬಂದಿದೆ. ಇನ್ನೇನು ಮತದಾನಕ್ಕೆ ಕೇವಲ10 ದಿನಗಳು ಬಾಕಿ ಉಳಿದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ತಾರಾ ಪ್ರಚಾರಕರಿಂದ ಪ್ರಚಾರ ನಡೆಸುತ್ತಿವೆ. ಆದರೆ ಕಾಂಗ್ರೆಸ್ ಪಾಳೆಯದಿಂದ ಪ್ರಶ್ನೆಯೊಂದು ತೂರಿ ಬರುತ್ತಿದೆ. ಮಂಡ್ಯ ಹಾಗೂ ಮೈಸೂರು ಭಾಗದವರೇ ಆದ ಅಂಬರೀಶ್ ಹಾಗೂ ರಮ್ಯಾ ಎಲ್ಲಿದ್ದಾರೆ?
ರಮ್ಯಾ ಮತ್ತು ಅಂಬರೀಶ್ ಇಬ್ಬರೂ ಸಿನಿಮಾ ರಂಗದಿಂದ ಬಂದವರು. ಸಾರ್ವಜನಿಕವಾಗಿ ಇಬ್ಬರೂ ಚಿರಪರಿಚಿತರು. ಯಾವುದೇ ಪಕ್ಷ ಈ ರೀತಿಯ ಜನಪ್ರಿಯ ವ್ಯಕ್ತಿಗಳನ್ನು ಯಾವತ್ತೂ ಚುನಾವಣೆಯ ಪ್ರಚಾರದಿಂದ ಹೊರಗಿಡುವುದಿಲ್ಲ. ಹೀಗಿರುವಾಗ ಅಂಬರೀಶ್ ಮತ್ತು ರಮ್ಯಾ ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಬ್ಬರೂ ಕೈ ಪಾಳಯದ ಮುಖಂಡರಲ್ಲವೇ? ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.
ನಾಪತ್ತೆಯಾದ ಅಂಬರೀಶ್, ರಮ್ಯಾ!
ಜೆಡಿಎಸ್ ತೊರೆದು ಕೈ ಪಾಳಯದಲ್ಲಿ ಅದೃಷ್ಠ ಪರೀಕ್ಷೆ ಎದುರಿಸಿದ್ದ ಸಿದ್ದರಾಮಯ್ಯ ಅವರಿಗೆ ಬೆನ್ನುಲುಬಾಗಿ ನಿಂತಿದ್ದ ಕೆಲವೇ ಕೆಲವರಲ್ಲಿ ನಟ, ಹಿರಿಯ ಕಾಂಗ್ರೆಸ್ ಮುಖಂಡ ಅಂಬರೀಶ ಕೂಡ ಒಬ್ಬರು.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸಿನಿಂದ ನಟ ಅಂಬರೀಶ್ ದೂರವಾಗುವ ಜತೆಗೆ, ಮಾಜಿ ಸಂಸದೆ ರಮ್ಯ ಕೂಡ ಎಲ್ಲಿಯೂ ಕಾಣದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಿದೆ.
ಬಿಜೆಪಿ ಅಭ್ಯರ್ಥಿಗಳಿಗೆ ತಾರಾ ಮೆರಗು ಸಿಕ್ಕಿದಂತೆ, ಕಾಂಗ್ರೆಸ್ಗೂ ಇವರ ಮೆರಗು ಸಿಕ್ಕಲಿದೆ ಎನ್ನುವ ನಿರೀಕ್ಷೆ ಇದೀಗ ಹುಸಿಯಾಗಿದೆ.[ದೆಹಲಿಯಲ್ಲಿ ಸಿಎಂ ಸಿದ್ದುಗೆ ಹೆದರುತ್ತಿರುವ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರಾರು?]
ಕಮಲ ಹಿಡಿಯಲಿದ್ದಾರಂತೆ ಅಂಬಿ ದಂಪತಿ!
ಹೀಗೊಂದು ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಂಬರೀಶ್ ರನ್ನು ಕೈ ಬಿಟ್ಟ ಬಳಿಕ ಕಾಂಗ್ರೆಸ್ ನಿಂದ ದೂರ ಉಳಿದಿರುವ ರೆಬೆಲ್ ಸ್ಟಾರ್ ಗೆ ಈಗಾಗಲೇ ಬಿಜೆಪಿ ಗಾಳ ಹಾಕಿದೆ. ಇವರೊಂದಿಗೆ ಅಂಬಿ ಪತ್ನಿ ಸುಮಲತಾ ಕೂಡ ಕಮಲದ ಕಡೆಗೆ ವಾಲಲಿದ್ದಾರೆ ಎಂಬ ಗುಮಾನಿಗಳು ಹೆಚ್ಚಾಗಿದೆ.[ಕೃಷ್ಣ ಸೇರಿದ್ದೇ ಸೇರಿದ್ದು, ಬಿಜೆಪಿ ಲೆಕ್ಕಾಚಾರವೂ ಬದಲು!]
ಎಲ್ಲಿದ್ದಾರೆ ರಮ್ಯಾ ಮೇಡಂ?
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಪಕ್ಷದ ಚಟುವಟಿಕೆಯಿಂದಲೇ ದೂರವುಳಿದ ರಮ್ಯಾಗೆ ತಾವು ಯಾವ ಪಕ್ಷದಲ್ಲಿರಬೇಕೆಂಬ ಗೊಂದಲ ಉಂಟಾಗಿದೆಯಂತೆ. ಕಾರಣ ತಮ್ಮ ಗಾಡ್ ಫಾದರ್ ಹಾಗೂ ತಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸೂಚಿಸಿದ ಎಸ್.ಎಂ ಕೃಷ್ಣರೇ ಪಕ್ಷ ತೊರೆದಿರುವುದು ಅವರಿಗೆ ಮುಂದೇನೂ ಎಂಬ ಗೊಂದಲವುಂಟು ಮಾಡಿದೆ.. ಈ ಕಾರಣದಿಂದಲೇ ಅವರ ಗೈರುಹಾಜರಿ ಪ್ರಚಾರ ಸಭೆಗಳಲ್ಲಿ ಎದ್ದು ಕಾಣಿಸುತ್ತಿದೆ.
ಸಿದ್ಧರಾಮಯ್ಯ ಗೆಲುವಿನ ಹಿಂದಿದ್ದ ಅಂಬಿ ಎಫರ್ಟ್
ಸರಿ ಸುಮಾರು 12 ವರ್ಷಗಳ ಹಿಂದೆ ಜೆಡಿಎಸ್ ನಿಂದ ಸಿಎಂ ಪಟ್ಟ ತಪ್ಪಿಸಿದರೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ನಿಂದ ಸ್ಫರ್ಧಿಸಿದ್ದ ಸಿದ್ಧರಾಮಯ್ಯ ಗೆಲುವಿನ ಹಿಂದೆ ಅಂಬರೀಶ್ ಪಾತ್ರ ಮಹತ್ವದ್ದಾಗಿತ್ತು. ಒಕ್ಕಲಿಗ ಸಮುದಾಯದ ಜನರು ಇರುವ ಕಡೆಗಳಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಅವಕಾಶವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆಯಲ್ಲಿ ಮೈಸೂರಿನ ಹಲವೆಡೆ ಮತದಾರನ ಮನವೊಲಿಸಿ ಪ್ರಚಾರ ಮಾಡುವಲ್ಲಿ ಅಂಬಿ ಸಫಲವಾಗಿದ್ದರು. ಅಂದು ಅಂಬೀ ನಡೆಸಿದ ಮಾತುಕತೆ ಸಫಲವಾಗದಿದ್ದರೆ ಇಂದು ಅನೇಕ ಊರುಗಳಲ್ಲಿ ಸಿದ್ದರಾಮಯ್ಯರವರಿಗೆ ಮತಗಳು ದಕ್ಕುತ್ತಿರಲಿಲ್ಲ ಎಂಬುದು ಇಲ್ಲಿನ ಜನರ ಮಾತು..
ಕೊನೆಯ ಕ್ಷಣದಲ್ಲಿ ಬರ್ತಾರಾ?
ಕೊನೆಯ ಕ್ಷಣದಲ್ಲೇನಾದರೂ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ರಮ್ಯಾ ಮತ್ತು ಅಂಬರೀಶ್ ಬರ್ತಾರಾ ಕಾದು ನೋಡಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಬ್ಬರೂ ಪ್ರಚಾರಕ್ಕೆ ಬರುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಏಪ್ರಿಲ್ 13ರಂದು ಫಲಿತಾಂಶ ಹೊರಬೀಳಲಿದೆ. ಅಂಬರೀಶ್, ರಮ್ಯಾ ಗೈರು ಹಾಜರಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಅಂದು ಗೊತ್ತಾಗಲಿದೆ.