ಮೈಸೂರಿನ ಅನಾಥ ಯುವತಿಯ ಕೈ ಹಿಡಿದ ಶೃಂಗೇರಿಯ ಬ್ರಾಹ್ಮಣ ಯುವಕ
ಮೈಸೂರು, ಆಗಸ್ಟ್ 3: ಬ್ರಾಹ್ಮಣರಲ್ಲಿ ಮೊದಲೇ ಹುಡುಗರಿಗೆ ಹೆಣ್ಣು ಸಿಗುವುದೇ ವಿರಳ. ಇಂಥ ಸನ್ನಿವೇಶದಲ್ಲಿ ಬ್ರಾಹ್ಮಣ ಯುವಕರೊಬ್ಬರು ಅನಾಥ ಹುಡುಗಿಯನ್ನು ಗುರುವಾರ ಮದುವೆಯಾಗಿದ್ದಾರೆ.
ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...
ಮೈಸೂರಿನ ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬ್ರಾಹ್ಮಣ ಯುವಕ ಬಾಳಸಂಗಾತಿಯಾಗಿ ದೊರಕಿದ್ದಾರೆ. ಶೃಂಗೇರಿಯ ಕೆಂಚಗೆರೆ ಮೂಲದ ಯುವಕ ಯೋಗೇಶ್ ಮೈಸೂರಿನ ಅನಾಥಾಶ್ರಮದಲ್ಲಿಯೇ ಇದ್ದು, ಶಿಕ್ಷಣ ಪೂರೈಸಿದ ಯುವತಿ ಮರಿಯಮ್ಮ ಎಂಬವರನ್ನು ವಿವಾಹವಾಗಿದ್ದಾರೆ.
ಮರಿಯಮ್ಮ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರೆ, ಯೋಗೇಶ್ ವಾಣಿಜ್ಯ ವಿಭಾಗದಲ್ಲಿ ಪದವಿ ಪೂರೈಸಿದ್ದಾರೆ. ಅನಾಥೆ ಮರಿಯಮ್ಮ ವಿವಾಹವನ್ನು ಅಧಿಕಾರಿಗಳೇ ಮುಂದೆ ನಿಂತು ಮಾಡಿದರು. ಈ ಸಂದರ್ಭಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಅನೇಕ ಅಧಿಕಾರಿಗಳು ಸಾಕ್ಷಿಯಾದರು.
ತಳಿರು-ತೋರಣಗಳಿಂದ ಕಚೇರಿಯ ಕಟ್ಟಡ ಸಿಂಗರಿಸಲಾಗಿತ್ತು. ಮದುವೆ ಮಂಟಪ ನಿರ್ಮಿಸಿ, ಅತಿಥಿಗಳ ಸ್ವಾಗತ ಹಾಗೂ ಮದುವೆ ಊಟದ ತಯಾರಿಗೆ ಸಕಲ ಸಿದ್ಧತೆ ನಡೆದಿತ್ತು. 12.45ರ ಶುಭ ಮುಹೂರ್ತದಲ್ಲಿ ಮರಿಯಮ್ಮಗೆ ಯೋಗೇಶ್ ತಾಳಿ ಕಟ್ಟುವ ಮೂಲಕ ಹೊಸ ಬದುಕಿನ ಪಯಣ ಆರಂಭಿಸಿದರು.
ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ
ಬೆಂಗಳೂರು ಮೂಲದ ಮರಿಯಮ್ಮ ಚಿಕ್ಕ ವಯಸ್ಸಿನಲ್ಲಿ ಹೆತ್ತವರಿಂದ ತಪ್ಪಿಸಿಕೊಂಡಿದ್ದರು. ಸಂಬಂಧಿಕರಿಂದ ಸಹ ದೂರವಾದ ಬಾಲಕಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸರೆಯಾಗಿ, ಬೆಳೆಸಿ ಹೊಸ ಜೀವನವನ್ನು ನೀಡಿತು.
ಮಹಿಳಾ ನಿಲಯದಲ್ಲಿದ್ದ ಅವರ ಬಗ್ಗೆ ಸ್ನೇಹಿತರಿಂದ ಮಾಹಿತಿ ಪಡೆದ ಯೋಗೇಶ್, ಪೋಷಕರ ಮುಂದೆ ಮದುವೆ ವಿಷಯ ಪ್ರಸ್ತಾಪಿಸಿದರು. ಪೋಷಕರು ಹಾಗೂ ಸಂಬಂಧಿಕರಿಂದ ಇದಕ್ಕೆ ತಕರಾರು ಬರಲಿಲ್ಲ. ಬಳಿಕ ಎಲ್ಲರ ಸಮ್ಮತಿಯ ಮೇರೆಗೆ ಮದುವೆ ನಿಶ್ಚಯ ಮಾಡಿ ಗುರುವಾರ ಹಸೆಮಣೆಯೇರಿದ್ದಾರೆ.
ಈ ಹಿಂದೆ ಯೋಗೇಶ್ ಸ್ನೇಹಿತ ಮಹೇಶ್ ಎಂಬವವರೂ ಇದೇ ಅನಾಥಾಶ್ರಮದ ಯುವತಿಯನ್ನು ವಿವಾಹವಾಗಿದ್ದಾರೆ. ಆಗಸ್ಟ್ 11ರಂದು ಶೃಂಗೇರಿಯಲ್ಲಿ ಅದ್ದೂರಿ ವಿವಾಹ ನೆರವೇರಲಿದೆ.