ದೂರದ ಕ್ಯಾಲಿಫೋರ್ನಿಯಾದಲ್ಲೂ ಮೊಳಗಿದ ಗುರುರಾಯರ ಮಂತ್ರಘೋಷ
ಮೈಸೂರು, ಆಗಸ್ಟ್ 27 : ಇಂದು ಗುರುರಾಯರ 347 ವೈಭವದ ಆರಾಧನೆ ಮಹೋತ್ಸವ. ಕಲಿಯುಗದ ಕಲ್ಪವೃಕ್ಷವೆಂದೇ ಕರೆಯಲ್ಪಡುವ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವವರು ಕೂಡ ಆಚರಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನ ಶ್ರೀ ಕೃಷ್ಣ ಮಂದಿರದಲ್ಲಿ ಗುರುರಾಯರ 347ರ ಪೂರ್ವಾರಾಧನೆ ಸಂಪನ್ನಗೊಂಡಿತು. ಬೆಳಗಿನಿಂದಲೇ ಪುಣ್ಯಾವರ್ನೆ, ಪಂಚಾಮೃತ, ಮಹಾಮಂಗಳಾರತಿ, ನೈವೇದ್ಯ ಸೇವೆ ಹಾಗೂ ದಾಸವಾಣಿ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆಯಿತು.
ವೈಭವದ ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು
ವಿದೇಶಿಯರು ಸೇರಿದಂತೆ 200ಕ್ಕೂ ಹೆಚ್ಚು ಭಕ್ತಾದಿಗಳು ಜಮಾವಣೆಗೊಂಡಿದ್ದರು. ಸರತಿ ಸಾಲಿನಲ್ಲಿ ನಿಂತು ಭಕ್ತರು ಗುರುರಾಯರ ದರ್ಶನಕ್ಕೆ ಪಾತ್ರರಾದರು. ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಅನೇಕರು ಸ್ವಯಂ ಸೇವಕರಾಗಿ ಭಾಗವಹಿಸಲು ಮುಂದೆ ಬಂದಿದ್ದು ವಿಶೇಷವಾಗಿತ್ತು.
ವಿದೇಶಿ ನೆಲದಲ್ಲೂ ಭಾರತೀಯತೆ ನೆಲೆಯೂರಲು ಹಾಗೂ ಧರ್ಮ ಸ್ಥಾಪನೆಯ ಸಲುವಾಗಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹವೇ ಸರಿ.