ಮಾತು ಬಾರದ ಆಕೆಗೆ, ಕಾಲಿಲ್ಲದ ಆತನ ಜತೆಗೆ ವಚನ ಮಾಂಗಲ್ಯ ಮದುವೆ
ಮೈಸೂರು, ಡಿಸೆಂಬರ್ 10 : ಆಕೆ ಮಾತನಾಡಲಾರಳು. ಆತನಿಗೆ ಒಂದು ಕಾಲಿಲ್ಲ. ಆದರೆ ಇಬ್ಬರೂ ಒಂದಾಗಿ ಬದುಕಿನ ಬಂಡಿ ಎಳೆಯಲು ಗಟ್ಟಿ ನಿರ್ಧಾರ ಮಾಡಿದ್ದಾರೆ. ಉಭಯ ಕುಟುಂಬಗಳೂ ಅವರ ಬೆನ್ನಿಗೆ ನಿಂತಿವೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದ ಮಹದೇವಪ್ಪ ಅವರ ಮಗ ಮಹದೇಶ್ (ಒಂದು ಕಾಲು ಇಲ್ಲ) ಮತ್ತು ಅದೇ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಮೂರ್ತಿ ಎಂಬುವರ ಮಗಳು ಶಶಿ (ಮಾತು ಬರುವುದಿಲ್ಲ) ಇಬ್ಬರೂ ವಿಶೇಷ ಚೇತನರು. ವಚನ ಮಾಂಗಲ್ಯದ ಮೂಲಕ ಸೋಮವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೀದಿಯಲ್ಲೇ ಬಾಲಕಿಯನ್ನು 'ಮದುವೆ'ಯಾಗಿ ಪೇರಿ ಕಿತ್ತ ಯುವಕ
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ವಿಶೇಷ ಚೇತನರ ವಿವಾಹ ನೆರವೇರಿಸಿತು. ಹೊಸಮಠದಲ್ಲಿರುವ ನಟರಾಜ ಸಭಾ ಭವನದಲ್ಲಿ ವಚನಗಳನ್ನು ಪಠಿಸುವ ಮೂಲಕ ಮಾಂಗಲ್ಯ ಧಾರಣೆಯೊಂದಿಗೆ ಸರಳವಾಗಿ ಮದುವೆ ನಡೆಯಿತು.
ಮಹದೇಶ್ ಆಟೋ ಚಾಲಕನಾಗಿದ್ದು, ಸ್ವಗ್ರಾಮದಲ್ಲಿ ವಾಸಿಸುತ್ತಿದ್ದಾರೆ. 5 ವರ್ಷಗಳ ಹಿಂದೆ ಅವರಿಗೆ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಅನಿವಾರ್ಯವಾಗಿ ಮಹದೇಶ ಕಾಲನ್ನೇ ಕಳೆದುಕೊಳ್ಳಬೇಕಾಯಿತು.
ವಾಟ್ಸಪ್ ಮೆಸೇಜ್,ಒಂದು ಮದುವೆ ನಿಲ್ಲಿಸಿ, ಮತ್ತೊಂದು ಮದುವೆ ಮಾಡಿಸ್ತು
ಹೊಸಮಠದ ಚಿದಾನಂದ ಸ್ವಾಮೀಜಿ, ಗುಂಡ್ಲುಪೇಟೆ ತಾಲೂಕು ವೀರಸಿಂಹಾಸನ ಶಿಲಾ ಮಠದ ಸಿದ್ಧಮಲ್ಲ ಸ್ವಾಮೀಜಿ, ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿದೇವಿ, ಫೌಂಡೇಷನ್ ಸಂಸ್ಥಾಪಕ ಕುಮಾರಸ್ವಾಮಿ, ನಿರ್ದೇಶಕಿ ರೂಪಾ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.