ಶಬ್ದಕ್ಕೆ ಬೆಚ್ಚದಂತೆ ಗಜಪಡೆಗಳಿಗೆ ಸಿಡಿಮದ್ದಿನ ತಾಲೀಮು
ಮೈಸೂರು, ಸೆಪ್ಟೆಂಬರ್ 21: ದಸರಾ ಜಂಬೂಸವಾರಿಗೆ ಗಜಪಡೆಗಳು ತಯಾರಾಗುತ್ತಿವೆ. ದಿನದಿಂದ ದಿನಕ್ಕೆ ತಾಲೀಮು ಕಠಿಣವಾಗುತ್ತಿದೆ. ಇದೀಗ ಭಾರದೊಂದಿಗೆ ಸಿಡಿಮದ್ದಿನ ಶಬ್ದಕ್ಕೆ ಹೆದರಿ ಓಡದಂತೆ ತಯಾರಿ ಮಾಡುವ ಸಲುವಾಗಿ ಭಾರೀ ಸದ್ದು ಬರುವ ಸಿಡಿ ಮದ್ದುಗಳನ್ನು ಸಿಡಿಸುವ ಮೂಲಕವೂ ಅಭ್ಯಾಸ ಮಾಡಲಾಗುತ್ತಿದೆ.
ಜಂಬೂ ಸವಾರಿಯ ಸಂದರ್ಭ ಸಿಡಿಸಲಾಗುವ ಶಬ್ದಕ್ಕೆ ಗಜಪಡೆ ಬೆದರಿ ಓಡಿದರೆ ಆಗುವ ಅನಾಹುತ ಹೇಳಲಾಗದು, ಹೀಗಾಗಿ ಅವುಗಳ ಎದುರು ಭಾರೀ ಶಬ್ದ ಬರುವ ಫಿರಂಗಿಗಳನ್ನು ಸಿಡಿಸಿ, ಈಗಿನಿಂದಲೇ ಶಬ್ದಕ್ಕೆ ಬೆದರದಂತೆ ಅಭ್ಯಾಸ ಮಾಡಲಾಗುತ್ತದೆ.[ಅದ್ದೂರಿಯಾಗಿ ಮೈಸೂರು ದಸರಾ ಆಚರಣೆ ಇಲ್ಲ]
ಹಲವು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಶಬ್ದಕ್ಕೆ ಬೆದರುವುದಿಲ್ಲ ಆದರೂ ದಸರಾದಲ್ಲಿ ಪಾಲ್ಗೊಳ್ಳದ ಅಥವಾ ಹೊಸದಾಗಿ ಬಂದ ಆನೆಗಳು ಬೆದರುತ್ತವೆ. ಇವುಗಳ ಎದುರು ಮತ್ತೆ ಮತ್ತೆ ಸಿಡಿಸುವುದರಿಂದ ಅವುಗಳಿಗೆ ಅಭ್ಯಾಸವಾಗಿ ಫಿರಂಗಿ ಸಿಡಿಸಿದರೆ ಅದರಿಂದ ಹೊರಬರುವ ಬೆಂಕಿ ಮತ್ತು ಸದ್ದಿಗೆ ಹೆದರದೆ ಧೈರ್ಯವಾಗಿ ನಿಲ್ಲುತ್ತವೆ.
ಸಿಡಿಮದ್ದಿನ ತಾಲೀಮು ಚಾಮುಂಡಿಬೆಟ್ಟ ತಪ್ಪಲಿನ ಪೊಲೀಸ್ ಇಲಾಖೆಯ ಫೈರಿಂಗ್ ರೇಂಜ್ ಮೈದಾನದಲ್ಲಿ ನಡೆಯುತ್ತದೆ. ನಗರ ಮೀಸಲು ಪಡೆ(ಸಿಎಆರ್)ಯ ಸಿಬ್ಬಂದಿ ಸಾರಥ್ಯದಲ್ಲಿ ನಡೆಸಲಾಗುತ್ತದೆ. ಇಲ್ಲಿ ಗಜಪಡೆಗಳನ್ನು ನಿಲ್ಲಿಸಲಾಗುತ್ತದೆ. ಬೆದರುವ ಲಕ್ಷಣಗಳಿರುವ ಆನೆಗಳ ಕಾಲನ್ನು ಸರಪಳಿಯಿಂದ ಕಟ್ಟಲಾಗುತ್ತದೆ.[ಸಂಗೀತಗಾರರ ಗಾಡಿ ಎಳೆಯುವ ಅಭಿಮನ್ಯು!]
ಬಳಿಕ ಫಿರಂಗಿಗಳನ್ನು ಸಿಡಿಸಲಾಗುತ್ತದೆ. ಈ ಸಂದರ್ಭದಲ್ಲಿ ದಟ್ಟ ಹೊಗೆಯೊಂದಿಗೆ ಭಾರೀ ಶಬ್ದ ಎದೆ ನಡುಗಿಸುತ್ತದೆ. ಆನೆಗಳು ಬೆದರದೆ ನಿಲ್ಲಬೇಕು. ಹೀಗೆ ನಿಂತಾಗ ಮಾತ್ರ ಅವು ಜಂಬೂಸವಾರಿಗೆ ಸಿದ್ಧಗೊಂಡಿವೆ ಎಂದರ್ಥ. ಮೊದಲ ಸಿಡಿಮದ್ದಿನ ತಾಲೀಮಿಗೆ ಬೆಚ್ಚಿದಂತೆ ಕಂಡರೂ ಬಳಿಕ ಅವು ಅದಕ್ಕೆ ಹೊಂದಿಕೊಂಡು ನಿಲ್ಲುತ್ತವೆ.
ಅರಮನೆಯಲ್ಲಿ ಸುಮಾರು 7 ಫಿರಂಗಿಗಳಿದ್ದು, ಅವುಗಳಲ್ಲಿ ಮೂರೋ ನಾಲ್ಕೋ ಬಳಸಿಕೊಳ್ಳಲಾಗುತ್ತದೆ. ಸಿಡಿಮದ್ದಿನ ತಾಲೀಮು ನಡೆಸುವ ಸ್ಥಳಕ್ಕೆ ಫಿರಂಗಿಗಳನ್ನು ಕ್ರೇನ್ ಮೂಲಕ ಕೊಂಡೊಯ್ದು ಅದರೊಳಕ್ಕೆ ಸುಮಾರು 45 ಕೆ.ಜಿ. ಮದ್ದನ್ನು ತುಂಬಿಸಿ, 3 ಸುತ್ತಿನಲ್ಲಿ 21ಕ್ಕೂ ಹೆಚ್ಚು ಬಾರಿ ಸಿಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ಸಿಎಆರ್ ನ ಅಧಿಕಾರಿಗಳು, ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳು, ಸಿಬ್ಬಂದಿ, ಮಾವುತರು, ಕಾವಾಡಿಗಳು ಸ್ಥಳದಲ್ಲಿದ್ದು. ಸಿಡಿಮದ್ದಿನ ತಾಲೀಮು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.[ದಸರಾ ನಿರೀಕ್ಷೆಯಲ್ಲಿ ಸಿಂಗಾರ-ಬಂಗಾರ ಮೈಸೂರು ಅರಮನೆ]
ಗಜಪಡೆಗಳೊಂದಿಗೆ ಅಶ್ವದಳಗಳಿಗೂ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಆದರೆ ಕುದುರೆಗಳು ನಗರದಲ್ಲಿರುವುದರಿಂದ ಮತ್ತು ಶಬ್ದದ ಅಭ್ಯಾಸವಾಗಿರುತ್ತದೆ. ಆದರೂ ಅವುಗಳಿಗೂ ಅಭ್ಯಾಸ ನಡೆಸಲಾಗುತ್ತದೆ. ಈಗಾಗಲೇ ಒಂದು ಬಾರಿ ಗಜಪಡೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸಲಾಗಿದ್ದು, ಇನ್ನು ಮೂರು ಬಾರಿ ತಾಲೀಮು ನಡೆಯಲಿದೆ.