ವಿಡಿಯೋಗಳಲ್ಲಿ ಮೈಸೂರು ದಸರೆಯ ಸಂಭ್ರಮಕ್ಕೆ ಶುಭಹಾರೈಕೆ
ಮೈಸೂರು, ಸೆಪ್ಟೆಂಬರ್ 22: ನಾಡಹಬ್ಬ ದಸರಾ ನಿನ್ನೆ(ಸೆ.21)ಯಿಂದ ವಿಧ್ಯಕ್ತವಾಗಿ ಆರಂಭವಾಗಿದ್ದು, ಸಾಂಸ್ಕೃತಿಕ ನಗರ ಮದುವಣಗಿತ್ತಿಯಂತೇ ಸಿಂಗರಿಸಿಕೊಂಡಿದೆ. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆಮಾಡಿದೆ. ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರಿನ ಪ್ರಖ್ಯಾತ ಸ್ಥಳಗಳೆಲ್ಲವೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.
In Pics : ದಸರಾ ವೈಭವ 2017 : ಸರಳ ಮತ್ತು ಸುಂದರ
ದಸರಾ ಹಿನ್ನೆಲೆಯಲ್ಲಿ 'ಒನ್ ಇಂಡಿಯಾ' ಕನ್ನಡ ಮೈಸೂರಿಗೆ ತೆರಳಿ ದಸರಾ ಸಂಭ್ರಮವನ್ನು ಚಿತ್ರೀಕರಿಸಿದೆ. ದಸರಾ ಸಂದರ್ಭದಲ್ಲಿ ಚಾಮುಂಡಿ ಬೆಟ್ಟ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶಶಿ ಶೇಖರ್ ದೀಕ್ಷಿತ್ ರವರು ಒನ್ ಇಂಡಿಯಾಕ್ಕೆ ವಿಶೇಷ ಸಂದರ್ಶನ ನೀಡಿದರು. ದಸರಾ ವಿಶೇಷತೆಗಳನ್ನೂ, ಚಾಮುಂಡಿ ಬೆಟ್ಟದ ವೈಶಿಷ್ಟ್ಯವನ್ನು ವಿವರಿಸಿದರು. ತಾಯಿ ಚಾಮುಂಡಿ ನಾಡಿನ ಸಮಸ್ತ ಜನತೆಗೂ ಒಳಿತನ್ನುಂಟು ಮಾಡಲಿ ಎಂದು ಹಾರೈಸುತ್ತ, ಶೇಖರ್ ದೀಕ್ಷಿತ್ ಅವರು ನೀಡಿದ ಸಂದರ್ಶನದ ವಿಡಿಯೋ ನಿಮಗಾಗಿ ಇಲ್ಲಿದೆ.
ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಹಲವು ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದು, ಲಕ್ಷಾಂತರ ಜನರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿಚಾಮುಂಡಿ ಬೆಟ್ಟ ಮತ್ತು ಮೈಸೂರಿನ ಇತರ ಹಲವೆಡೆ ಪ್ರವಾಸಿಗರು ಅನುಭವಿಸುವ ಕಷ್ಟಗಳನ್ನೂ, ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂಬ ಇಂಗಿತವನ್ನು ಜನರು ವ್ಯಕ್ತಪಡಿಸಿದರು. ಚಾಮುಂಡಿ ಬೆಟ್ಟದ ಕುರಿತು ಜನರ ಅಭಿಪ್ರಾಯಗಳನ್ನೂ ಒನ್ ಒಂಡಿಯಾ ಚಿತ್ರೀಕರಿಸಿದೆ.
ಮೈಸೂರು ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಮಂಗಳ ಮುಖಿಯರು ತಮ್ಮ ಅಭಿಪ್ರಾಯ ಹಂಚುಕೊಂಡರು. ದಸರಾ ಸಂಭ್ರಮದೊಂದಿಗೆ, ಸಮಾಜದಿಂದ ತಾವನುಭವಿಸುತ್ತಿರುವ ಸಂಕಷ್ಟ ಹಾಗೂ, ಸರ್ಕಾರದಿಂದ ತಾವು ಕಡೆಗಣನೆಗೊಳ್ಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಮಂಗಳಮುಖಿಯರು ದಸರಾ ನಾಡಿನ ಜನತೆಗೆ ಒಳಿತುಂಟು ಮಾಡಲಿ ಎಂದು ತುಂಬುಮನಸ್ಸಿನಿಂದ ಹಾರೈಸಿದರು.