ಕಿಡಿಗೇಡಿಗಳ ದುರ್ವರ್ತನೆ, ಆತಂಕದಲ್ಲಿ ನಂಜನಗೂಡು ಶಾಲೆ ಶಿಕ್ಷಕರು
ಮೈಸೂರು,ಮಾರ್ಚ್,10: ಸಾಮಾನ್ಯವಾಗಿ ತಮ್ಮ ಹಳ್ಳಿಗೊಂದು ಶಾಲೆ ಬೇಕು ಎಂಬುವುದು ಎಲ್ಲರ ಬಯಕೆ. ಶಾಲೆಗಾಗಿ ಅಲ್ಲಲ್ಲಿ ಹೋರಾಟಗಳು ನಡೆಯುತ್ತಿವೆ. ಶಾಲೆ ಅಭಿವೃದ್ದಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ನಂಜನಗೂಡಿನ ನಗರ್ಲೆ ಗ್ರಾಮದಲ್ಲಾಗುತ್ತಿರುವುದೇ ಬೇರೆ.
ನಂಜನಗೂಡಿನ ನಗರ್ಲೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಯಾರೋ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಸುಸ್ಥಿತಿಯಲ್ಲಿರುವ ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಲ್ಲಿ ಪೈಪ್ ಗಳನ್ನು ಮುರಿದು ಶಾಲೆ ವಾತಾವರಣವನ್ನು ಹದಗೆಡಿಸಲು ಯತ್ನಿಸಿದ್ದಾರೆ.[ಪೋಷಕರೇ, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ!]
ಶಾಲಾ ಅವಧಿ ಮುಗಿದ ಬಳಿಕ ಸಂಜೆಯ ಸಮಯದಲ್ಲಿ ಕಾಂಪೌಂಡ್ ಹಾರಿ ಶಾಲೆಯ ಆವರಣಕ್ಕೆ ನುಗ್ಗುವ ಕೆಲವು ಕಿಡಿಗೇಡಿಗಳು ತಮ್ಮ ಅನೈತಿಕ ಚಟುವಟಿಕೆ ನಡೆಸುತ್ತಾರೆ. ಶಾಲಾ ಛಾವಣಿಗೆ ಕಲ್ಲು ಹೊಡೆದು ಹೆಂಚುಗಳನ್ನು ಧ್ವಂಸಗೊಳಿಸಿದ್ದಾರೆ. ಶೌಚಾಲಯಗಳು ಹಾನಿಗೊಳಗಾಗಿವೆ.
ಪ್ರತಿದಿನವೂ ಶಾಲಾವರಣವನ್ನು ಕಲುಷಿತಗೊಳಿಸಿ ಹೋಗುವ ಕಿಡಿಗೇಡಿಗಳಿಂದ ಶಿಕ್ಷಕರು ಮತ್ತು ಮಕ್ಕಳು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಯಾರು ಈ ರೀತಿ ಮಾಡುತ್ತಿರುವ ಕಿಡಿಗೇಡಿಗಳು ಎಂಬುವುದೇ ತಿಳಿಯದ ಕಾರಣ ದೂರು ಕೊಡಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.[ನೀರಿನಲ್ಲಿ ಆಡುವ ಮೈಸೂರು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?]
ರೈತರ ನಿದ್ದೆಗೆಡಿಸಿದ ಚಿರತೆ
ಮೈಸೂರು,ಮಾರ್ಚ್,10: ಹುಲಿ, ಆನೆಗಳ ಕಾಟದಿಂದ ಕೊಂಚ ನಿರಾಳರಾಗಿರುವ ನಂಜನಗೂಡು ಹೆಡಿಯಾಲ ಸುತ್ತಮುತ್ತಲ ಗ್ರಾಮಗಳ ರೈತರು ಇದೀಗ ಚಿರತೆಯ ಕಾಟದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕ್ಷಣಕ್ಷಣವೂ ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.
ಹೆಡಿಯಾಲ ಬಳಿಯ ಚಂಗೌಡನಹಳ್ಳಿ ಗ್ರಾಮದಲ್ಲಿ ಕೆಂಪರಾಮೇಗೌಡ ಎಂಬುವರಿಗೆ ಸೇರಿದ ಹಸುವಿನ ಕರುವನ್ನು ಚಿರತೆಯು ಕೊಟ್ಟಿಗೆಯಿಂದ ಹೊತ್ತೊಯ್ದು ಕೊಂದು ಹಾಕಿದೆ. ಇದರಿಂದ ಗ್ರಾಮದಲ್ಲಿ ಭಯ ಮನೆಮಾಡಿದೆ.[ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ಕೊಟ್ಟಿಗೆಯಿಂದ ಹೊತ್ತೊಯ್ದ ಚಿರತೆ ಕರುವನ್ನು ಕೊಂದು ಮರದ ಪೊದೆಯಲ್ಲಿಟ್ಟಿದ್ದು, ಕರುವನ್ನು ಹುಡುಕಿಕೊಂಡು ಹೋದ ಮಾಲೀಕ ಕೆಂಪೇಗೌಡರ ಮೇಲೆಯೇ ಎರಗುವ ಯತ್ನ ನಡೆಸಿದೆ. ಇದರಿಂದ ಹೆದರಿದ ಅವರು ನುಗು ಅರಣ್ಯ ವಲಯದ ಆರ್ಎಫ್ಒ ಸುರೇಶ್ ಬಾಬು ಮತ್ತು ಎಸಿಎಫ್ ವೆಂಕಟೇಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಚಿರತೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿದ್ದಾರೆ.