ವಿಷ ಪ್ರಸಾದ ಸೇವನೆ: ಆಸ್ಪತ್ರೆಯಲ್ಲಿರುವವರ ಪರಿಸ್ಥಿತಿ ಹೇಗಿದೆ ?
ಮೈಸೂರು, ಡಿಸೆಂಬರ್ 19 : ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮನ ದೇವಾಲಯದ ಗೋಪುರ ನಿರ್ಮಾಣದ ಶಂಕುಸ್ಥಾಪನೆ ವೇಳೆ ನೀಡಲಾದ ವಿಷಪೂರಿತ ಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.
ನಗರದ ಕಾವೇರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹದೇಶ್ವರ ಬೆಟ್ಟದ ಸಾಲೂರು ಮಠದ ರಸ್ತೆ ನಿವಾಸಿ ನಾಗರಾಜು ಅವರ ಪತ್ನಿ ದುಂಡಮ್ಮ (50) ಮಂಗಳವಾರ ಸಾವಿಗೀಡಾಗಿದ್ದಾರೆ. ಭಾನುವಾರ ಇಬ್ಬರು ಹಾಗೂ ಸೋಮವಾರ ಇಬ್ಬರು ಮೃತಪಟ್ಟಿದ್ದರು. ಪ್ರಕರಣ ನಡೆದ ದಿನ 11 ಮಂದಿ ಕೊನೆಯುಸಿರೆಳೆದಿದ್ದರು. ಅಸ್ವಸ್ಥರನ್ನು ವಿವಿಧ ಆಸ್ಪತೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಿನ್ನುವ ಪ್ರಸಾದಕ್ಕೆ ವಿಷ ಹಾಕಿದ್ದು ನಾನೇ: ತಪ್ಪೊಪ್ಪಿಕೊಂಡ ಮಹಿಳೆ?
ನಗರದ ವಿವಿಧ ಆಸ್ಪತ್ರೆಗಳಲ್ಲಿ 100 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 21 ಮಂದಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. 16 ಮಂದಿಯ ಸ್ಥಿತಿ ಸುಧಾರಿಸಿದ್ದು, ಆಸ್ಪತೆಯಿಂದ ಬಿಡುಗಡೆ ಆಗುವ ಸ್ಥಿತಿಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ್, ಆರ್ಎಂಓ ಡಾ.ರಾಜೇಶ್ ಕುಮಾರ್ ಮಾತನಾಡಿ, ಕೆ. ಆರ್. ಆಸ್ಪತ್ರೆಗೆ 83 ಜನ ಅಸ್ವಸ್ಥರು ನೋಂದಣಿ ಆಗಿದ್ದರು. ಈ ಪೈಕಿ 56 ಜನ ಪುರುಷರು, 16 ಮಂದಿ ಮಹಿಳೆಯರು ಇದ್ದಾರೆ. ಹತ್ತು ಮಂದಿ ಮಕ್ಕಳು ಇಲ್ಲಿ ದಾಖಲಾಗಿದ್ದರು. ಇಲ್ಲಿ ಒಂದು ಸಾವಗಿತ್ತು, ಇಬ್ಬರು ಡಿಸ್ಚಾರ್ಜ್ ಆಗಿದ್ದು, ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದ 24 ಮಂದಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರೂ ಜಿಲ್ಲಾಡಳಿತದ ಆದೇಶದ ಮೇರೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವಿಷ ಪ್ರಸಾದವನ್ನು ಉಣಿಸಲು ಅಂಬಿಕಾ ಮುಂದಾಗಿದ್ದಾದರೂ ಏಕೆ ? ಸ್ವಾಮೀಜಿಗೂ, ಈಕೆಗೂ ಏನು ಸಂಬಂಧ ?
ಮುಂದಿನ ಎರಡು ದಿನಗಳಲ್ಲಿ 24 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗುವುದು. ಮುಂದಿನ ಒಂದು ವಾರದೊಳಗೆ ಇಬ್ಬರು ಗುಣಮುಖರಾಗುವ ಲಕ್ಷಣ ಇದೆ ಎಂದು ಡಾ. ರಾಜೇಶ್ ತಿಳಿಸಿದರು. ಈಗಾಗಲೇ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಮಂಗಳವಾರ ಕೆಲವರು ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಸಚಿವರು, ಶಾಸಕರ ಆದೇಶದ ಮೇರೆಗೆ ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದೇವೆ ಎಂದು ಹೇಳಿದರು.
ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಇಲ್ಲ. ಡಿಸ್ಚಾರ್ಜ್ ಆಗುವವರನ್ನು ಇಲ್ಲಿಂದ ನೇರವಾಗಿ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಅಲ್ಲಿನ ವೈದ್ಯರು ಅವರ ಮನೆಗಳಿಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.
ವಿಷಪ್ರಸಾದ ಪ್ರಕರಣ: ತಡರಾತ್ರಿ ಸಾಲೂರು ಮಠದ ಶ್ರೀಗಳು ಪೊಲೀಸ್ ಕಸ್ಟಡಿಗೆ
ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಪೂರ್ಣ ಮಾಹಿತಿ ಇಲ್ಲ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಬ್ಬರು ಕ್ರಿಟಿಕಲ್ ಅಂತ ಮಾಹಿತಿ ಇದೆ ಎಂದು ಡಾ.ರಾಜೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.