ಮೈಸೂರು: ದಲಿತರಿಗೆ ಬಹಿಷ್ಕಾರದ ಅಮಾನವೀಯ ಶಿಕ್ಷೆ
ಮೈಸೂರು, ಫೆಬ್ರವರಿ 8 : ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ನಡೆದಿದೆ.
ಮೈಸೂರಿನ ನಂಜನಗೂಡು ತಾಲೂಕಿನ ತರದಲೆ ಗ್ರಾಮದಲ್ಲಿ ಸವರ್ಣೀಯರು ದಲಿತರನ್ನು ಬಹಿಷ್ಕಾರ ಹಾಕಿದ್ದಾರೆ. ದಲಿತರು ಗ್ರಾಮದಲ್ಲಿರುವ ಸವರ್ಣಿಯರ ಅಂಗಡಿಗಳಲ್ಲಿ ಮನೆ ಸಾಮಗ್ರಿಗಳನ್ನ ಖರೀದಿಸುವಂತಿಲ್ಲ.
ಒಂದು ವೇಳೆ ದಲಿತರಿಗೆ ಸಾಮಾಗ್ರಿಗಳನ್ನು ನೀಡಿದರೆ ಅಂತಹವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದಲಿತರನ್ನು ಕೂಲಿ ಕೆಲಸಕ್ಕೂ ಸಹ ಕರೆಯಬಾರದು ಎಂದು ದಿಗ್ಬಂಧನ ವಿಧಿಸಿ ಬಹಿಷ್ಕಾರ ಹಾಕಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಕ್ಷುಲಕ ಕಾರಣಕ್ಕೆ ದಲಿತರು ಮತ್ತು ಸವರ್ಣಿಯರ ನಡುವೆ ಊರ ಹಬ್ಬದ ವೇಳೆ ಜಗಳ ಉಂಟಾಗಿತ್ತು. ಈಗ ಮತ್ತೆ ಊರ ಹಬ್ಬ ಮಾಡುವ ವೇಳೆ ಹಳೇ ಜಗಳದ ಹಿನ್ನೆಲೆಯಲ್ಲಿ ಸವರ್ಣಿಯರು ದಲಿತರಿಗೆ ಬಹಿಷ್ಕಾರ ಹಾಕಿ ಹಬ್ಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ತಹಶೀಲ್ದಾರ್ ರಿಂದ ರಾಜಿ ಸಂಧಾನ
ಈ ಕುರಿತಾಗಿ ತಹಸೀಲ್ದಾರ್ ರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ತರದೆಲೆ ಗ್ರಾಮದ ಸವರ್ಣೀಯರೊಂದಿಗೆ ಸಭೆ ನಡೆಸಿ ಸಾಮಾಜಿಕ ಬಹಿಷ್ಕಾರ ಹಾಗೂ ಅಸ್ಪೃಶ್ಯತೆ ಆಚರಣೆ ಕಂಡು ಬಂದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ, ಸೌಹಾರ್ದಯುತವಾಗಿ ಹೊಂದಿಕೊಂಡು ಹೋಗುವಂತೆ ಪೋಲಿಸರು ಸೂಚನೆ ನೀಡಿದರು.
ಈ ಸಂದರ್ಭ ಉಪ್ಪಾರ ಸಮುದಾಯದ ತಾಲೂಕು ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಎಚ್.ಎಸ್. ಮೂಗಶೆಟ್ಟಿ ಮಾತನಾಡಿ, ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬುದು ಸುಳ್ಳು ಆರೋಪ. ಈ ಹಿಂದೆ ಚುನಾಯಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಉಪ್ಪಾರ ಸಮುದಾಯದವರು ಪ್ರತ್ಯೇಕವಾಗಿ ಗ್ರಾಮ ದೇವತೆ ಹಬ್ಬವನ್ನು ಆಚರಿಸಿಕೊಂಡು ಬರಲು ತೀರ್ಮಾನಿಸಲಾಗಿತ್ತು. ಆದರೆ ಈಗ ಅನವಶ್ಯಕವಾಗಿ ಈ ವಿಷಯವನ್ನೇ ದೊಡ್ಡದು ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.