ವರುಣಾ ಕ್ಷೇತ್ರದ ಜನರೆದುರು ಸಿದ್ದರಾಮಯ್ಯ ಕರುಣಾಜನಕ ಭಾಷಣ
ಮೈಸೂರು, ಜೂನ್ 12 : "ನಾನು ಸೋತಿದ್ದಕ್ಕೆ ಬೇಸರಗೊಂಡಿಲ್ಲ. ಆದರೆ ಇಷ್ಟು ಕೆಲಸ ಮಾಡಿದರೂ ಜನರು ಏಕೆ ನನ್ನನ್ನು ಆರಿಸಲಿಲ್ಲ ಎಂಬುದು ಗೊತ್ತಾಗದೆ ಬೇಸರಗೊಂಡಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗದ್ಗದಿತರಾದರು.
ಮೈಸೂರಿನಲ್ಲಿ ಮಂಗಳವಾರ ವರುಣಾ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವ ಸಮಾವೇಶದಲ್ಲಿ ಮಾತನಾಡಿ, ನನ್ನ ಸೋಲಿನಿಂದ ಎದೆಗುಂದಿಲ್ಲ. ನನಗೆ ಈ ಸೋಲು ಮೊದಲನೆಯದಲ್ಲ. ಆದರೆ ಇಷ್ಟೊಂದು ಕೆಲಸ ಮಾಡಿದರೂ ಜನ ಯಾಕೆ ಕೈ ಹಿಡಿಯಲಿಲ್ಲ ಎಂಬುದು ಕಾಡುತ್ತಿದೆ.
ಜನರೇ ಟೋಪಿ ಹಾಕಿದ್ರು, ನೀನ್ಯಾಕೆ ಈಗ ಟೋಪಿ ಹಾಕ್ತಿಯಪ್ಪ ಎಂದ ಸಿದ್ದು
ಕೆಲಸ ಮಾಡಿದ ನಮಗೆ ಜನ ಆಶೀರ್ವಾದ ಮಾಡಲಿಲ್ಲ ಎನ್ನುವ ಬೇಸರ ಇದೆ. ಮನ್ ಕೀ ಬಾತ್ ಎಂದು ಸುಳ್ಳು ಹೇಳುತ್ತಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಡೋಂಗಿಗಳದ್ದೇ ದರ್ಬಾರ್ ಆಗಿಬಿಡುತ್ತದೆ. ದಲಿತರ ಬಗ್ಗೆ ಕಾಳಜಿ ಇದೆ ಎಂದು ಹಲವರು ಸುಳ್ಳು ಹೇಳುತ್ತಾರೆ. ಅಲ್ಲಿ ಅವರ ಮನೆಗೆ ಹೋಗಿ ಹೋಟೆಲ್ನಿಂದ ದೋಸೆ, ಇಡ್ಲಿ ತರಿಸಿಕೊಂಡು ತಿನ್ನುತ್ತಾರೆ ಎಂದು ಲೇವಡಿ ಮಾಡಿದರು.
ದಲಿತರಿಗೆ ಕೇಂದ್ರ ಸರಕಾರ ಎಷ್ಟು ಖರ್ಚು ಮಾಡಿದೆ?
ನಾವು ದಲಿತರಿಗೆ 28 ಸಾವಿರ ಕೋಟಿ ರುಪಾಯಿ ಖರ್ಚು ಮಾಡ್ತಿದ್ದೀವಿ ಎಂದು ಮಾತನಾಡುವ ಮೋದಿ, ಇದುವರಗೆ ಎಷ್ಟು ಖರ್ಚು ಮಾಡಿದ್ದಾರೆ ಹೇಳಲಿ. ಬರೀ ಡೋಂಗಿ ಹೊಡೆಯುವ ಇವರು, ಅಪಪ್ರಚಾರ ಬಿಟ್ಟು ಬೇರೇನು ಮಾಡಿದ್ದಾರೆ ಹೇಳಲಿ ಎಂದ ಸಿದ್ದರಾಮಯ್ಯ, ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾತಿಗೆ ವ್ಯಂಗ್ಯ ಮಾಡಿದರು.
ಧರ್ಮ ಒಡೆಯುವ ಕೆಟ್ಟ ಅಭ್ಯಾಸವಿಲ್ಲ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಧರ್ಮ ಒಡೆದರು ಎನ್ನುವ ಆರೋಪ ನನಗ್ಯಾಕಪ್ಪ? ಬಸವಣ್ಣನವರು ನಿನ್ನೆ- ಮೊನ್ನೆ ಹುಟ್ಟಿಲ್ಲ. 850 ವರ್ಷಗಳ ಹಿಂದೆಯೇ ಹುಟ್ಟಿ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಎಲ್ಲರೂ ಬಂದು ಕೇಳಿಕೊಂಡರು, ನಾವು ಶಿಫಾರಸು ಮಾಡಿದೆವು. ನಾವೇನು ಆ ಧರ್ಮವನ್ನು ಸೃಷ್ಟಿ ಮಾಡಿಲ್ಲ. ಆದರೆ ಜನರಿಗೆ ಸುಳ್ಳು ಹೇಳಿ, ನಾನು ಧರ್ಮ ಒಡೆದೆ ಎಂದು ಅಪಪ್ರಚಾರ ಮಾಡಿದರು. ನನಗೆ ಧರ್ಮ ಒಡೆಯುವ ಕೆಟ್ಟ ಅಭ್ಯಾಸ ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಫರ್ಧಿಸಬೇಡಿ ಎಂಬ ಸಲಹೆ
ಇದೇ ವೇಳೆ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ನಾನೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಫರ್ಧಿಸಬೇಡಿ ಎಂದಿದ್ದೆ. ನನಗೆ ಇಲ್ಲದ ಭಯ ನಿನಗೆ ಯಾಕಯ್ಯ ಎಂದಿದ್ದರು. ವರುಣಾ ಕ್ಷೇತ್ರದಲ್ಲೇ ನಿಲ್ಲಿ ಸರ್ ಎಂದಿದ್ದೆ. ಚಾಮುಂಡೇಶ್ವರಿ ಕ್ಷೇತ್ರ ಬೇಡ, ಅಲ್ಲಿ ಜನ ಸರಿ ಇಲ್ಲ ಎಂದಿದ್ದೆ. 2006ರ ಉಪ ಚುನಾವಣೆಯಲ್ಲೇ ನಮಗೆ ನೀರು ಕುಡಿಸಿದ್ದಾರೆ ಅಂದಿದ್ದೆ. ಆದರೂ ಚುನಾವಣೆಯಲ್ಲಿ ಸ್ಫರ್ಧಿಸಿ ಪರಾಭವಗೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆ
ಸಿದ್ದರಾಮಯ್ಯ ಅವರು ಮುಂದೆ ಪ್ರಧಾನಿ ಅಭ್ಯರ್ಥಿ ಆಗಲಿದ್ದಾರೆ ಎಂದು ಮಾಧ್ಯಮಗಳಲ್ಲೂ ಚರ್ಚೆಗೆ ಬರುತ್ತಿತ್ತು. ಆದರೆ ಜನ ದೂರ ಹೋಗುವುದು ಬೇಡ ಎಂದು ಸೋಲಿಸಿದ್ದಾರೆ. ಮಗುವಿಗೆ ದೃಷ್ಟಿಯಾದರೆ ತಾಯಿ ಕಪ್ಪು ಬೊಟ್ಟು ಇಡುತ್ತಾಳೆ. ಆದರೆ ತಾಯಿಗೇ ದೃಷ್ಟಿಯಾದರೆ ಮಕ್ಕಳು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು? ನಮಗೆಲ್ಲ ನಿಮ್ಮ ಸೋಲು ನೋವು ತರಿಸಿದೆ. ಸಿದ್ದರಾಮಯ್ಯ ಅವರಿಗೆ ಮುಂದೆ ಒಳ್ಳೆಯ ಹುದ್ದೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನವು ಸಿದ್ದರಾಮಯ್ಯನವರು ನೀಡಿದ ಭಿಕ್ಷೆ
ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ನಾನು ಸಚಿವನಾಗಿದ್ದೇನೆ ಎಂದರೆ ಅದು ಸಿದ್ದರಾಮಯ್ಯ ಅವರು ನೀಡಿದ ಭಿಕ್ಷೆ. ನಾನು ಶಾಸಕನಾಗಿ ಆಯ್ಕೆಯಾಗಲು ಸಿದ್ದರಾಮಯ್ಯನವರೇ ಕಾರಣ. ನನಗೆ ಸಚಿವ ಸ್ಥಾನವು ಸಿದ್ದರಾಮಯ್ಯ ಅವರು ನೀಡಿದ ಭಿಕ್ಷೆ. ಅವರ ಕೋಮಿನಿಂದ ಹತ್ತಕ್ಕೂ ಹೆಚ್ಚು ಶಾಸಕರಿದ್ದಾರೆ. ನಮ್ಮ ಕೋಮಿನಿಂದ ನಾನೊಬ್ಬನೇ ಆಯ್ಕೆಯಾಗಿದ್ದೇನೆ. ನನಗೂ ಸಚಿವ ಸ್ಥಾನ ನೀಡಿದ್ದಾರೆ ಎಂದು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.