ಚುನಾವಣೆಗೂ ಮುನ್ನ ನಂಜನಗೂಡಿಗೆ ಕುಡಿಯುವ ನೀರು ಬಂತು!
ಮೈಸೂರು, ಜನವರಿ 11: ನಂಜನಗೂಡು ಉಪಚುನಾವಣೆ ಸಂದರ್ಭ ನೀಡಿದ ಹಲವು ಭರವಸೆಗಳನ್ನು ಸರ್ಕಾರ ಈಡೇರಿಸುವತ್ತ ಗಮನಹರಿಸುತ್ತಿದೆ. ಅದರಂತೆ ಕಳೆದ ಮೂರು ದಶಕಗಳಿಂದ ಕುಡಿಯುವ ನೀರಿಗಾಗಿ ಕಾದಿದ್ದ ನಂಜನಗೂಡು ತಾಲೂಕಿನ ಗ್ರಾಮಗಳಿಗೆ ಕೊನೆಗೂ ನೀರು ಬರುವುದು ಖಚಿತವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜ.11) ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಾರಿ ಮಾಡಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸೇರಿದಂತೆ 124 ಗ್ರಾಮಗಳಿಗೆ ಶುದ್ಧ ಕುಡಿವ ನೀರು ಬರಲಿದೆ. ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ., ಸಂಸ್ಥೆ ಇಲಾಖೆ ನಿರ್ದೇಶನದಂತೆ ಬೆಟ್ಟ- ಗುಡ್ಡಗಳನ್ನೇ ಆಶ್ರಯವಾಗಿಸಿಕೊಂಡು ಯೋಜನೆ ರೂಪಿಸಿ ಯಶಸ್ವಿಯಾಗಿದೆ.
ಅರಮನೆ ನಗರಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು
ಕಪಿಲ ನದಿಯಿಂದ ಸರಬರಾಜಾಗುವ ನೀರನ್ನು ಬೆಟ್ಟ ಗುಡ್ಡಗಳ ಮೇಲೆ ಸುಸಜ್ಜಿತ ಟ್ಯಾಂಕ್ ನಿರ್ಮಿಸಿ ಪಂಪಿಂಗ್ ಮೂಲಕ ಟ್ಯಾಂಕ್ಗಳನ್ನು ತುಂಬಿಸಲಾಗುತ್ತದೆ. ಇದಕ್ಕಾಗಿ ದೇಪೇಗೌಡನಪುರ ಬಳಿ ನೆಲಮಟ್ಟದಲ್ಲಿ 590 ಕಿಲೋ ಲೀಟರ್ ಸಾಮಥ್ರ್ಯದ ಬೃಹತ್ ತೊಟ್ಟಿಯನ್ನು ನಿರ್ಮಿಸಲಾಗಿದೆ. ಹೀಗೆ ಕಪಿಲ ನದಿಯಿಂದ 5.5 ಕಿ.ಮೀ. ದೂರಕ್ಕೆ ಹರಿಸಲಾಗುವ ನೀರನ್ನು ಹುಳ್ಳಹಳ್ಳಿಯ ಮಾದಾಪುರ ಶುದ್ಧಿಕರಣ ಘಟಕಕ್ಕೆ ತರಲಾಗುತ್ತದೆ.
ಹೀಗೆ ತಂದ ನದಿಯ ನೀರನ್ನು ಹುಲ್ಲಹಳ್ಳಿಯ ಮಾದಾಪುರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಶುದ್ಧಿಕರಣ ಘಟಕದಲ್ಲಿ ಶುದ್ಧಿಕರಿಸಲಾಗುತ್ತದೆ. ಇಲ್ಲಿ ಶುದ್ಧಿಕರಿಸಲಾದ ನೀರನ್ನು 124 ಗ್ರಾಮಗಳಿಗೆ ಕೊಳವೆಗಳ ಮೂಲಕ ಹರಿಸಲಾಗುತ್ತದೆ. ಶುದ್ಧಿಕರಣ ಘಟಕದಲ್ಲಿ ನೀರಿನ ಶುದ್ಧಿಕರಣ ಪರಿಶೀಲನೆ ಮತ್ತು ನೀರಿನ ಪ್ರಮಾಣ ವೀಕ್ಷಣೆಗೆ ಅತ್ಯಾಧುನಿಕ ಎನ್ನಲಾಗಿರುವ ಸ್ಕೆಡಾ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಂತರ್ಜಾಲ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಸ್ಕೆಡಾ ನೀರಿನ ಶುದ್ಧೀಕರಣವನ್ನು ಮಾಪನ ಮಾಡುತ್ತದೆ. ನೀರಿನ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹಿಸುತ್ತದೆ ಮತ್ತು ನೀರಿನ ಸುಲಲಿತ ಸರಬರಾಜಿಗೆ ಅನುವಾಗುವಂತೆ ವಾಲ್ವ್ ಗಳನ್ನು ನಿಯಂತ್ರಿಸುತ್ತದೆ.
ಕೋಮುವಾದ ವರ್ಸಸ್ ಜಾತ್ಯತೀತವಾದ : ಸಿದ್ದರಾಮಯ್ಯ ಸಂದರ್ಶನ
ಕುಡಿಯುವ ನೀರಿಗೆ ಸಮಸ್ಯೆ ಇರುವ ಈ ವ್ಯಾಪ್ತಿಯ 123 ಗ್ರಾಮಗಳ 2011ರ ಸೆನ್ಸನ್ ಆಧಾರಿತ ಜನಸಂಖ್ಯೆ 1,47,980 ಇದ್ದು ಮುಂದೆ ಅಂದರೆ 2030ಕ್ಕೆ 2,42,778 ಜನಸಂಖ್ಯೆ ಇರಲಿದೆ ಎಂದು ವೈಜ್ಞಾನಿಕವಾಗಿ ಅಂದಾಜಿಸಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಯೋಜನೆ ಜಾರಿಗೆ ಮುಂದಾಗಿದೆ. ಈ ಪ್ರದೇಶದ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 55 ಲೀ. ಶುದ್ಧ ಕುಡಿವ ನೀರು ಒದಗಿಸುವ ಮುಂದಾಲೋಚನೆ ಈ ಯೋಜನೆಯದ್ದಾಗಿದೆ.
ಇದರಲ್ಲಿ 288.48 ಕಿ.ಮೀ. ನಷ್ಟು ಅತ್ಯಾಧುನಿಕ ಪೈಪ್ಗಳನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಎಂ.ಎಸ್, ಡಿಐ, ಹೆಚ್.ಡಿ, ಮಾದರಿಯ ಅತ್ಯಾಧುನಿಕ ದೀರ್ಘ ಬಾಳಿಕೆಯ ಪೈಪ್ ಗಳನ್ನು ಅಳವಡಿಸಲಾಗಿದೆ. 240 ಎಚ್ಪಿ 300 ಎಚ್ಪಿಯಂತಹ ಶಕ್ತಿಯುತ ಮೋಟಾರ್ ಗಳನ್ನು ಯೋಜನೆ ಜಾರಿಗೆ ಬಳಕೆ ಮಾಡಲಾಗಿದೆ.
ಈ ಭಾಗದ ಜೀವನ ನದಿಯಾಗಿರುವ ಕಪಿಲ ನದಿಯಿಂದ ಹರಿಸಲಾಗುವ ನೀರನ್ನು ಶುದ್ಧಿಕರಿಸಲು ಹುಲ್ಲಹಳ್ಳಿ ಬಳಿಯ ಮಾದಾಪುರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನೀರು ಶುದ್ಧಿಕರಣ ಘಟಕ ತಲೆ ಎತ್ತಿದೆ. ಇಲ್ಲಿಗೆ ತರಲಾಗುವ ನದಿ ನೀರನ್ನು ಎರೆಟರ್ ಗಳ ಮೂಲಕ ಮೇಲ್ಮುಖವಾಗಿ ಚಿಮ್ಮಿಸಲಾಗುತ್ತದೆ. ಇದರಿಂದ ನೀರಿಗೆ ಗಾಳಿಯಲ್ಲಿನ ಆಮ್ಲಜನಕ ಸೇರಿಕೊಳ್ಳುತ್ತದೆ. ನಂತರ ಆಲಂ ಸೇರಿದಂತೆ ವಿವಿಧ ಅಂಶಗಳನ್ನೊಳಗೊಂಡ ಫ್ಲಾಷ್ ಮಿಕ್ಸ್ಚರ್ ಅನ್ನು ಸೇರಿಸಲಾಗುತ್ತದೆ.
ಮಿಕ್ಸಚರ್ ಸೇರ್ಪಡೆ ನಂತರ 30 ನಿಮಿಷಕ್ಕೂ ಹೆಚ್ಚು ಕಾಲ ನೀರು ಮಧ್ಯ ಮೋಟಾರ್ ಹೊಂದಿರುವ ಉಪಕರಣದಲ್ಲಿ ಶೇಖರಣೆ ಆಗಿರುತ್ತದೆ. ಇದರಿಂದ ನೀರಿನಲ್ಲಿನ ಸಣ್ಣ- ಸಣ್ಣ ಕಣಗಳು ಕೆಳಗೆ ಸೇರುತ್ತದೆ. ನಂತರ ಮೇಲ್ಮುಖದ ನೀರನ್ನು ಸಣ್ಣ- ಸಣ್ಣ ರಂಧ್ರಗಳ ಮೂಲಕ ಹೊರ ಹರಿಸಲಾಗುತ್ತದೆ. ಹೀಗೆ ಹೊರ ಬಂದ ನೀರನ್ನು ವಿವಿಧ ಮಾದರಿಯ ವಿವಿಧ ಅಳತೆಯ ಮರಳಿನ ಮೂಲಕ ಹರಿಸಿ ಶುದ್ಧಿಕರಿಸಿ, ಶುದ್ಧಿಕರಣದ ಸಂಪಿಗೆ ಸೇರಿಸಲಾಗುತ್ತದೆ. ಪ್ರತಿ ನಿತ್ಯ ಎರಡು ಬಾರಿ ನೀರಿನ ಶುದ್ಧೀಕರಣ ಪ್ರಮಾಣವನ್ನು ಪರೀಕ್ಷೆಗೆ ಒಳಪಡಿಸುವುದು ವಿಶೇಷವಾಗಿದೆ.