ಒಗ್ಗಟಾಗಿದ್ದರೆ ಮಾತ್ರ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಸಾಧ್ಯ : ಸಿದ್ದರಾಮಯ್ಯ
ಮೈಸೂರು, ಜುಲೈ 30 : ಅಖಂಡ ಕರ್ನಾಟಕ, ಏಕೀಕರಣ ಹೋರಾಟದ ಬಗ್ಗೆ ಏನೆಂದೂ ಗೊತ್ತಿಲ್ಲದವರು ಪತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಇದು ಮೂರ್ಖರ ವಾದ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ತಮ್ಮ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗು ಕುರಿತ ಪ್ರಶ್ನೆಗೆ ಉತ್ತರಿಸಿ, ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಉತ್ತರ ಕರ್ನಾಟಕಕ್ಕೆ ಕೋಟ್ಯಂತರ ರೂ. ಹಣ ನೀಡಿದ್ದೇನೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದು ಹೇಳಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಸಿದ್ದರಾಮಯ್ಯ ಖಡಕ್ ಉತ್ತರ
ಕೇಂದ್ರದ ಕೊಡುಗೆ ಶೂನ್ಯ: ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯ ಎಂಬುದು ಬಿಜೆಪಿಯವರಿಗೆ ಗೊತ್ತಿಲ್ಲವೆ? ಸಮಗ್ರ ಕರ್ನಾಟಕ ಒಗ್ಗಟ್ಟಾಗಿದ್ದಲ್ಲಿ ಮಾತ್ರ ರಾಜ್ಯದ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಸಾಧ್ಯ. ಪ್ರತ್ಯೇಕ ರಾಜ್ಯವಾದರೆ ಮಾತ್ರ ಅಭಿವದ್ಧಿಯಾಗುತ್ತದೆ ಎಂಬುದು ಸಾಧ್ಯವಾಗದ ಮಾತು.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಎಲ್ಲರೂ ಸೇರಿ ಶ್ರಮಿಸಬೇಕಿದೆ ಎಂದು ಹೇಳಿದರು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಏನಿಲ್ಲ. ನಮ್ಮದು ಅಖಂಡ ಕರ್ನಾಟಕ. ಏಕೀಕರಣ ಮಹತ್ವ ತಿಳಿದಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವ ಸ್ವಾರ್ಥಿಗಳು.
ಆಗಸ್ಟ್ 2ರ ಉತ್ತರ ಕರ್ನಾಟಕ ಬಂದ್ : ಯಾರು, ಏನು ಹೇಳಿದರು?
ಕರ್ನಾಟಕ ಏಕೀಕರಣ ಏಕಾಯಿತು ಎಂಬುದು ತಿಳಿದಿಲ್ಲ. ಭಾಷಾವಾರು ಪ್ರಾಂತ್ಯ ಏಕಾಯಿತು ಎಂಬುದರ ಮಾಹಿತಿಯಿಲ್ಲದೇ ಹೇಳಿಕೆ ನೀಡುತ್ತಿರುವುದು ಬಾಲಿಶವಾದ ಎಂದು ಕಿಡಿಕಾರಿದರು.