ಸಿದ್ದರಾಮಯ್ಯಗೆ ಪ್ರಧಾನಿ ಹುದ್ದೆ ಮೇಲೆ ಕಣ್ಣು: ಜಿಟಿ ದೇವೇಗೌಡ ವ್ಯಂಗ್ಯ
ಮೈಸೂರು, ನವೆಂಬರ್ 5: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದೀಗ ಪ್ರಧಾನಿ ಹುದ್ದೆ ಮೇಲೆ ಕಣ್ಣು ಬಿದ್ದಿದೆ. 2019ರ ಚುನಾವಣೆಗೆ ಕಾಂಗ್ರೆಸ್ ಪಿಎಂ ಅಭ್ಯರ್ಥಿ ಸಿದ್ದರಾಮಯ್ಯನವರೇ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೆಗೌಡ ವ್ಯಂಗ್ಯವಾಡಿದರು.
ನವೆಂಬರ್ 7ರ ಕುಮಾರಪರ್ವ ಯಾತ್ರೆ ಹಿನ್ನೆಲೆಯಲ್ಲಿ, ಸಮಾವೇಶದ ಪ್ರಚಾರ ರ್ಯಾಲಿಗೆ ಸ್ವತಃ ಬೈಕ್ ಚಲಾಯಿಸುವ ಮೂಲಕ ಶಾಸಕ ಜಿಟಿ ದೇವೇಗೌಡ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅಂದುಕೊಂಡಂತೆ ಎಲ್ಲವೂ ಆಗಿದ್ದಾರೆ. ಇದೀಗ ಪ್ರಧಾನಿ ಹುದ್ದೆ ಮೇಲೆ ಅವರಿಗೆ ಕಣ್ಣು ಬಿದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನು ಬಿಟ್ಟರೇ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸುವವರು ಯಾರು ಇಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಸಿಎಂ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಕ್ಷೇತ್ರ ಬದಲಿಸುವ ಬಗ್ಗೆ ಟೀಕಿಸಿದ ಜಿಟಿಡಿ, ಸಿಎಂ ಅವರು ಕ್ಷೇತ್ರ ಬದಲಿಸುತ್ತಿರುವುದು ಸುಮ್ಮನೆ. ಅವರಿಗೆ ಇದೀಗ ಪ್ರಧಾನಿಯಾಗುವ ಆಸೆ ಇದೆ. ಹೀಗಾಗಿ ಅದಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದುಕೊಳ್ಳಲಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೆನೆ ಪಾಳಯ ಬಿರುಸಿನ ಪ್ರಚಾರ ಆರಂಭಿಸಿದೆ. ಈಗಾಗಲೇ ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯನ್ನು ನ.7ರಂದು ಮೈಸೂರಿನಿಂದಲೇ ಆರಂಭಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಜಿ .ಟಿ ದೇವೇಗೌಡ, ನ.7ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿ ನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಮೊದಲ ಸಭೆ ನಡೆಸಲಾಗುವುದು ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತದಲ್ಲಿ ಕಾರ್ಯಕರ್ತರ ಸಭೆ ನಂತರ ಚುನಾವಣಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಕರ್ನಾಟಕ ವಿಕಾಸ ವಾಹಿನಿ' ವಾಹನದಲ್ಲಿ ಕೆ.ಆರ್.ನಗರ, ಹಾಸನ, ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಿ ಅಲ್ಲಿ ಸಂಜೆ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.