ಸಹಪಾಠಿಯನ್ನು ಭೇಟಿಯಾಗಿ ಬಾಲ್ಯ ನೆನಪಿಸಿಕೊಂಡ ಸಿದ್ದರಾಮಯ್ಯ
ಮೈಸೂರು, ಸೆಪ್ಟೆಂಬರ್ 11: ತಾವು ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನೆಲ್ಲ ಮರೆತು, ತಮ್ಮ ಮಾಜಿ ಸಹಪಾಠಿಯೊಂದಿಗೆ ಮಗುವಿನಂತೆ ಬಾಲ್ಯದ ಸಂಭ್ರಮವನ್ನೆಲ್ಲ ಹಂಚಿಕೊಂಡು ನಕ್ಕು ಹಗುರಾದರು ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಿಬಿಐ ತನಿಖೆಯಲ್ಲಿ ನಂಬಿಕೆಯಿಲ್ಲ: ಸಿಎಂ ಬಳಿ ಗೌರಿ ತಾಯಿ ಇಂಗಿತ
ಸೆ.10 ರಂದು ಮೈಸೂರಿನಲ್ಲಿದ್ದ ಸಿದ್ದರಾಮಯ್ಯ, ಇಲ್ಲಿನ ಸಿದ್ಧಾರ್ಥ ನಗರದಲ್ಲಿದ್ದ ತಮ್ಮ ಸಹಪಾಠಿ ರಾಜಲಕ್ಷ್ಮಿ ಅವರ ಮನೆಗೆ ಭೇಟಿ ನೀಡಿದ್ದರು. 5ನೇ ತರಗತಿಯಿಂದ 7ನೇ ತರಗತಿಯವರೆಗೆ ಸಿದ್ದರಾಮಯ್ಯ ಅವರ ಸಹಪಾಠಿ, ಸ್ನೇಹಿತೆಯಾಗಿದ್ದ ರಾಜಲಕ್ಷ್ಮಿ ಅವರು ಸಿದ್ದರಾಮಯ್ಯ ಅವರನ್ನು ಮನೆಗೆ ಆಮಂತ್ರಿಸಿದ್ದರು. ಸ್ನೇಹಿತೆಯ ಕರೆಗೆ ಓಗೊಟ್ಟು ಅವರ ಮನೆಗೆ ತೆರಳಲಿದ ಸಿದ್ದರಾಮಯ್ಯ, ಅವರ ಆತಿಥ್ಯ ಸ್ವೀಕರಿಸಿದರು.
ಸಿದ್ದರಾಮಯ್ಯ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಲಕ್ಷ್ಮಿ ತಮ್ಮ ಸಂತಸವನ್ನು ಹಂಚಿಕೊಂಡರು. "ಬರುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲೇ ನಾನು ಅವರನ್ನು ಮನೆಗೆ ಕರೆದಿದ್ದೆ. ಆದರೆ ಅವರು ತಮ್ಮ ಹುದ್ದೆಯನ್ನೆಲ್ಲ ಮರೆತು ಸಾಮಾನ್ಯ ವ್ಯಕ್ತಿಯಂತೆ ತಕ್ಷಣ ಬರುವುದಕ್ಕೆ ಒಪ್ಪಿಕೊಂಡರು. ಮನೆಗೆ ಬಂದಾಗಲೂ ಹಳೆಯ ಸಹಪಾಠಿಯಂತೆಯೇ ಮಾತನಾಡಿದರೇ ಹೊರತು, ಎಲ್ಲಿಯೂ ತಾವು ಈ ರಾಜ್ಯದ ಮುಖ್ಯಮಂತ್ರಿ ಎಂಬಂತೆ ವರ್ತಿಸಲಿಲ್ಲ" ಎಂದು ರಾಜಲಕ್ಷ್ಮಿ ಅವರು ಹೆಮ್ಮೆಯಿಂದ ಹೇಳಿಕೊಂಡರು.
"ನಮ್ಮ ಸಹಪಾಠಿಗಳೆಲ್ಲರ ನೆನಪಿನಲ್ಲಿಟ್ಟಿಕೊಂಡು, ಅವರೆಲ್ಲರ ಬಗ್ಗೆಯೂ ಸಿದ್ದರಾಮಯ್ಯ ವಿಚಾರಿಸಿದರು. ಅವರ ಸರಳತೆ ನಿಜಕ್ಕೂ ಖುಷಿಕೊಟ್ಟಿತು. ಅವರ ಮಗ ರಾಕೇಶ್ ತೀರಿಕೊಂಡ ಸಮಯದಲ್ಲಿ ನಾನವರಿಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದನ್ನೂ ನೆನಪಿಸಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿರುವ ಅವರ ಪಿಎ ಗಳ ನಂಬರ್ ಅನ್ನೂ ಕೊಟ್ಟು ನಾನು ಫೋನ್ ಮಾಡಿದಾಗೆಲ್ಲ ಅವರು ಆತ್ಮೀಯವಾಗಿ ಮಾತನಾಡುತ್ತಾರೆ" ಎಂದು ರಾಜಲಕ್ಷ್ಮಿ ಅವರು ಸಿದ್ದರಾಮಯ್ಯ ಅವರ ಗುಣಗಾನ ಮಾಡಿದರು.