ಮೋದಿಗಿಂತ ಸಿದ್ದರಾಮಯ್ಯರಿಂದ ಅಭಿವೃದ್ಧಿಪರ ಕೆಲಸ: ಜಿಗ್ನೇಶ್
ಮೈಸೂರು, ಮೇ 2 : "ಪ್ರಜಾಪ್ರಭುತ್ವದಲ್ಲಿ ಸಂವಿಧಾನಕ್ಕೆ ಬಹಳಷ್ಟು ಮಹತ್ವವಿದೆ. ಬಿಜೆಪಿ, ಆರೆಸ್ಸೆಸ್, ಸಂಘ ಪರಿವಾರದವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರದವರು ಕೋಮುವಾದಿಗಳು" ಎಂದು ಗುಜರಾತ್ ನ ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಬುಧವಾರ ಇಲ್ಲಿ ವಾಗ್ದಾಳಿ ನಡೆಸಿದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದಿದ್ದರು ನರೇಂದ್ರ ಮೋದಿ. ನಾಲ್ಕೂವರೆ ವರ್ಷ ಕಳೆದರೂ ಅವರ ಮಾತು ಪೂರ್ಣವಾಗಿಲ್ಲ. ಮೋದಿ ನೇತೃತ್ವದ ಸರಕಾರದಲ್ಲಿ ಅತ್ಯಾಚಾರಗಳು, ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ದಲಿತರು, ಆಮಾನ್ಯರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಬಿಜೆಪಿ ಅಂದರೆ 'ಬಲಾತ್ಕಾರಿ ಜಾನ್ ಲೇವಾ ಪಾರ್ಟಿ': ಜಿಗ್ನೇಶ್ ಮೇವಾನಿ
ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಅಂತ ಹೇಳುತ್ತೇನೆ. ಏಕೆಂದರೆ ಅವರು ಕೋಮುವಾದಿಗಳು. ಉಳಿದಂತೆ ಯಾರಿಗಾದರೂ ಅಭಿವೃದ್ಧಿಗಾಗಿ, ಅವರಿಗೆ ಬೇಕಾದರಿಗೆ ಮತ ಹಾಕಲಿ. ನಾನು ಆ ಪಕ್ಷ- ಈ ಪಕ್ಷಕ್ಕೆ ಮತ ಹಾಕಿ ಅಂತ ಹೇಳುವುದಿಲ್ಲ ಎಂದರು.
ಪ್ರಧಾನಿ ಮೋದಿ ಕಾರ್ಪೊರೇಟ್ ಲೂಟಿ ಕೋರ ಎಂದು ನಾನು ಹೇಳಿದ್ದಕ್ಕೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ನಾನೂ ಈಗಲೂ ಹೇಳ್ತೀನಿ, ಮೋದಿ ಅಕ್ಷರಶಃ ಕಾರ್ಪೊರೇಟ್ ಲೂಟಿಕೋರ. ಹಾಗಲ್ಲವಾಗಿದ್ದರೆ ವಿಜಯ್ ಮಲ್ಯ, ನೀರವ್ ಮೋದಿ ದೇಶ ಬಿಟ್ಟು ಓಡಿ ಹೋಗುವುದಕ್ಕೆ ಏಕೆ ಬಿಟ್ಟರು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕೆಲಸಗಳು ಉತ್ತಮ
ಗುಜರಾತಿನಲ್ಲಿ ಅಕ್ರಮವಾಗಿ ಕಾರ್ಖಾನೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಉದ್ಯೋಗ ಕೊಟ್ಟಿಲ್ಲ. ಬದಲಾಗಿ ನೋಟು ನಿಷೇಧ, ಜಿಎಸ್ ಟಿ ಹೊರೆ ಹಾಕಿದರು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರ ಅಭಿವೃದ್ಧಿ ಕೆಲಸಗಳು ಉತ್ತಮವಾಗಿವೆ. ಆದರೆ ಮೋದಿ ಅಭಿವೃದ್ಧಿಯಲ್ಲಿ ಹಿಂದೆ ಇದ್ದಾರೆ ಎಂದು ಹೇಳಿದರು.
ರೈತರ ಆತ್ಮಹತ್ಯೆ ಬಗ್ಗೆ ಮೋದಿ ತುಟಿ ಬಿಚ್ಚುತ್ತಿಲ್ಲ
ರೈತರ ಆತ್ಮಹತ್ಯೆಯ ಬಗ್ಗೆ ಮೋದಿ ತುಟಿ ಬಿಚ್ಚುತ್ತಿಲ್ಲ. ಗುಜರಾತ್ ಮಾದರಿ ಬಗ್ಗೆ ಮಾತನಾಡ್ತಾರೆ ಮೋದಿ. ಅಲ್ಲಿ ರೈತರು ಸಾಯುತ್ತಿದ್ದಾರೆ. ಮೋದಿ ಈ ಬಗ್ಗೆ ಮಾತಾಡುವುದಕ್ಕೆ ಸಿದ್ಧ ಇದ್ದರೆ ಬರಲಿ, ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು. ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಿ ಎಂದ ಜಿಗ್ನೇಶ್ ಮೇವಾನಿ, ನಿಜವಾದ ಕಾಳಜಿಯುಳ್ಳ ಮಣ್ಣಿನ ಮಗ ಪುಟ್ಟಣ್ಣಯ್ಯ. ಅಂತಹವರು ಇಂದು ನಮ್ಮ ನಡುವೆ ಇಲ್ಲ. ಅವರ ಮಗ ದರ್ಶನ್ ಗೆಲ್ಲಿಸುವ ಮೂಲಕ ನಿಜವಾದ ಕೃಷಿಕರಿಗೆ ಬೆಲೆ ಕೊಡಿ ಎಂದರು.
ದರ್ಶನ್ ಗೆದ್ದರೆ ಕೃಷಿ ಸಮೂಹಕ್ಕೆ ಅನುಕೂಲ
ವಿಧಾನಸೌಧದ ಮೊಗಸಾಲೆಯಲ್ಲಿ ದರ್ಶನ್ ಕೂರುವುದನ್ನು ನೋಡುವ ಆಸೆ ನನಗೆ. ದರ್ಶನ್ ಗೆದ್ದರೆ ಕೃಷಿ ಸಮೂಹಕ್ಕೆ ಹೆಚ್ಚು ಅನುಕೂಲವಾಗಲಿದೆ. ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ. ಇಂದು ಅವರ ಪರ ಪ್ರಚಾರ ಮಾಡಿದ್ದೇನೆ.
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸಂದರ್ಶನ
ರೈತಪರ ಹೋರಾಟಗಾರ ಪುಟ್ಟಣ್ಣಯ್ಯ
ಪುಟ್ಟಣ್ಣಯ್ಯ ರೈತರ ಪರ ಹೋರಾಟ ಮಾಡಿದ್ದ ವ್ಯಕ್ತಿ. ಅವರ ಹೋರಾಟದ ಬಗ್ಗೆ ನಾನು ತಿಳಿದಿದ್ದೇನೆ. ಅವರೊಬ್ಬ ಉತ್ತಮ ರೈತ ಹೋರಾಟಗಾರ. ಹಾಗಾಗಿ ದರ್ಶನ್ ಪುಟ್ಟಣ್ಷಯ್ಯ ಪರ ನಾನು ಪ್ರಚಾರ ಮಾಡಿದ್ದೇನೆ ಎಂದು ಮೇವಾನಿ ಹೇಳಿದರು.