ನನ್ನ ಶ್ರಮದಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಎಂದ ಎಚ್ ವಿಶ್ವನಾಥ್
ಮೈಸೂರು, ಮಾರ್ಚ್ 30: "ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವಲ್ಲಿ ನನ್ನ ಶ್ರಮವಿದೆ" ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಪಿರಿಯಾಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಕುರುಬ ಸಮುದಾಯದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಮುದಾಯದ ಕಾಗಿನೆಲೆ ಗುರುಪೀಠವನ್ನು ನಾನು ಹೋರಾಟ ಮಾಡಿ ಸ್ಥಾಪಿಸಿದ್ದೇನೆ. ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಶೂನ್ಯ. ಮುಖ್ಯಮಂತ್ರಿಯಾದ ನಂತರ ಕುರುಬ ಸಮುದಾಯದ ಏಳಿಗೆಗೆ ಕಿಂಚಿತ್ತೂ ಆದ್ಯತೆ ನೀಡದೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಪಿರಿಯಾಪಟ್ಟಣದ ಶಾಸಕ ಕೆ.ವೆಂಕಟೇಶ್ ವಿರುದ್ಧ ಹರಿಹಾಯ್ದ ಅವರು, ವೆಂಕಟೇಶ್ ದುರ್ನಡತೆ ಹೊಂದಿದ್ದು, ಸಮಾಜದ ಬಂಧುಗಳ ಅಭಿವೃದ್ಧಿಗೆ ಪೂರಕವಾದ ಅವಕಾಶ ರೂಪಿಸಿಲ್ಲ. ಆದ್ದರಿಂದ ಕುರುಬ ಸಮುದಾಯದ ಬಂಧುಗಳು ಇದನ್ನು ಅರ್ಥೈಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತರ, ಹಿಂದುಗಳಿದ ವರ್ಗಗಳ ಪರವಾಗಿ ಚಿಂತಿಸುತ್ತಿರುವ ಜೆಡಿಎಸ್ ಗೆ ಬೆಂಬಲ ನೀಡುವಂತೆ ಹೇಳಿದರು.
ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಮಾತನಾಡಿ, ಶಾಸಕ ಕೆ.ವೆಂಕಟೇಶ್ ಮನುಷ್ಯತ್ವ ಇಲ್ಲದ ವ್ಯಕ್ತಿ. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಅನೇಕ ಉತ್ತಮ ವ್ಯಕ್ತಿಗಳ ರಾಜಕೀಯ ಭವಿಷ್ಯವನ್ನು ನಿರ್ನಾಮ ಮಾಡಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಅದೇ ರೀತಿ ನನಗೂ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಂತೆ ಅನೇಕ ತೊಂದರೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.