ಮೈಸೂರಿನಲ್ಲಿ ಮಕ್ಕಳ ಏಳ್ಗೆಗಾಗಿಯೇ ಸಿದ್ದು, ಮಹದೇವಪ್ಪ ಕಾಳಗ
ಮೈಸೂರು, ಫೆಬ್ರವರಿ 23 : ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಆಗಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರೆಂದರೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ. ಇಬ್ಬರೂ ತಮ್ಮ ರಾಜಕೀಯ ಜೀವನದ ಉತ್ತರಾಧಿಕಾರಿಗಳನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವ ಉಮ್ಮೇದಿನಲ್ಲಿದ್ದಾರೆ.
ವರುಣಾ ಕ್ಷೇತ್ರದಿಂದ ಯತೀಂದ್ರ ಹಾಗೂ ತೀ ನರಸೀಪುರ ಕ್ಷೇತ್ರದಿಂದ ಸುನೀಲ್ ಬೋಸ್ ಸ್ಪರ್ಧೆಗೆ ಕಣ ಹದವಾಗುತ್ತಿದೆ. ಒಂದರ್ಥದಲ್ಲಿ ಎಲ್ಲ ಸಿದ್ಧವಾಗಿದೆ. ಇಂತಹ ಸನ್ನಿವೇಶದಲ್ಲಿ ಈ ಎರಡು ಕ್ಷೇತ್ರದಲ್ಲಿನ ಸ್ಥಿತಿ ಹೇಗಿದೆ? ಇತರ ಪಕ್ಷಗಳಿಂದ ಆಕಾಂಕ್ಷಿಗಳಾಗಿರುವವರು ಯಾರು ಇತ್ಯಾದಿ ಪ್ರಶ್ನೆಗಳು ಬರುತ್ತವೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲುವಿಗೆ ಅದೆಷ್ಟು ಅಡ್ಡಿಗಳೋ!
ತಿ.ನರಸೀಪುರ, ವರುಣಾ, ನಂಜನಗೂಡು, ಚಾಮುಂಡೇಶ್ವರಿ ಭಾಗದಲ್ಲಿ ದಲಿತರು, ಲಿಂಗಾಯತರು, ಕುರುಬರ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಭಾಗದಲ್ಲಿ ಲಿಂಗಾಯತರ ಮತವನ್ನು ತಿರುಗಿಸಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸಿತ್ತು. ಕೆಲ ಸಮಯ ಲಿಂಗಾಯತ ನಾಯಕರ ಸ್ಥಾನ ತುಂಬಲು ಪರದಾಡಿತ್ತು.
ಮುಂದಿನ ಚುನಾವಣೆಯಲ್ಲೂ ಅವರನ್ನೇ ಮುಂದಿಟ್ಟುಕೊಂಡು ದಲಿತರ ಮತಗಳನ್ನು ಸೆಳೆಯಬೇಕಾಗಿದೆ. ಹಾಗಾಗಿ ತಮ್ಮ ಮಕ್ಕಳನ್ನೇ ಅಖಾಡಕ್ಕಿಳಿಸಿದರೆ ಒಳಿತು ಎಂದು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ಉಳಿದ ಪಕ್ಷಗಳೇನೂ ಸುಮ್ಮನಿಲ್ಲ
ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರರನ್ನು ವರುಣಾದಿಂದ ಕಣಕ್ಕೆ ಇಳಿದರೆ ಅವರಿಗೆ ಪ್ರಬಲ ಪೈಪೋಟಿ ನೀಡುವ ವಿಚಾರದಲ್ಲಿ ಇತರ ಪಕ್ಷಗಳೇನೂ ಹಿಂದುಳಿದಿಲ್ಲ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಜೆಪಿಯಿಂದ ಸ್ಪರ್ಧಿಸಿ, ಭಾರೀ ಪೈಪೋಟಿ ನೀಡಿದ್ದ ಕಾ.ಪು.ಸಿದ್ಧಲಿಂಗಸ್ವಾಮಿ ಹಾಗೂ ಆಲನಹಳ್ಳಿ ಅಶೋಕ ಬಿಜೆಪಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಅಭಿಷೇಕ್ ಎಂಬುವವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಜೆಡಿಎಸ್ ನಿಂದ ಅಭಿಷೇಕ್ ಕಣಕ್ಕೆ
ಲಿಂಗಾಯತ ಸಮುದಾಯದ ಅಭಿಷೇಕ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದವರು. ಸದ್ಯ ಮುಖ್ಯಮಂತ್ರಿ ಮಗನ ವಿರುದ್ಧ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ. ತಳಮಟ್ಟದ ರಾಜಕಾರಣ ತಿಳಿಯದ ಅಭಿಷೇಕ್ ಕುರಿತು ಕ್ಷೇತ್ರದಲ್ಲಿ ಅಷ್ಟೊಂದು ಒಲವು ಇದ್ದಂತೆ ಕಾಣುವುದಿಲ್ಲ. ಇತ್ತ ಬಿಜೆಪಿಯಿಂದ ಸಿದ್ದಲಿಂಗಸ್ವಾಮಿ ಕಣಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ಹಲವು ಮುಖಂಡರು ಕೂಡ ಟಿಕೆಟ್ ಕೇಳುತ್ತಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಸದ್ಯ ಸಿದ್ದಲಿಂಗಸ್ವಾಮಿ ಅವರೇ ಲಿಂಗಾಯತ ಸಮುದಾಯದಲ್ಲಿ ಪ್ರಬಲ ನಾಯಕರು. ಅವರೇ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ.
ಎಚ್ ಸಿ ಮಹದೇವಪ್ಪ ಹೊಸ ಕ್ಷೇತ್ರ ಹುಡುಕುತ್ತಿದ್ದಾರೆ
ತಿ ನರಸೀಪುರದಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕಳೆದ ಬಾರಿ ಕೇವಲ 300 ಮತಗಳ ಅಂತರದ ಗೆಲುವು ಸಿಕ್ಕಿತ್ತು. ಜೆಡಿಎಸ್ ನ ಸುಂದರೇಶ್ ಪ್ರಬಲ ಪೈಪೋಟಿ ನೀಡಿದ್ದರು. ಅವರ ನಿಧನದ ನಂತರ ಇಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ. ಅಷ್ಟೇ ಅಲ್ಲ, ಅಭ್ಯರ್ಥಿ ಘೋಷಣೆಯಾದ ಬಳಿಕ ಪಕ್ಷದಲ್ಲೇ ಒಳಜಗಳ ಶುರುವಿಟ್ಟುಕೊಂಡಿದೆ. ಬಿಜೆಪಿಯಿಂದ ಹಿಂದೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಾ.ಭಾರತೀಶಂಕರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮಹದೇವಪ್ಪ ತಮ್ಮ ಮಗ ಸುನಿಲ್ ಬೋಸ್ ಗೆ ಈ ಕ್ಷೇತ್ರ ಬಿಟ್ಟುಕೊಡಲು ತಯಾರಾಗಿ, ತಾವು ಬೇರೆ ಕ್ಷೇತ್ರ ಹುಡುಕಿಕೊಳ್ಳುತ್ತಿರುವುದು ತಿಳಿದಿರುವ ಸಂಗತಿಯೇ.
ಯಾರಿಗೆ ಸಿಗಬಹುದು ಮತದಾರರ ಆಶೀರ್ವಾದ?
ದಲಿತ ಮತಗಳನ್ನು ಸೆಳೆದು ಮಕ್ಕಳನ್ನು ತಮ್ಮ ಗೆಲ್ಲಿಸಬೇಕು ಎಂಬ ಆಲೋಚನೆಯಲ್ಲಿರುವ ನಾಯಕರು ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ. ಇದಕ್ಕೆ ತಕ್ಕಂತೆ ಸುನೀಲ್ ಬೋಸ್ ಹಾಗೂ ಯತೀಂದ್ರ ಕೂಡ ತಮಗೆ ಕ್ಷೇತ್ರಗಳಲ್ಲಿ ಮಿಂಚಿನಂತೆ ಸಂಚಾರ ಆರಂಭಿಸಿಯೂ ಆಗಿದೆ. ಆದರೆ ನಿನ್ನೆ - ಮೊನ್ನೆ ಬಂದ ಈ ಸ್ವಘೋಷಿತ ನಾಯಕರು ಹೇಗೆ ಗೆಲ್ಲುತ್ತಾರೆ ಎಂಬ ಮಾತು ಸಹ ವಲಯದಲ್ಲಿ ಕೇಳುತ್ತಿದೆ. ಮತದಾರರು ಯಾರಿಗೆ ಬಳುವಳಿ ನೀಡಲಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆ.