ಒಂದೇ ವೇದಿಕೆ ಹಂಚಿಕೊಂಡರೂ ಮಾತನಾಡದ ಸಿದ್ದು-ಎಚ್.ವಿಶ್ವನಾಥ್
ಮೈಸೂರು, ಸೆಪ್ಟೆಂಬರ್.24: ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಒಂದೇ ಸಮುದಾಯದ ಇಬ್ಬರು ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್.ವಿಶ್ವನಾಥ್ ಒಂದೇ ವೇದಿಕೆಯನ್ನು ಹಂಚಿಕೊಂಡರೂ ಇಬ್ಬರು ಪರಸ್ಪರ ಮಾತನಾಡದೆ ಬದ್ಧ ವೈರಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕೆ.ಆರ್.ನಗರದ ಕಾಗಿನೆಲೆ ಕನಕಗುರು ಪೀಠದ ಆವರಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಸಮುದಾಯ ಭವನ ಉದ್ಘಾಟನೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಸಿದ್ದು, ಪರಂ, ಡಿಕೆಶಿ ಬೆಂಬಲಿಗರಿಗೆ ಮಾತ್ರ ಅಧಿಕಾರ: ನಿಷ್ಠರ ಆಕ್ರೋಶ
ಈ ಕಾರ್ಯಕ್ರಮದ ವೇದಿಕೆಯನ್ನು ಇಬ್ಬರು ಹಂಚಿಕೊಳ್ಳುತ್ತಿರುವುದು ತಿಳಿದು ಅವರು ಹೇಗೆ ವರ್ತಿಸಬಹುದು ಎಂದು ಜನ ಕುತೂಹಲದಿಂದ ಕಾದಿದ್ದರು. ಹೀಗೆ ಕಾದವರಿಗೆ ಕೊನೆಗೂ ಅವರಿಬ್ಬರು ಎರಡು ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿದ್ದರೂ ಒಬ್ಬರನೊಬ್ಬರು ನೋಡಿಕೊಳ್ಳದೆ ಇಡೀ ಕಾರ್ಯಕ್ರಮವನ್ನು ಮುಗಿಸಿ ಹೋಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಒಂದೇ ಪಕ್ಷದಲ್ಲಿದ್ದು ಸಿದ್ದರಾಮಯ್ಯ ಸಿಎಂ ಆದ ಬಳಿಕ ರಾಜಕೀಯವಾಗಿ ಪರಸ್ಪರ ದೂರವಾದ ಎಚ್.ವಿಶ್ವನಾಥ್ ಬಳಿಕ ಜೆಡಿಎಸ್ ಸೇರಿ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ವಿರುದ್ಧ ಭಾರೀ ಆರೋಪ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಮನೆಗೆ ಕರೆದು ಡಿ.ಕೆ.ಶಿವಕುಮಾರ್ಗೆ ಬುದ್ಧಿವಾದ ಹೇಳಿದ ಸಿದ್ದರಾಮಯ್ಯ
ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಸೋಲಲು ಎಚ್.ವಿಶ್ವನಾಥ್ ಅವರು ಕೂಡ ಕಾರಣರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಬರುವ ಮೊದಲೇ ಎಚ್.ವಿಶ್ವನಾಥ್ ಅವರು ಮಾತು ಮುಗಿಸಿ ಬಿಟ್ಟಿದ್ದರು.
ಆ ನಂತರ ಆಗಮಿಸಿದ ಸಿದ್ದರಾಮಯ್ಯ ಅವರು ಮಾತನಾಡಿ ಎಚ್.ವಿಶ್ವನಾಥ್ ಅವರಿಗೆ ಟಾಂಗ್ ಕೊಡುವುದನ್ನು ಮರೆಯಲಿಲ್ಲ. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜನಪರ ಕೆಲಸ ಮಾಡಿದ್ದರೂ ಅದರ ಬಗ್ಗೆ ವಿಪಕ್ಷಗಳ ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ.
ಪಕ್ಷ ರಾಜ್ಯದಲ್ಲಿ ಸೋತಿದ್ದಕ್ಕೆ ನನಗೆ ಬೇಸರವಿಲ್ಲ, ಜನತೆಗೆ ಉತ್ತಮ ಕಾರ್ಯಕ್ರಮ ನೀಡಿದ ತೃಪ್ತಿಯಿದೆ. ಇಲ್ಲಿ ಅಧಿಕಾರ ಶಾಶ್ವತವಲ್ಲ. ಕಾಲ ಚಕ್ರ ಉರುಳಿದಂತೆ, ಮೇಲಿದ್ದವರು ಕೆಳಗೆ ಇಳಿಯಲೇ ಬೇಕು ಕೆಳಗಿದ್ದವರು ಮೇಲೇರಬೇಕು. ನಾನು ಸದಾ ಪರಸ್ಪರ ಜಾತಿಗಳನ್ನು ಜೋಡಿಸುವ ಕೆಲಸವನ್ನು ಮಾಡಿದ್ದೇನೆ. ಒಡೆಯುವ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಗಮನಸೆಳೆದರು
ಎಚ್. ವಿಶ್ವನಾಥ್ ಸಾಹಿತ್ಯ ಪ್ರೀತಿಯ ಬಗ್ಗೆ ನಿಮಗೆಷ್ಟು ಗೊತ್ತು?
ಸಿದ್ದರಾಮಯ್ಯ ಅವರ ಮಾತು ಕೇಳುತ್ತಾ ವಿಶ್ವನಾಥ್ ತಮ್ಮ ಪಾಡಿಗೆ ಆಸೀನರಾಗಿದ್ದರಲ್ಲದೆ, ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಪಾಡಿಗೆ ತಾವು ಎಂಬಂತೆ ಹೊರಟು ಹೋದರು.